ದೇಶದಲ್ಲಿ ವೈದ್ಯರ ಕೊರತೆ ಎದುರಾಗುವ ಸಾಧ್ಯತೆ| ಕೊರೋನಾ ಸಮರಕ್ಕೆ 20000 ಎನ್‌ಆರ್‌ಐ ವೈದ್ಯರ ಬಳಕೆ ಸಾಧ್ಯತೆ|

ನವದೆಹಲಿ(ಮಾ.28): ದೇಶಾದ್ಯಂತ ಕೊರೋನಾ ಪ್ರಕರಣಗಳ ಸಂಖ್ಯೆ ವ್ಯಾಪಕವಾಗುತ್ತಿರುವ ಬೆನ್ನಲ್ಲೇ, ದೇಶದಲ್ಲಿ ವೈದ್ಯರ ಕೊರತೆ ಎದುರಾಗುವ ಸಾಧ್ಯತೆಗಳು ದಟ್ಟವಾಗಿದೆ. ಹೀಗಾಗಿ, ವಿದೇಶದಲ್ಲಿರುವ ಭಾರತೀಯ ಮೂಲದ 20 ಸಾವಿರ ವೈದ್ಯರು ಹಾಗೂ 1000 ಮಂದಿ ತಜ್ಞರು ಭಾರತಕ್ಕೆ ಮರಳಲು ಸಿದ್ಧರಾಗಿದ್ದಾರೆ. ಆದರೆ, ಅದಕ್ಕೂ ಮುನ್ನ ಎದುರಾಗಲಿರುವ ಪರೀಕ್ಷೆಯಿಂದ ತಮಗೆ ವಿನಾಯ್ತಿ ಕಲ್ಪಿಸುವಂತೆ ಅಖಿಲ ಭಾರತ ವಿದೇಶಿ ವೈದ್ಯಕೀಯ ಪದವೀಧರರ ಸಂಘಟನೆ(ಎಐಎಫ್‌ಎಂಜಿಎ) ಕೋರಿಕೊಂಡಿದೆ.

Add Asianetnews Kannada as a Preferred SourcegooglePreferred

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಎಐಎಪ್‌ಎಂಜಿಎ, ‘ಇಂಥದ್ದೇ ಪರಿಸ್ಥಿತಿ ಇಟಲಿ ಮತ್ತು ಬ್ರಿಟನ್‌ನಲ್ಲಿ ಎದುರಾದಾಗ, ಆ ರಾಷ್ಟ್ರಗಳು ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳನ್ನೇ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ನೇಮಕ ಮಾಡಿಕೊಂಡಿದ್ದವು. ಅದೇ ರೀತಿ ಭಾರತದಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗೆ ತಮ್ಮನ್ನು ಬಳಸಿಕೊಳ್ಳಬೇಕು’ ಎಂದು ಕೋರಿಕೊಂಡಿದೆ. ಅಲ್ಲದೆ, ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಏರಿಕೆಯಾದಲ್ಲಿ, ಎಂಬಿಬಿಎಸ್‌ ಪದವೀಧರರನ್ನಷ್ಟೇ ಅಲ್ಲದೆ, ವೈದ್ಯಕೀಯ, ಸರ್ಜರಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತಜ್ಞರಾಗಿರುವವರನ್ನು ಸೇವೆಗೆ ನಿಯೋಜಿಸಿಕೊಳ್ಳಬೇಕಾಗಲಿದೆ. ಇದಕ್ಕಾಗಿ ನಾವು ಮುಂಚಿತವಾಗಿಯೇ ಸಿದ್ಧರಾಗಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರಸ್ತುತ ಸಂದರ್ಭದಲ್ಲಿ ವಿದೇಶದಲ್ಲಿ ವೈದ್ಯಕೀಯ ಪೂರ್ಣಗೊಳಿಸಿದವರು ಭಾರತದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಲು ಅದಕ್ಕೂ ಮುನ್ನ ಭಾರತೀಯ ವೈದ್ಯಕೀಯ ಕೌನ್ಸಿಲ್‌ ಅಥವಾ ರಾಜ್ಯದ ವೈದ್ಯಕೀಯ ಕೌನ್ಸಿಲ್‌ನಿಂದ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು. ಈ ಪರೀಕ್ಷೆಯಿಂದ ವಿನಾಯ್ತಿ ನೀಡುವಂತೆ ಭಾರತೀಯ ಸಂಜಾತ ವೈದ್ಯರು ಕೋರುತ್ತಿದ್ದಾರೆ.