ಅಕ್ಕಿನೇನಿ ನಾಗಾರ್ಜುನ ಅವರ ಪುತ್ರ ಅಖಿಲ್ ಅವರು ಝೈನಾಬ್ ರಾವಡ್ಜಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಾಗಾರ್ಜುನ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದು, ಯುವ ಜೋಡಿಗೆ ಶುಭ ಹಾರೈಸುವಂತೆ ಕೇಳಿದ್ದಾರೆ. ನಾಗ ಚೈತನ್ಯ ಅವರ ಎರಡನೇ ಮದುವೆಗೆ ಮುನ್ನವೇ ಅಖಿಲ್ ನಿಶ್ಚಿತಾರ್ಥ ನೆರವೇರಿದೆ.

ತೆಲುಗು ಚಿತ್ರರಂಗದ ಸ್ಟಾರ್ ನಟ ಹಾಗೂ ಬಿಗ್ ಬಾಸ್ ತೆಲುಗು ನಿರೂಪಕ ಅಕ್ಕಿನೇನಿ ನಾಗಾರ್ಜುನ ಅವರು ತಮ್ಮ 2ನೇ ಮಗ ಅಖಿಲ್‌ಗೂ ಗುಪ್ತವಾಗಿ ವಿವಾಹ ನಿಶ್ಚಿತಾರ್ಥ ನೆರವೇರಿಸಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಅಖಿಲ್‌ ಜೊತೆಗೆ ಝೈನಾಬ್ ರಾವಡ್ಜಿ ಅವರು ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ತೆಲುಗು ಚಿತ್ರರಂಗದ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಅವರು ತಮ್ಮ ಸಿನಿ ಜೀವನದಲ್ಲಿ ಎಲ್ಲಿಯೂ ವಿವಾದ ಮಾಡಿಕೊಂಡವರಲ್ಲ. ಆದರೆ, ಅವರ ಹಿರಿಯ ಪುತ್ರ ನಾಗ ಚೈತನ್ಯ ಅವರು ಪ್ರೀತಿಸಿದ ಸಮಂತಾ ರುಥ್ ಪ್ರಭು ಅವರನ್ನು ಮದುವೆ ಮಾಡಿಕೊಟ್ಟ ನಂತರ ಒಂದೊಂದೇ ವಿವಾದಗಳು ಸುತ್ತಿಕೊಳ್ಳುತ್ತಿವೆ. ನಾಗ ಚೈತನ್ಯ ಅವರು ಮೊದಲ ಪತ್ನಿ ಸಮಂತಾಗೆ ಡಿವೋರ್ಸ್ ನೀಡಿ ದೂರವಾಗಿದ್ದಾರೆ. ಇದಾದ ನಂತರ ನಟಿ ಶೋಭಿತಾ ಧೂಲಿಪಾಲ ಅವರನ್ನು ಪ್ರೀತಿಸಿ ಅವರನ್ನು ಮದುವೆ ಮಾಡಿಕೊಳ್ಳುವುದಕ್ಕೆ ಕುಟುಂಬಕ್ಕೆ ಸೀಮಿತವಾಗಿ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಾರೆ. ಇದೀಗ ಅಣ್ಣನ ಮದುವೆಗೂ ಮುನ್ನವೇ ತಮ್ಮ ಅಖಿಲ್ ಕೂಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅಕ್ಕಿನೇನಿ ನಾಗಾರ್ಜುನ ಅವರು, 'ನಮ್ಮ ಮಗನ ನಿಶ್ಚಿತಾರ್ಥವನ್ನು ಘೋಷಿಸಲು ನಮಗೆ ಸಂತೋಷವಾಗುತ್ತಿದೆ. ಅಖಿಲ್ ಅಕ್ಕಿನೇನಿ ಹಾಗೂ ನಮ್ಮ ಸೊಸೆಗೆ ಝೈನಾಬ್ ರಾವಡ್ಜಿ ಅವರ ನಿಶ್ಚಿತಾರ್ಥವನ್ನು ನೆರವೇರಿಸಿದ್ದೇವೆ. ಝೈನಾಬ್ ಅವರನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸುತ್ತಿರುವುದಕ್ಕೆ ಅತ್ಯಂತ ಸಂತಸವಾಗುತ್ತಿದೆ. ಯುವ ದಂಪತಿಗಳನ್ನು ಅಭಿನಂದಿಸಲು ದಯವಿಟ್ಟು ನಮ್ಮೊಂದಿಗೆ ಸೇರಿ ಮತ್ತು ಅವರಿಗೆ ಪ್ರೀತಿ, ಸಂತೋಷ ಮತ್ತು ನಿಮ್ಮ ಆಶೀರ್ವಾದ ನೀಡಿ ಹಾರೈಸಬೇಕು' ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕಂಗುವಾದಿಂದ ಕಂಗಾಲಾದ ಬೆನ್ನಲ್ಲೇ ಮೂಕಾಂಬಿಕಾ ಮೊರೆ ಹೋದ ನಟ ಸೂರ್ಯ ದಂಪತಿ!

ಇನ್ನು ನಾಗಾರ್ಜುನ ಅವರ ಹಿರಿಯ ಮಗ ನಾಗ ಚೈತನ್ಯ ಹಾಗೂ ಶೋಭಿತಾ ಧೂಲಿಪಾಲ ಅವರ ಮದುವೆಯನ್ನು ಇದೇ ಡಿ.4ರಂದು ಅದ್ಧೂರಿಯಾಗಿ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೈದರಾಬಾದ್‌ನ ಅನ್ನಪೂರ್ಣ ಸ್ಟೂಡಿಯೋದಲ್ಲಿ ಇವರಿಬ್ಬರ ಮದುವೆ ಮಾಡಲು ಕುಟುಂಬದಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿರುವ ನಡುವೆಯೇ ಇದೀಗ ಅಖಿಲ್‌ಗೂ ಝೈನಾಬ್‌ಗೂ ವಿವಾಹ ನಿಶ್ಚಿತಾರ್ಥ ಮಾಡಿ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಘೋಷಣೆಯ ನಂತರ ಇವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಎಂಗೇಜ್‌ಮೆಂಟ್ ಮಾಡಿಕೊಂಡು ಮುರಿದುಕೊಂಡಿದ್ದ ಅಖಿಲ್: ಅಖಿಲ್ ಅಕ್ಕಿನೇನಿ ಅವರು 2017ರಲ್ಲಿ ಹೈದರಾಬಾದ್‌ನ ಪ್ರತಿಷ್ಠಿತ ಉದ್ಯಮಿ ಜಿವಿಕೆ ರೆಡ್ಡಿ ಅವರ ಮೊಮ್ಮಗಳು ಶ್ರಿಯಾ ಭೂಪಾಲ್ ಅವರೊಂದಿಗೆ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು. ಇನ್ನೇನು ಎರಡೂ ಕುಟುಂಬದವರು ಸೇರಿಕೊಂಡು ಮದುವೆ ಮಾಡಬೇಕು ಎನ್ನುವಷ್ಟರಲ್ಲಿಯೇ ಶ್ರಿಯಾ ಮತ್ತು ಜಿವಿಕೆ ರೆಡ್ಡಿ ಅವರ ನಡುವೆ ವಿಮಾನ ನಿಲ್ದಾಣದಲ್ಲಿ ಜಗಳ ಮಾಡಿಕೊಂಡರು. ಇದಾದ ನಂತರ ಇಬ್ಬರನ್ನು ಒಗ್ಗೂಡಿಸಲು ಸ್ವತಃ ಜಿವಿಕೆ ರೆಡ್ಡಿ ಅವರೇ ಪ್ರಯತ್ನ ಮಾಡಿದರೂ ಸಫಲವಾಗಲಿಲ್ಲ. ಇದಾದ ನಂತರ ಶ್ರಿಯಾ ಅವರು ಬೇರೆ ಮದುವೆಯಾಗಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಇದೀಗ ಅಖಿಲ್ ಅವರು ಝೈನಾಬ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮದುವೆ ದಿನಾಂಕ ಯಾವಾಗ ಎಂಬುದು ಇನ್ನೂ ತಿಳಿದುಬಂದಿಲ್ಲ.

ಇದನ್ನೂ ಓದಿ: ಅನುಷಾ ಜೊತೆಗಿನ ಸಂಬಂಧ ಎಂಥದ್ದು? ಮದುವೆ ಮುರಿದು ಬಿದ್ದದ್ದು ಯಾಕೆ? ಬಿಗ್‌ಬಾಸ್‌ ಧರ್ಮ ಓಪನ್ ಮಾತು ಕೇಳಿ...