ಕೊರೋನಾ ವೈರಸ್‌ ನಿವಾರಣೆಗಾಗಿ ಸಂಜೆಯೊಳಗೆ ಭಕ್ತರೆಲ್ಲರೂ ಚಹಾಕ್ಕೆ ಬೆಲ್ಲ ಮತ್ತು ಅರಿಶಿಣ ಹುಡಿ ಹಾಕಿ ಕುಡಿಯಬೇಕು, ಆಗ ನಾನು ಕೊರೋನಾ ವೈರಸ್‌ ಯಾರಿಗೂ ಹಾನಿಯಾಗದಂತೆ ತಡೆಯುತ್ತೇನೆ ಎಂದು ಕಾಪು ಮಾರಿಯಮ್ಮನ ಅಪ್ಪಣೆಯಾಗಿದೆ ಎಂಬ ಸುದ್ದಿಯೊಂದು ಮಂಗಳೂರಿನಲ್ಲಿ ಹರಿದಾಡಿದೆ. ಏನಿದು ಸುದ್ದಿ..? ಇಲ್ಲಿ ಓದಿ. 

ಮಂಗಳೂರು(ಮಾ.25): ಕೊರೋನಾ ವೈರಸ್‌ ನಿವಾರಣೆಗಾಗಿ ಸಂಜೆಯೊಳಗೆ ಭಕ್ತರೆಲ್ಲರೂ ಚಹಾಕ್ಕೆ ಬೆಲ್ಲ ಮತ್ತು ಅರಿಶಿಣ ಹುಡಿ ಹಾಕಿ ಕುಡಿಯಬೇಕು, ಆಗ ನಾನು ಕೊರೋನಾ ವೈರಸ್‌ ಯಾರಿಗೂ ಹಾನಿಯಾಗದಂತೆ ತಡೆಯುತ್ತೇನೆ ಎಂದು ಕಾಪು ಮಾರಿಯಮ್ಮನ ಅಪ್ಪಣೆಯಾಗಿದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Add Asianetnews Kannada as a Preferred SourcegooglePreferred

"

ಮಂಗಳವಾರ ಕಾಪುವಿನ ಪ್ರಸಿದ್ಧ 3 ಮಾರಿಗುಡಿಗಳಲ್ಲಿ ಸುಗ್ಗಿ ಮಾರಿಪೂಜೆ ನಡೆಯಿತು. ಈ ಸಂದರ್ಭದಲ್ಲಿ ದೇವಿಯ ದರ್ಶನ ಸೇವೆ ನಡೆದು ತಾಯಿ ಈ ರೀತಿ ಅಪ್ಪಣೆ ಕೊಡಿಸಿದಳು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

'ಭಾನುವಾರ ಇಡೀ ದೇಶಕ್ಕೇ ಮದ್ದು ಸಿಂಪಡಿಸ್ತಾರಂತೆ ಮೋದಿ'..!

ಆದರೆ ಮಂಗಳವಾರ ಮಧ್ಯಾಹ್ನ ಯಾವುದೇ ದರ್ಶನ ಸೇವೆಯೇ ಇರಲಿಲ್ಲ, ಆದ್ದರಿಂದ ಮಾರಿಯಮ್ಮ ಕೊರೋನಾ ವಿಚಾರವಾಗಿ ಇಂತಹ ಅಪ್ಪಣೆ ಕೊಡಿಸಿದಳು ಎಂಬುದು ಸಂಪೂರ್ಣ ಸುಳ್ಳು ಸುದ್ದಿ, ಯಾರೋ ಕಿಡಿಗೇಡಿಗಳು ಈ ವದಂತಿಯನ್ನು ಹುಟ್ಟು ಹಾಕಿದ್ದಾರೆ ಭಕ್ತರು ಇದನ್ನು ನಂಬಬಾರದು ಎಂದು ಮೂರು ಮಾರಿಗುಡಿಗಳ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಮಾತ್ರವಲ್ಲದೆ ಈ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ದೂರು ನೀಡಲು ನೀಡಿದ್ದಾರೆ.

ಸರಳ ಮಾರಿಪೂಜೆ: ಕಾಪು ಮಾರಿ ಜಾತ್ರೆ ಪೂಜೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿ ಕುರಿಕೋಳಿಗಳನ್ನು ಬಲಿ ನೀಡುತ್ತಾರೆ. ಆದರೆ ಈ ಬಾರಿ ಕೊರೋನಾ ವೈರಸ್‌ ಹರಡುವುದನ್ನು ತಡೆಯುವುದಕ್ಕಾಗಿ ಜಿಲ್ಲಾಡಶತವು ಮಾರಿ ಜಾತ್ರೆಯನ್ನು ರದ್ದುಗೊಳಿಸಿತ್ತು. ಅದರಂತೆ ಮಂಗಳವಾರ ಯಾವುದೇ ರೀತಿಯ ಆಚರಣೆಗಳು ನಡೆದಿಲ್ಲ, ಮಾರಿಗುಡಿಗಳಲ್ಲಿ ಅರ್ಚಕರು ಮತ್ತು ಆಡಳಿತ ವರ್ಗದವರು ಸೇರಿ ಸರಳವಾಗಿ ಮಾರಿ ಪೂಜೆಯನ್ನು ನಡೆಸಿದ್ದಾರೆ.

ಸರ್ಕಾರಿ ಸೇವೆ ಸ್ಥಗಿತ: ತುರ್ತು ಸೇವೆಗೆ ಮಾತ್ರ ಅವಕಾಶ

ಜನ ಸೇರದಂತೆ ಪೊಲೀಸ್‌ ಬಂದೋಬಸ್ತು ಮಾಡಲಾಗಿತ್ತು, ದೇವಸ್ಥಾನದೊಳಗೆ ಆಪೇಕ್ಷಿತ ಅರ್ಚಕ, ಸಿಬ್ಬಂದಿ, ವಾದ್ಯ, ಸಿಬ್ಬಂದಿಗೆ ಬ್ಯಾಡ್ಜ್ ನೀಡಲಾಗಿದ್ದು, ಅವರನ್ನಷ್ಟೇ ಒಳಗೆ ಬಿಡಲಾಗಿತ್ತು. ಸ್ವತಃ ಜಿಲ್ಲಾಧಿಕಾರಿ ಜಗದೀಶ್‌ ಅವರು ದೇವಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.