ನೈಜ ಘಟನೆ ಆಧರಿತ ದಿ ಕೇರಳ ಸ್ಟೋರಿ ಹಲವರ ನಿದ್ದೆಗೆಡಿಸಿರೋ ಬೆನ್ನಲ್ಲೇ ಇದೇ ತಂಡದಿಂದ ಮತ್ತೊಂದು ಚಿತ್ರದ ಘೋಷಣೆಯಾಗಿದೆ. ಏನದು?  

ಆಸೀಫಾ ಎಂಬ ಯುವತಿ ರೂಮ್​ಮೇಟ್ಸ್​ ನರ್ಸಿಂಗ್​ ಕಲಿಯಲು ಪ್ರತಿಷ್ಠಿತ ಕಾಲೇಜಿಗೆ ಸೇರಿಕೊಂಡಿರೋ ಶಾಲಿನಿ ಉನ್ನಿಕೃಷ್ಣನ್ (Shalini Unnikrishnan), ಗೀತಾಂಜಲಿ, ನಿಮ್ಹಾ ಮ್ಯಾಥ್ಯುಸ್. ಆಸೀಫಾ ಈ ಮೂವರು ಹುಡುಗಿಯರ ಬ್ರೇನ್ ವಾಷ್ ಮಾಡುತ್ತಾಳೆ. ಈ ಮೂವರೂ ಆಕೆಯ ರೂಮ್ ​ಮೇಟ್ಸ್​. ಇಸ್ಲಾಂ ಬಗ್ಗೆ ಬ್ರೇನ್​ ವಾಷ್​ ಮಾಡಿ ಕೊನೆಗೆ ಅವಳದ್ದೇ ಧರ್ಮಕ್ಕೆ ಸೇರಿಸ್ತಾಳೆ. ಅವರ ಬದುಕನ್ನು ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿ ನಾಶ ಮಾಡುತ್ತಾಳೆ, ಐಸಿಸ್​ ಉಗ್ರ ಸಂಘಟನೆಗೆ ಸೇರಿಸುತ್ತಾಳೆ... ಈ ಸತ್ಯ ಘಟನೆಯನ್ನು ಹೊಂದಿರುವ ದಿ ಕೇರಳ ಸ್ಟೋರಿ ಸಿನಿಮಾ ಸೃಷ್ಟಿಸಿದ ವಿವಾದ ಅಷ್ಟಿಷ್ಟಲ್ಲ. ಈ ನೈಜ ಘಟನೆಯ ಸಿನಿಮಾವನ್ನು ನೋಡಿ ಸಹಿಸಿಕೊಳ್ಳಲು ಆಗದ ಒಂದು ವರ್ಗ ಭಾರಿ ಪ್ರತಿರೋಧ ಮಾಡುತ್ತಿರುವ ನಡುವೆಯೇ ಚಿತ್ರ ಇದಾಗಲೇ ಬ್ಲಾಕ್​ಬಸ್ಟರ್​ ಎನಿಸಿಕೊಂಡಿದೆ. ಹಲವಾರು ದಾಖಲೆಗಳನ್ನು ಉಡೀಸ್​ ಮಾಡಿದೆ. ಕಾಂಗ್ರೆಸ್​, ತೃಣಮೂಲ ಕಾಂಗ್ರೆಸ್​, ಕಮ್ಯೂನಿಸ್ಟ್​ ಪಕ್ಷಗಳು ಈ ಭಯಾನಕ ಸತ್ಯ ಘಟನೆಯ ಚಿತ್ರವನ್ನು ಸಹಿಸಿಕೊಳ್ಳದೇ ತಮ್ಮ ರಾಜ್ಯಗಳಲ್ಲಿ ಚಿತ್ರಗಳನ್ನು ಬ್ಯಾನ್​ ಮಾಡಿದ್ದರೂ, ದಿ ಕೇರಳ ಸ್ಟೋರಿ ಭರ್ಜರಿ ಕಲೆಕ್ಷನ್ ಮಾಡಿದೆ. ಒಂದು ವರ್ಗದಿಂದ ಭಾರಿ ಪ್ರತಿರೋಧದ ನಡುವೆಯೂ ದಿ ಕೇರಳ ಸ್ಟೋರಿ (The Kerala Story) ಸಕತ್​ ಸುದ್ದಿ ಮಾಡಿದೆ, ಇನ್ನೂ ಸದ್ದು ಮಾಡುತ್ತಲೇ ಇದೆ.

 ಈ ಚಿತ್ರವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದು, ವಿಪುಲ್ ಅಮೃತಲಾಲ್ ಶಾ ನಿರ್ಮಿಸಿದ್ದಾರೆ. ಅದಾ ಶರ್ಮಾ (Adah Sharma) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಾಗಲೇ ಚಿತ್ರ ತಂಡದ ಬಹುತೇಕ ಎಲ್ಲರಿಗೂ ಕೊಲೆ ಬೆದರಿಕೆ ಬಂದಿದ್ದರೂ, ತಂಡ ಜಗ್ಗದೇ ಮುನ್ನುಗ್ಗುತ್ತಿದೆ. ಚಿತ್ರವು 200 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಹೊಸ ದಾಖಲೆಗಳನ್ನು ಮಾಡಿದೆದಿ ಕೇರಳ ಸ್ಟೋರಿಯಂತೆಯೇ ಈಗ ಮತ್ತೊಂದು ಶಾಕಿಂಗ್​ ಕೊಡಲು ಹೊರಟಿದೆ ಈ ತಂಡ. ಅದೂ ನೈಜ ಘಟನೆ ಎಂದು ಹೇಳಲಾಗುತ್ತಿದೆ.

ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದ ದಿ ಕೇರಳ ಸ್ಟೋರಿಗೆ OTT ’ಷಡ್ಯಂತ್ರ’ದ ಶಾಕ್‌!

ಹೌದು. ದಿ ಕೇರಳ ಸ್ಟೋರಿ ತಂಡದಿಂದ ಹೊಸ ಚಿತ್ರದೊಂದಿಗೆ ತೆರೆ ಮೇಲೆ ಬರುತ್ತಿದೆ. ನೈಜ ಕಥೆಯನ್ನು ಆಧರಿಸಿದ ಇದರ ಹೆಸರು 'ಬಸ್ತರ್' (Bastar) ಎನ್ನಲಾಗಿದೆ. ಇದರ ಪೋಸ್ಟರ್ ಇದಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಪುಲ್ ಮತ್ತು ಅಮೃತಲಾಲ್ ಜೋಡಿಯ ಈ ಚಿತ್ರ ಮುಂದಿನ ವರ್ಷ ಏಪ್ರಿಲ್ 5 ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ. ಚಿತ್ರದ ತಾರಾಗಣದ ಬಗ್ಗೆ ಸಿನಿಮಾ ತಂಡ ಇನ್ನೂ ಬಹಿರಂಗಪಡಿಸಲಾಗಿಲ್ಲ, ಆದರೆ ಮತ್ತೊಮ್ಮೆ ಅದಾ ಶರ್ಮಾ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಚಿತ್ರದ ಪೋಸ್ಟರ್‌ನಲ್ಲಿ 'ಬಸ್ತರ್' ಅಕ್ಷರ ಕೆಂಪು ಬಣ್ಣದ ಫಾಂಟ್‌ಗಳಲ್ಲಿ ಕಾಣಿಸಿಕೊಂಡಿದೆ. ಆದ್ದರಿಂದ ಇದು ಕೂಡ ದಿ ಕೇರಳ ಸ್ಟೋರಿ ರೀತಿಯಲ್ಲಿಯೇ ಇರುವ ನಿರೀಕ್ಷೆ ಇದೆ. ಅಷ್ಟೇ ಅಲ್ಲದೇ ಸಬ್​ ಟೈಟಲ್​ನಲ್ಲಿ ‘ದೇಶವನ್ನೇ ಬಿರುಗಾಳಿ ಎಬ್ಬಿಸಲಿರುವ ಗುಪ್ತ ಸತ್ಯ’ ಎಂದು ಬರೆಯಲಾಗಿದೆ. ‘ಬಸ್ತರ್​’ ಸಿನಿಮಾದಲ್ಲಿ ಯಾವ ನೈಜ ಘಟನೆಯನ್ನು ಜನರ ಎದುರು ತರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. 

ಈ ನಡುವೆಯೇ, ಕೇರಳ ಸ್ಟೋರಿ ನೋಡಿದ ಬಳಿಕ ಕೆಲವು ಹೆಣ್ಣು ಮುಕ್ಕಳು ಮುಂದೆ ಬಂದು ಮತಾಂತರಗೊಂಡ ಬಳಿಕ ತಮಗಾಗಿರುವ ನೋವುಗಳನ್ನು ಮಾಧ್ಯಮಗಳ ಮುಂದೆ ತೋಡಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಬರಿ ಕಥೆಯಲ್ಲ, ಬದಲಿಗೆ ತಮಗೂ ಈ ಕರಾಳ ಅನುಭವವಾಗಿದೆ ಎಂದು ಚಿತ್ರ ಬಿಡುಗಡೆಯ ಬಳಿಕ ಕೆಲವು ಯುವತಿಯರು ಹೇಳಿಕೊಳ್ಳುತ್ತಿದ್ದಾರೆ.

The Kerala Story: ಮತಾಂತರದ ರೋಲ್​ ಒಪ್ಪಿದ್ದೇಕೆ ಎಂಬ ಗುಟ್ಟು ಬಿಚ್ಚಿಟ್ಟ 'ಆಸಿಫಾ'