Vijay Devarakonda And Rashmika Mandanna movie: ಇತ್ತೀಚೆಗೆ ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಗೆ 'ರಣಬಲಿ' ಸಿನಿಮಾ ವಿಶೇಷ ಉಡುಗೊರೆ ನೀಡಿದೆ. ಹಾಗಾದರೆ ಏನದು?
ಏಳು ವರ್ಷಗಳ ಸ್ನೇಹ, ಪ್ರೀತಿಗೆ ಈಗ ಅಧಿಕೃತ ಮುದ್ರೆ ಬಿದ್ದಿದೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರು ಒಟ್ಟಿಗೆ ನಟಿಸುತ್ತಿರುವ ರಣಬಲಿ ಸಿನಿಮಾದಲ್ಲಿನ ಮದುವೆಯ ದೃಶ್ಯಗಳ ಹಾಡನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ವೀಕ್ಷಕರಿಗೂ ಕೂಡ ಶುಭ ಸುದ್ದಿ ಸಿಕ್ಕದೆ.
ರಾಜಮನೆತನದ ವೈಭವ ನೆನಪಿಸಿದರು
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಾಜಸ್ಥಾನದ ಉದಯಪುರದಲ್ಲಿ ಗುರುವಾರ ಮದುವೆಯಾದರು. ಹಿಂದೂ ಸಂಪ್ರದಾಯ ಮತ್ತು ಕೊಡವ ಸಂಪ್ರದಾಯದ ಪ್ರಕಾರ ಈ ಮದುವೆ ನಡೆದಿದ್ದು ವಿಶೇಷವಾಗಿತ್ತು. ಇವರ ಮದುವೆ ರಾಜಮನೆತನದ ವೈಭವವನ್ನು ನೆನಪಿಸಿತ್ತು.
ಮಾರ್ಚ್ 4ರಂದು ಆರತಕ್ಷತೆ
ಮದುವೆಯ ನಂತರ ನವಜೋಡಿ ಹೈದರಾಬಾದ್ಗೆ ಮರಳಿದೆ. ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡ ಇವರ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ. ಮಾರ್ಚ್ 4 ರಂದು ಹೈದರಾಬಾದ್ನ ತಾಜ್ ಕೃಷ್ಣ ಹೋಟೆಲ್ನಲ್ಲಿ ಅದ್ದೂರಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದಕ್ಕೆ ಸಿನಿಮಾ ಹಾಗೂ ರಾಜಕೀಯ ಗಣ್ಯರು ಆಗಮಿಸಲಿದ್ದಾರೆ.
ಎರಡು ಸಿನಿಮಾಗಳ ಬಳಿಕ ಈ ಜೋಡಿ ಮೂರನೇ ಸಿನಿಮಾಕ್ಕೆಂದು ಒಂದಾಗಿದೆ. ಈಗ 'ರಣಬಲಿ' ಚಿತ್ರತಂಡ ಈ ಜೋಡಿಗೆ ಸರ್ಪ್ರೈಸ್ ನೀಡಿದೆ. ರಾಹುಲ್ ಸಂಕೃತ್ಯಾನ್ ನಿರ್ದೇಶನದ ಈ ಸಿನಿಮಾದಲ್ಲಿ ವಿಜಯ್-ರಶ್ಮಿಕಾ ಜೋಡಿಯಾಗಿ ನಟಿಸಿದ್ದಾರೆ. 'ಡಿಯರ್ ಕಾಮ್ರೇಡ್' ನಂತರ ಇವರಿಬ್ಬರೂ ಮತ್ತೆ ಒಂದಾಗಿರುವ ಚಿತ್ರವಿದು.
ಹಾಡು ರಿಲೀಸ್
ಚಿತ್ರದಲ್ಲಿ ವಿಜಯ್ 'ರಣಬಲಿ' ಪಾತ್ರದಲ್ಲಿ ಮತ್ತು ರಶ್ಮಿಕಾ 'ಜಯಮ್ಮ' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ಮದುವೆಯಾದ ಜೋಡಿಯಾಗಿ ನಟಿಸಿದ್ದಾರೆ. ಈ ದೃಶ್ಯಗಳಿರುವ 'ಏಂದಯ್ಯಾ ಸಾಮಿ' ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ನಿಜ ಜೀವನದಲ್ಲಿ ಮದುವೆಯಾದ ಜೋಡಿಗೆ ಶುಭಕೋರಲು ಈ ಹಾಡನ್ನು ರಿಲೀಸ್ ಮಾಡಲಾಗಿದೆ. ಈ ವಿಡಿಯೋ ಸಾಂಗ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ.
ಈ ಸಿನಿಮಾ ಕಥೆ ಏನು?
'ರಣಬಲಿ' ಚಿತ್ರದ ಗ್ಲಿಂಪ್ಸ್ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸ್ವಾತಂತ್ರ್ಯ ಪೂರ್ವ, ಅಂದರೆ 1878ರ ಕಾಲಘಟ್ಟದ ಕಥೆಯನ್ನು ಇದರಲ್ಲಿ ತೋರಿಸಲಾಗುತ್ತಿದೆ. ಆ ಸಮಯದಲ್ಲಿ ಬ್ರಿಟಿಷರು ಭಾರತೀಯರಿಗೆ ಹೇಗೆ ಚಿತ್ರಹಿಂಸೆ ನೀಡುತ್ತಿದ್ದರು, ಆಹಾರವಿಲ್ಲದೆ ಹೇಗೆ ದೋಚಿಕೊಂಡರು ಎಂಬ ಕರಾಳ ಸತ್ಯಗಳನ್ನು ಈ ಚಿತ್ರ ತೆರೆದಿಡಲಿದೆ.
ಆ ಕಾಲದಲ್ಲಿ ಬ್ರಿಟಿಷರು ಭಾರತದಿಂದ ಬರೋಬ್ಬರಿ 45 ಟ್ರಿಲಿಯನ್ ಡಾಲರ್ ಲೂಟಿ ಮಾಡಿದ್ದರು ಎನ್ನಲಾಗಿದೆ. ಕೇವಲ 40 ವರ್ಷಗಳ ಅವಧಿಯಲ್ಲಿ ಲಕ್ಷಾಂತರ ಜನರು ಹಸಿವಿನಿಂದ ಸಾವನ್ನಪ್ಪಿದ್ದರು. ಇಂತಹ ಕಠಿಣ ಪರಿಸ್ಥಿತಿಯಲ್ಲಿ 'ರಣಬಲಿ' ಹುಟ್ಟಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಿದ ಕಥೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. 1854 ರಿಂದ 1878ರ ನಡುವೆ ನಡೆದ ನೈಜ ಐತಿಹಾಸಿಕ ಘಟನೆಗಳನ್ನು ಆಧರಿಸಿ ಈ ಪ್ಯಾನ್ ಇಂಡಿಯಾ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿದೆ. ಸಿನಿಮಾ ಸೆಪ್ಟೆಂಬರ್ 11 ರಂದು ಬಿಡುಗಡೆಯಾಗಲಿದೆ.



