ವಲಸೆ ಕಾರ್ಮಿಕರಿಗೆ ಕೆಮಿಕಲ್ ಸ್ನಾನ: ಅಧಿಕಾರಿಗಳ ವರ್ತನೆಗೆ ತೀವ್ರ ಖಂಡನೆ!
ವಲಸೆ ಕಾರ್ಮಿಕರ ಮೇಲೆ ಸೋಂಕು ನಿವಾರಕ ಸಿಂಪಡಣೆ| - ಉತ್ತರಪ್ರದೇಶ ಅಧಿಕಾರಿಗಳ ವರ್ತನೆಗೆ ತೀವ್ರ ಖಂಡನೆ
ಬರೇಲಿ(ಮಾ.31): ಲಾಕ್ಡೌನ್ನಿಂದಾಗಿ ದೇಶದ ವಿವಿಧ ಭಾಗಗಳಿಂದ ರಾಜ್ಯಕ್ಕೆ ಮರಳಿದ ವಲಸೆ ಕಾರ್ಮಿಕರನ್ನು ಬೀದಿಯಲ್ಲಿ ಕೂರಿಸಿ, ಅವರ ಮೇಲೆ ಸೋಂಕು ನಿವಾರಕಗಳನ್ನು ಸಿಂಪಡಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಸೋಮವಾರ ಬರೇಲಿಯಲ್ಲಿ ಕಾರ್ಮಿಕರನ್ನು ಸಾಲಾಗಿ ಕೂರಿಸಿ, ಕಣ್ಣು ಮುಚ್ಚಿಕೊಳ್ಳಲು ಹೇಳಿ ಅವರ ಮೇಲೆ ಸೋಂಕು ನಿವಾರಕಗಳನ್ನು ಸಿಂಪಡಿಸುವ ದೃಶ್ಯಗಳು ದಾಖಲಾಗಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ. ವಿಪಕ್ಷಗಳು ಸರ್ಕಾರದ ನಡೆಗೆ ಕೆಂಡ ಕಾರಿವೆ. ಅದರ ಬೆನ್ನಲ್ಲೇ ಘಟನೆ ಕುರಿತು ತನಿಖೆಗೆ ಜಿಲ್ಲಾಡಳಿತ ಆದೇಶಿಸಿದೆ. ಅಲ್ಲದೆ ಸೋಂಕು ನಿವಾರಕ ಸಿಂಪಡಣೆಗೆ ಸೂಚಿಸಿದ ಅಧಿಕಾರಿಗಳ ಅಮಾನತಿಗೆ ಆದೇಶಿಸಿದೆ.
ಗಡಿ ದಾಟಿದರೆ 14 ದಿನ ಲಾಕ್: ಜಿಲ್ಲೆ, ರಾಜ್ಯ ಗಡಿ ಪೂರ್ಣ ಮುಚ್ಚುವಂತೆ ಸೂಚನೆ!
ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾಡಳಿತ, ಸೋಂಕು ನಿವಾರಣೆಗಾಗಿ ಕ್ಲೋರಿನ್ ಬಳಸಲಾಗಿತ್ತು. ಇದು ಇಡೀ ವಿಶ್ವದಲ್ಲಿ ಜಾರಿಯಲ್ಲಿರುವ ಪದ್ಧತಿ. ಆದರೆ ಸಿಂಪಡಣೆಗೆ ರೀತಿ ಸರಿಯಾಗಿರಲಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಸಲಾಗಿದೆ ಎಂದು ಹೇಳಿದೆ.