ವೀಕೆಂಡ್​ ಎನ್ನುವುದು  ಏನು ಎಂಬ ಬಗ್ಗೆ ನೂತನ ಸಂಸದೆ, ಬಾಲಿವುಡ್​ ನಟಿ ಕಂಗನಾ ರಣಾವತ್​ ಹೇಳಿರುವ ಮಾತು ಸಕತ್​ ವೈರಲ್​ ಆಗುತ್ತಿದೆ. ನಟಿ ಹೇಳಿದ್ದೇನು?  

 ನೂತನ ಸಂಸದೆ, ಬಾಲಿವುಡ್​ ತಾರೆ ಕಂಗನಾ ರಣಾವತ್​ ಸದ್ಯ ಸುದ್ದಿಯಲ್ಲಿದ್ದಾರೆ. ರಾಜಕೀಯ ಪ್ರವೇಶ ಮಾಡುತ್ತಿದ್ದಂತೆಯೇ ಪ್ರಥಮ ಹಂತದಲ್ಲಿಯೇ ಲೋಕಸಭೆಯನ್ನು ಪ್ರವೇಶಿಸಲಿರುವ ಅದರಲ್ಲಿಯೂ ಭರ್ಜರಿ ಗೆಲುವಿನೊಂದಿಗೆ ಸಂಸದೆಯಾಗಿರುವ ಕಂಗನಾ ಈಚೆಗೆ ಸಿಐಎಸ್ಎಫ್ ಮಹಿಳಾ ಸೆಕ್ಯುರಿಟಿ ಸಿಬ್ಬಂದಿಯೊಬ್ಬರಿಂದ ಹೊಡೆಸಿಕೊಂಡ ಸುದ್ದಿ ಭಾರಿ ಹಲ್​ಚಲ್​ ಸೃಷ್ಟಿಸುತ್ತಿದೆ. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಕಂಗನಾ ಗೆಲುವು ಸಾಧಿಸುತ್ತಿದ್ದಂತೆಯೇ ಈ ಘಟನೆ ಅಭಿಮಾನಿಗಳನ್ನು ದಂಗು ಬಡಿಸಿದೆ. ಈ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಕಂಗನಾ ರಣಾವತ್​ ದೇಶದ ಬಗ್ಗೆ ಮಾತನಾಡಿದ್ದು ಅವರ ವಿಡಿಯೋ ವೈರಲ್​ ಆಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2047ರ ಹೊತ್ತಿಗೆ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿ ಮಾಡಬೇಕು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಪರಿಕಲ್ಪನೆಯ ಕುರಿತು ಮಾತನಾಡಿರುವ ಕಂಗನಾ ಅವರು, ಎಲ್ಲರೂ ಒಗ್ಗಟ್ಟಾಗಿ ಇದಕ್ಕೆ ಹೇಗೆ ದುಡಿಯಬೇಕು ಎಂಬ ಬಗ್ಗೆ ಹೇಳಿದ್ದಾರೆ. ಕೆಲಸದಲ್ಲಿ ವಾರಾಂತ್ಯ ಎನ್ನುವ ಪರಿಕಲ್ಪನೆಯು ಪಾಶ್ಚಿಮಾತ್ಯರ ಬ್ರೈನ್‌ವಾಶಿಂಗ್ ಆಗಿದೆಯೇ ಹೊರತು ಬೇರೇನೂ ಅಲ್ಲ ಎಂದಿರುವ ಕಂಗನಾ, ನಾವು ಈ ಗೀಳಿನ ಕೆಲಸದ ಸಂಸ್ಕೃತಿಯನ್ನು ಸಾಮಾನ್ಯಗೊಳಿಸಬೇಕು. ವಾರಾಂತ್ಯಕ್ಕಾಗಿ ಎದುರು ನೋಡುವುದನ್ನು ನಿಲ್ಲಿಸಬೇಕು. ಹಾಗಾದರೆ ಮಾತ್ರ ಪ್ರಧಾನಿಯವರ ಕನಸನ್ನು ಸಾಕಾರಗೊಳಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ. ವಾರಾಂತ್ಯಕ್ಕಾಗಿ ಎದುರು ನೋಡುವವರ ಸಂಖ್ಯೆ ಹೆಚ್ಚುತ್ತಿದೆ ಎಂಬ ಅರ್ಥದಲ್ಲಿ ಮಾತನಾಡಿರುವ ನಟಿ, ಸೋಮವಾರವನ್ನು ಇಷ್ಟಪಡದಿರುವ ಬಗ್ಗೆ ಮೀಮ್‌ಗಳು ಮತ್ತು ಜೋಕ್‌ಗಳಿಂದ ನಾವು ದೂರವಿರಬೇಕಿದೆ. ಇವು ಕೆಲಸದ ಬಗ್ಗೆ ನಕಾರಾತ್ಮಕ ಮನೋಭಾವವನ್ನು ಪ್ರತಿಬಿಂಬಿಸುತ್ತವೆ. ಇದು ವಿದೇಶಿ ಸಂಸ್ಕೃತಿ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕಿದೆ ಎಂದಿದ್ದಾರೆ.

ಕಂಗನಾ ಕೆನ್ನೆಗೆ ಹೊಡೆದಾಕೆಗೆ ಗಾಯಕ ವಿಶಾಲ್​ ಬಂಪರ್​ ಆಫರ್​: ಅಭಿಮಾನಿಗಳಿಂದ ವ್ಯಾಪಕ ಟೀಕೆ

 ಸ್ವಾತಂತ್ರ್ಯ ಬಂದು ಹಲವು ದಶಕ ಕಳೆದರೂ ನಾವಿನ್ನೂ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಲ್ಲ. ಹೀಗಾಗಿ, ಕೆಲಸದ ಬಗ್ಗೆ ಬೇಸರ ಮತ್ತು ಸೋಮಾರಿಯಾಗಿರಲು ನಮಗೆ ಸಾಧ್ಯವಿಲ್ಲ. ಪ್ರಧಾನಿಯವರ ವಿಕಸಿತ ಭಾರತದ ಕನಸನ್ನು ನನಸು ಮಾಡುವುದು ನಮ್ಮ ಕರ್ತವ್ಯವಾಗಿದೆ. ಏಕತಾನತೆಯ (ಗೀಳಿನ) ಕೆಲಸದ ಸಂಸ್ಕೃತಿಯನ್ನು ಸಾಮಾನ್ಯೀಕರಿಸಬೇಕು. ಕಠಿಣ ಪರಿಶ್ರಮ ಮತ್ತು ಸಮರ್ಪಣೆಯನ್ನು ಹೆಚ್ಚು ಮೌಲ್ಯಯುತ ಮತ್ತು ಸಾಮಾನ್ಯವೆಂದು ಪರಿಗಣಿಸುವ ಸಂಸ್ಕೃತಿಯನ್ನು ಉತ್ತೇಜಿಸುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. 'ನನ್ನ ಪ್ರತಿ ಕ್ಷಣವೂ ದೇಶಕ್ಕಾಗಿ' ಎಂದು ಹೇಳಿರುವ ಪ್ರಧಾನಿಯವರ ಮಾತನ್ನು ನಾವು ಪಾಲನೆ ಮಾಡಬೇಕಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದಿದ್ದಾರೆ. 

ಇದೇ ವೇಳೆ, ಭಾರತ ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿರುವ ಅವರು, ಭಾರತವು ಇನ್ನೂ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಈಗ ಭಾರತ ಅಭಿವೃದ್ಧಿಯ ಪಥದತ್ತ ಸಾಗಿದೆ. ಆದರೆ ಅಭಿವೃದ್ಧಿ ಹೊಂದಿದ ರಾಷ್ಟ್ರದ ಸ್ಥಾನಮಾನ ಸಾಧಿಸಲು ಶ್ರಮಿಸುತ್ತಿರುವುದರಿಂದ ಭಾರತೀಯರು ಸಂತೃಪ್ತರಾಗಬಾರದು. ಹೀಗಾಗಬೇಕೆಂದರೆ ನಾವು ಸೋಮಾರಿಗಳಾಗಿರಬಾರದು ಎಂದಿರುವ ಕಂಗನಾ ಅವರು, ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಅವಧಿಗೆ ಪ್ರಧಾನಿಯಾದ ಬಳಿಕ ಸಿಬ್ಬಂದಿಯನ್ನು ಉದ್ದೇಶಿಸಿ ಮಾಡಿದ ಭಾಷಣದ ವಿಡಿಯೋ ಕ್ಲಿಪ್ ಅನ್ನು ಶೇರ್​ ಮಾಡಿಕೊಂಡಿದ್ದಾರೆ.

ಪಂಜಾಬ್​ ಉಗ್ರವಾದವನ್ನು ಪ್ರಶ್ನಿಸುತ್ತಲೇ ಕೆನ್ನೆಗೆ ಹೊಡೆದ ಘಟನೆಗೆ ಪ್ರತಿಕ್ರಿಯೆ ನೀಡಿದ ಕಂಗನಾ