ದುಲ್ಖರ್ ಸಲ್ಮಾನ್ ಅನ್ನೋ ಸುರಸುಂದರಾಂಗ ಯಾರಿಗೆ ಗೊತ್ತಿಲ್ಲ. ಮಲೆಯಾಳಂ ಸಿನಿಮಾದ ಈ ಸೂಪರ್ ಸ್ಟಾರ್ ಕನ್ನಡಕ್ಕೂ ಕನೆಕ್ಟ್ ಆಗ್ತಾರೆ. ಅವರ ಪರ್ಸನಲ್ ಲೈಫ್ ಬಗ್ಗೆ ಇಂಟೆರೆಸ್ಟಿಂಗ್ ಸ್ಟೋರಿ ಇಲ್ಲಿದೆ. 

ಮಾಲಿವುಡ್‌ನಲ್ಲೀಗ ದುಲ್ಖರ್ ಸಲ್ಮಾನ್ ಅಭಿನಯದ ‘ವರನೇ ಆವಶ್ಯಮುಂಡು’ ಸಿನಿಮಾದ್ದೇ ಮಾತು. ‘ವರನೇ ಅವಶ್ಯಮುಂಡು’ ಅಂದರೆ ‘ವರ ಬೇಕಾಗಿದ್ದಾನೆ’ ಅಂತ. ಈ ಸಿನಿಮಾದ ನಿರ್ಮಾಣದ ಹೊಣೆಯೂ ದುಲ್ಖರ್ ದೇ. ಈ ಸಿನಿಮಾದ ಒಂದು ಹಾಡಂತೂ ಸಖತ್ ವೈರಲ್ ಆಗಿದೆ. ನಟಿ ಶೋಭನಾ ಇರುವ 'ಮಲ್ಲಪೂವೆ’ ಅನ್ನುವ ಹಾಡು ರಿಲೀಸ್ ಆದ ಕೆಲವೇ ಸಮಯದಲ್ಲಿ ವೈರಲ್ ಆಗೋಯ್ತು. ಆರಂಭದಲ್ಲೇ ಈ ಹಾಡಿನ ಲಿಂಕ್ ಅನ್ನು ಸೋಷಲ್ ಮೀಡಿಯಾದಲ್ಲಿ ಶೇರ್ ಮಾಡಿ ಅಭಿಮಾನಿಗಳಿಗೆ ಖುಷಿ ಹಂಚಿರೋದು ದುಲ್ಖರ್. ತನ್ನ ನಟನೆ, ನಿರ್ಮಾಣದ ಚಿತ್ರದ ಹಾಡು ಈ ಪರಿ ಸಕ್ಸಸ್ ಆದ್ರೆ ಯಾರಿಗೆ ಖುಷಿ ಆಗದಿರುತ್ತೆ ಹೇಳಿ.

Add Asianetnews Kannada as a Preferred SourcegooglePreferred

ಇಷ್ಟನ್ನು ಬಿಟ್ಟರೆ ದುಲ್ಖರ್ ತುಸು ಸಂಕೋಚ ಸ್ವಭಾವದ ಮೃದು ವ್ಯಕ್ತಿ. ಸ್ನೇಹಮಯಿ ವ್ಯಕ್ತಿತ್ವ ಅವರದು. ವಿವಾದಗಳಿಂದ ಸದಾ ದೂರ. ತಾನಾಯ್ತು, ತನ್ನ ಸಿನಿಮಾ ಆಯ್ತು, ಅದು ಬಿಟ್ಟರೆ ತನ್ನ ಫ್ಯಾಮಿಲಿ ಆಯ್ತು ಅಂತಿರೋ ಪಕ್ಕಾ ಫ್ಯಾಮಿಲಿ ಮ್ಯಾನ್. ಒಂದು ಸಿನಿಮಾ ಶೂಟಿಂಗ್ ಮುಗಿದ ಮೇಲೆ ಒಂದಿಷ್ಟು ಕಾಲ ಹೆಂಡತಿ, ಮಕ್ಕಳಿಗೆ ಸಮಯ ಕೊಡ್ತಾರೆ. ಅವರ ಜೊತೆಗೆ ಜಾಲಿಯಾಗಿ ಟ್ರಿಪ್ ಹೋಗಿ ಬರುತ್ತಾರೆ. ಪುಟ್ಟ ಮಗಳ ಜೊತೆಗೆ ಆಟ ಆಡ್ತಾ ಕಾಲ ಕಳೆಯೋದು ಇವರಿಗಿಷ್ಟ. ಸಿನಿಮಾದಲ್ಲಿ ನಾಯಕಿಯರ ಜೊತೆಗೆ ಎಷ್ಟೇ ರೊಮ್ಯಾನ್ಸ್ ಮಾಡಿದರೂ ರಿಯಲ್ ಲೈಫ್‌ನಲ್ಲಿ ಇವರ ಕೊಂಡಾಟ ಪತ್ನಿಗೆ ಮಾತ್ರ ಸೀಮಿತ. ಈವರೆಗೆ ಯಾವ ಹೀರೋಯಿನ್ ಜೊತೆಗೂ ಇವರ ಹೆಸರು ಕಾಣಿಸಿಕೊಂಡಿದ್ದಿಲ್ಲ.

ಮೈಸೂರಿನಲ್ಲಿ ಯಶ್‌- ದುಲ್ಖರ್‌; Gymನಲ್ಲಿ ಮೀಟ್‌ ಆದ ಸ್ಟಾರ್‌ ನಟರು, ಮಾತನಾಡಿದ್ದು ಊಟದ ಬಗ್ಗೆ!.

ಈಗ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ವರನೇ ಅವಶ್ಯಮುಂಡು’ ಸಿನಿಮಾದ ಶೂಟಿಂಗ್ ಮುಗಿದ ಕೂಡಲೇ ದುಲ್ಖರ್ ಗಾಯಬ್! ಉಳಿದ ಕೆಲಸ ಮುಗಿದು ಪ್ರೊಮೋಶನ್ ವೇಳೆಗೆ ಮತ್ತೆ ಪ್ರತ್ಯಕ್ಷ. ಎಲ್ ಹೋಗಿದ್ರಿ ಅನ್ನೋದಕ್ಕೆ ಆನ್ಸರ್ ಇವರ ಎಫ್‌ಬಿ ಪೇಜಿನಲ್ಲಿತ್ತು. ಮುದ್ದಿನ ಪತ್ನಿ ಅಮಲ್ ಜೊತೆಗೆ ಲಂಡನ್‌ಗೆ ಹೋಗಿ ಅಲ್ಲಿ ನ್ಯೂ ಇಯರ್ ಸೆಲೆಬ್ರೇಶನ್ ಮುಗಿಸಿಕೊಂಡು ಬಂದರು. ಮಮ್ಮುಟ್ಟಿಯಂಥಾ ಸೂಪರ್ ಸ್ಟಾರ್‌ನ ಮಗನಾಗಿ, ತಾನೂ ಸೂಪರ್ ಸ್ಟಾರ್ ಆಗಿ ಮಿಂಚಿದರೂ ಇವರ ಮುಖದಲ್ಲಿ ಅಹಂಕಾರದ ಒಂದೆಳೆಯೂ ಕಾಣಲ್ಲ. ಬದಲಾಗಿ ಸಂಕೋಚದ ಸಣ್ಣ ನಗೆ ಇರುತ್ತಷ್ಟೇ.

ತಮಿಳು ನಟ ಅಜಿತ್‌ಗೆ ಅಪಘಾತ; ಅಭಿಮಾನಿಗಳಲ್ಲಿ ಆತಂಕ

ಹಾಗೆ ನೋಡಿದರೆ ದುಲ್ಖರ್ ಕನಸಲ್ಲೂ ಸಿನಿಮಾ ಫೀಲ್ಡ್‌ಗೆ ಬರುತ್ತೀನಿ ಅಂದುಕೊಂಡವರಲ್ಲ. ದುಲ್ಖರ್ ಓದಿದ್ದು ಎಂಬಿಎ. ಆರಂಭದಲ್ಲಿ ಬ್ಯುಸಿನೆಸ್‌ಗೆ ಸಂಬಂಧಿಸಿದ ವೃತ್ತಿಯನ್ನೇ ಮಾಡಿಕೊಂಡಿದ್ದರು. ಆದರೆ ಬರು ಬರುತ್ತಾ ಈ ಫೀಲ್ಡ್‌ನ ಏಕತಾನತೆ ಕಂಗೆಡಿಸಿ ಹಾಕಿತ್ತು. ಹೊಸತೇನಾದ್ರೂ ಮಾಡಬೇಕು ಅನ್ನುವ ತುಡಿತ ಹೆಚ್ಚಾಯ್ತು. ಅಪ್ಪನ ಇನ್‌ಫ್ಲುಯೆನ್ಸ್ ಇಲ್ಲದೇ ಸಿನಿಮಾ ರಂಗಕ್ಕೆ ಬಂದ ದುಲ್ಖರ್ ಮೊದಲ ಸಿನಿಮಾ 'ಸೆಕೆಂಡ್ ಶೋ’ನಲ್ಲಿ ಗ್ಯಾಂಗ್‌ಸ್ಟರ್ ಪಾತ್ರದ ಮೂಲಕ ಮಲೆಯಾಳ ಸಿನಿಮಾ ಇಂಡಸ್ಟ್ರಿಯ ಗಮನ ಸೆಳೆದರು. ಆಮೇಲೆ ಸಾಲು ಸಾಲು ಸಿನಿಮಾಗಳು ಬಂದವು. ಸೂಪರ್ ಡೂಪರ್ ಹಿಟ್ ಆದವು.

ಇಷ್ಟೆಲ್ಲ ಆದರೂ, 'ಅಯ್ಯೋ, ನಾನಿನ್ನೂ ಸಿನಿಮಾ ಫೀಲ್ಡ್ ಗೆ ಚಿಕ್ಕವ, ಮುಂದೆ ಕಲಿಯೋದು ಸಾಕಷ್ಟಿದೆ’ ಎಂದು ನಸು ನಗುತ್ತಾರೆ. ಪ್ರತೀ ಸಿನಿಮಾದಿಂದಲೂ ಕಲಿಯುತ್ತೇನೆ ಅನ್ನೋದೇ ಬಹುಶಃ ಇವರ ಈ ಲೆವೆಲ್‌ನ ಸಕ್ಸಸ್‌ಗೆ ಕಾರಣವೋ ಏನೋ. ದುಲ್ಖರ್ ತಾವು ಬೆಳೆಯೋ ಜೊತೆಗೆ ಓರೆಗೆಯ ನಟರನ್ನೂ ಪ್ರೋತ್ಸಾಹಿಸುವುದರಲ್ಲಿ ಎತ್ತಿದ ಕೈ. ರಕ್ಷಿತ್ ಶೆಟ್ಟಿ ಅವರ 'ಅವನೇ ಶ್ರೀಮನ್ನಾರಾಯಣ’ ಸಿನಿಮಾ ಬಂದಾಗ ಇನ್‌ಸ್ಟಾದಲ್ಲಿ ತುಂಬ ಹೃದಯದ ಸ್ವಾಗತ ಕೋರಿದ್ದರು. ರಾಕಿ ಭಾಯ್ ಯಶ್ ಜೊತೆಗೆ ಸೆಲ್ಫಿ ತೆಗೆದುಕೊಂಡು ಅದನ್ನು ಸೋಷಲ್ ಮೀಡಿಯಾದಲ್ಲಿ ಹಾಕಿ ಯಶ್ ಅವರ ಬಗ್ಗೆ ಒಳ್ಳೆಯ ಮಾತಾಡಿದ್ದರು. ಈ ಒಳ್ಳೆಯತನದ ಕಾರಣಕ್ಕೋ, ಅವರ ಸ್ಮಾರ್ಟ್ ನೆಸ್ ಗೋ ಅಥವಾ ಅಭಿನಯಕ್ಕೋ ದುಲ್ಖರ್‌ಗೆ ಫಿದಾ ಆಗದೇ ಇರುವ ಹುಡುಗೀರೇ ಕಡಿಮೆ. ಹೆಚ್ಚಿನ ಹುಡುಗಿಯರ ಕನಸಲ್ಲಿ ಎಂಟ್ರಿ ಕೊಟ್ಟ ಯಂಗ್ ಮ್ಯಾನ್ ದುಲ್ಖರ್. ಆದರೆ ಇವರ ಕನಸಲ್ಲಿ ಬರೋಳು ಮಾತ್ರ ಒಬ್ಬಳೇ ಹುಡುಗಿ. ಅದು ಮತ್ಯಾರೂ ಅಲ್ಲ, ಇವರ ಪತ್ನಿ ಅಮಲ್. ಅದು ಬಿಟ್ಟರೆ ಮಗಳೆಂಬ ಕಿನ್ನರಿಯ ಎಳೆಯ ಪಾದಗಳು ಅಷ್ಟೇ.