ಹಿರಿಯ ನಟಿ ಊರ್ವಶಿ ಅವರು ತಮಗೆ ಹೆರಿಗೆಯ ನಂತರ ಎದುರಾದ ಖಿನ್ನತೆಯ ಬಗ್ಗೆ ಮಾತನಾಡಿದ್ದಾರೆ. ಮಗುವನ್ನು ನೋಡಿಕೊಳ್ಳಲು ಕೆಲಸದವರನ್ನು ನೇಮಿಸಿದಾಗ ನಡೆದ ಆತಂಕಕಾರಿ ಘಟನೆಯೊಂದನ್ನು ಅವರು ನೆನಪಿಸಿಕೊಂಡಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ ಊರ್ವಶಿ ತಮ್ಮ ನಟನೆಯ ಮೂಲಕ ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ 'ಲೇಡಿ ಸೂಪರ್ ಸ್ಟಾರ್' ಎಂದೇ ಖ್ಯಾತರಾಗಿರುವ ಇವರು, ಇಂದಿಗೂ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ, ಊರ್ವಶಿ ಅವರು ತಮ್ಮ ಬದುಕಿನ ಒಂದು ಕಠಿಣ ಘಟ್ಟದ ಬಗ್ಗೆ ಮಾತನಾಡಿದ್ದು, ಹೆರಿಗೆಯ ನಂತರ ತಮಗಾದ ಖಿನ್ನತೆಯ (Depression) ಬಗ್ಗೆ ಮನಬಿಚ್ಚಿ ಹೇಳಿಕೊಂಡಿದ್ದಾರೆ.

ಒಂದು ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ ಊರ್ವಶಿ, ಆ ದಿನಗಳನ್ನು ಹೀಗೆ ನೆನಪಿಸಿಕೊಂಡರು:

"ಆ ಹಂತದಲ್ಲಿ ನಾನು ತೀವ್ರ ಖಿನ್ನತೆಯಲ್ಲಿದ್ದೆ. ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಮಗುವನ್ನು ಮನೆಯಲ್ಲಿ ಕೆಲಸದವರ ಹತ್ತಿರ ಬಿಟ್ಟು ಶೂಟಿಂಗ್‌ಗೆ ಹೋಗಿದ್ದೆ. ಅವರು ಮಗುವಿಗೆ ಹಾಲು ಬಿಸಿ ಮಾಡಿ ಕೊಡುತ್ತಿದ್ದರು. ಒಂದು ದಿನ ಶೂಟಿಂಗ್ ಮಧ್ಯದಲ್ಲೇ ನನಗೆ ಏನೋ ಆತಂಕವಾಗಿ, ತಲೆಕೆಟ್ಟು ಮನೆಗೆ ಓಡಿಬಂದೆ. ಅದು ನಾನು ಡೆಲಿವರಿಗಿಂತ ಮೊದಲೇ ಒಪ್ಪಿಕೊಂಡಿದ್ದ ಸಿನಿಮಾ. ನಾನು ಮನೆಗೆ ಬಂದು ನೋಡಿದಾಗ, ಅವರು ಮಗುವನ್ನು ಸೋಫಾ ಮೇಲೆ ಮಲಗಿಸಿ, ಅದಕ್ಕೆ ಹಾಲು ಕುಡಿಸುತ್ತಾ ಆರಾಮವಾಗಿ ಸೀರಿಯಲ್ ನೋಡುತ್ತಿದ್ದರು.

ಸಂಜೆ 6 ಗಂಟೆಯ ನಂತರ ನಾನು ಕೆಲಸ ಮಾಡುವುದಿಲ್ಲ ಎಂದು ಮೊದಲೇ ಹೇಳಿದ್ದೆ. ಹಾಲನ್ನು ಪರೀಕ್ಷಿಸಿದಾಗ ಅದು ಒಡೆದು ಹೋಗಿತ್ತು. ಮಧ್ಯಾಹ್ನವೋ ಯಾವಾಗಲೋ ಕಲಸಿಟ್ಟ ಹಾಲು ಅದು. ಮೊಸರಿನಂತಿದ್ದ ಆ ಹಾಲನ್ನು ಮಗು ಕುಡಿಯಲಾಗದೆ ಉಗುಳುತ್ತಿತ್ತು. ಅದನ್ನು ನೋಡಿದ ತಕ್ಷಣ ನಾನು ಅವರನ್ನು ಕೆಲಸದಿಂದ ತೆಗೆದುಹಾಕಿದೆ." "ಮರುದಿನದಿಂದ ನನಗೆ ಇನ್ನಷ್ಟು ಆತಂಕ ಶುರುವಾಯಿತು. ಮಗು ಟಾಯ್ಲೆಟ್‌ಗೆ ಹೋದರೆ ಕೆಲಸದವರು ಸರಿಯಾಗಿ ಸ್ವಚ್ಛಗೊಳಿಸುತ್ತಾರೋ ಇಲ್ಲವೋ ಎಂಬಂತಹ ಚಿಂತೆಗಳು ಕಾಡುತ್ತಿದ್ದವು.

ನಾನೇ ಹೊತ್ತುಕೊಂಡು ತಿರುಗಾಡುತ್ತಿದ್ದೆ

ಹಾಗಾಗಿ, ನನ್ನಿಂದಾದಷ್ಟು ಹೆಚ್ಚು ಸಮಯ ನಾನೇ ಮಗುವಿನ ಜೊತೆ ಇರಲು ಶುರುಮಾಡಿದೆ. ಸಾಮಾನ್ಯವಾಗಿ ನನ್ನ ಅತ್ತೆ ಮಗುವನ್ನು ನೋಡಿಕೊಳ್ಳುತ್ತಿದ್ದರು. ಅವರು ಊರಿಗೆ ಹೋದಾಗ ಈ ಕೆಲಸದವರನ್ನು ನೇಮಿಸಿದ್ದೆ. ಅದು ನಿಜಕ್ಕೂ ಬಹಳ ಕಷ್ಟದ, ಖಿನ್ನತೆಯ ಸಮಯವಾಗಿತ್ತು. ಮಗ ಶಾಲೆಗೆ ಹೋಗಲು ಆರಂಭಿಸುವವರೆಗೂ ನಾನೇ ಹೊತ್ತುಕೊಂಡು ತಿರುಗಾಡುತ್ತಿದ್ದೆ," ಎಂದು ಊರ್ವಶಿ 'ಒರಿಜಿನಲ್ಸ್' ಎಂಬ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಇನ್ನು ಊರ್ವಶಿ ಅವರ ನಟನೆಯ ಹೊಸ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರವನ್ನು ಅವರೇ ನಿರ್ಮಿಸಿದ್ದಾರೆ.