ಅಂಡಮಾನ್‌ನ 21 ದ್ವೀಪಗಳಿಗೆ ಯೋಧರ ಹೆಸರು ಇಟ್ಟ ಪ್ರಧಾನಿ ಮೋದಿ ಅವರಿಗೆ ಅಜಯ್ ದೇವಗನ್, ಸಿದ್ಧಾರ್ಥ್, ಸುನಿಲ್ ಶೆಟ್ಟಿ ಧನ್ಯವಾದ ತಿಳಿಸಿದ್ದಾರೆ.

ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಜನವಸತಿ ಇಲ್ಲದ 21 ದ್ವೀಪಗಳಿಗೆ ದೇಶದ ಅತ್ಯತ್ತಮ ಸೇನಾ ಪ್ರಶಸ್ತಿ ಪರಮವೀರ ಚಕ್ರ ಸ್ವೀಕರಿಸಿದ ಯೋಧರ ಹೆಸರನ್ನು ಪ್ರಧಾನಿ ನರೇಂದ್ರ ಇರಿಸಿದ್ದಾರೆ. ಉತ್ತರ ಮತ್ತು ಮಧ್ಯ ಆಂಡಮಾನ್ ನ 16 ದ್ವೀಪಗಳು ಹಾಗೂ ದಕ್ಷಿಣ ಅಂಡಮಾನ್ ನ 5 ದ್ವೀಪ ಸೇರಿ ಒಟ್ಟು 21 ದ್ವೀಪಗಳಿಗೆ ನಾಮಕರಣ ಮಾಡಲಾಗಿದೆ. ಕೇಂದ್ರ ಸರ್ಕಾರದ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಳಿಸುತ್ತಿದ್ದಾರೆ.

ವರ್ಚುವಲ್ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, 'ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಪರಮ ವೀರಚಕ್ರ ಪರಸ್ಕೃತರ ಹೆಸರನ್ನು ನಾಮಕರಣ ಮಾಡುವುದು ಇಂದಿನ ಪೀಳಿಗೆಯವರಿಗೆ ಸ್ಫೂರ್ತಿಯಾಗಲಿದೆ. ಸ್ವಾತಂತ್ರ್ಯ ನಂತರ ಈ ದ್ವೀಪಗಳನ್ನು ನಿರ್ಲಕ್ಷ್ಯ ಮಾಡಲಾಗಿತ್ತು. ಸುಭಾಷ್ ಚಂದ್ರ ಬೋಷ್ ಅವರ ಪರಂಪರೆಯನ್ನು ಜೀವಂತವಾಗಿ ಇಡಲಾಗುವುದು' ಎಂದರು. 'ಅಂಡಮಾನ್‌ನ ಈ ಭೂಮಿ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ ಭೂಮಿಯಾಗಿದೆ. ಅಲ್ಲಿ ಮೊದಲ ಬಾರಿಗೆ ಸ್ವತಂತ್ರ ಭಾರತದ ಸರ್ಕಾರ ರಚನೆಯಾಯಿತು. ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ. ದೇಶವು ಈ ದಿನವನ್ನು ಪರಾಕ್ರಮ ದಿವಸ ಎಂದು ಆಚರಿಸುತ್ತದೆ' ಎಂದು ಮೋದಿ ಹೇಳಿದರು. 

ಹೆಸರಿಲ್ಲದ 21 ಅಂಡಮಾನ್ ದ್ವೀಪಗಳಿಗೆ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರಿಟ್ಟ ಪ್ರಧಾನಿ ಮೋದಿ

ಅಂಡಮಾನ್ ದ್ವೀಪಗಳಿಗೆ ಯೋಧರ ಹೆಸರಿಟ್ಟ ಮೋದಿಗೆ ಬಾಲಿವುಡ್ ಮಂದಿ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ಅಜಯ್ ದೇವಗನ್, ಸುನಿಲ್ ಶೆಟ್ಟಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ದೇಶದ ನಿಜವಾದ ಹೀರೋಗಳ ಹೆಸರು ಇಟ್ಟಿರುವುದು ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ. ಅಂದಹಾಗೆ ಅಜಯ್ ದೇವನ್ 2003ರಲ್ಲಿ ಬಂದ LOC: Kargil ಸಿನಿಮಾದಲ್ಲಿ ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಪಾತ್ರವನ್ನು ನಿರ್ವಹಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ಅಜಯ್ ದೇವಗನ್, 'ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ (ಪರಮ ವೀರ ಚಕ್ರ) ಅವರ ಹೆಸರನ್ನು ದ್ವೀಪಕ್ಕೆ ಇಡುವ ನಿರ್ಧಾರ, ಅವರು ನಮ್ಮನ್ನು ಬಿಟ್ಟುಹೋದ ಮಾತೃಭೂಮಿಗಾಗಿ ಅವರು ಮಾಡಿದ ತ್ಯಾಗದ ಉದಾಹರಣೆಯು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ. ಧನ್ಯವಾದಗಳು PM ನರೇಂದ್ರ ಮೋದಿ' ಎಂದು ಹೇಳಿದ್ದಾರೆ.

Scroll to load tweet…

ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರು ಶೇರ್‌ಷಾ ಸಿನಿಮಾದಲ್ಲಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿದ್ಧಾರ್ಥ್ ಟ್ವೀಟ್ ಮಾಡಿ, 'ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿರುವ ದ್ವೀಪವೊಂದಕ್ಕೆ ನಮ್ಮ ನಾಯಕ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಹೆಸರನ್ನು ಇಡಲಾಗಿದೆ ಎಂಬ ಸುದ್ದಿ ನನಗೆ ರೋಮಾಂಚನವಾಗಿದೆ. ಅವರ ಪಾತ್ರವನ್ನು ತೆರೆಯ ಮೇಲೆ ಜೀವಿಸುವ ಭಾಗ್ಯ ನನ್ನದಾಗಿರುವುದು ಹೆಮ್ಮೆಯಿಂದ ನನ್ನ ಹೃದಯ ಹಿಗ್ಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಈ ನಡೆ ಶೇರ್‌ಷಾ ಶಾಶ್ವತವಾಗಿ ಉಳಿಯುತ್ತದೆ ಎಂದು ಖಚಿತಪಡಿಸುತ್ತದೆ' ಎಂದರು.

Scroll to load tweet…

ಸುನೀಲ್ ಶೆಟ್ಟಿ, ಆರ್ ಮಾಧವನ್, ಅನುಪಮ್ ಖೇರ್ ಕೂಡ ಪರಂವೀರ ಚಕ್ರ ಸ್ವೀಕರಿಸಿದ ಯೋಧರಿಗೆ ನೀಡಿದ ಗೌರವಕ್ಕೆ ಪ್ರಧಾನಿಯವರಿಗೆ ಧನ್ಯವಾದ ತಿಳಿದರು. ಈ ಬಗ್ಗೆ ಟ್ವೀಟ್ ಮಾಡಿರುವ ನಟ ಸುನಿಲ್ ಶೆಟ್ಟಿ, 'ನಮ್ಮ ರಾಷ್ಟ್ರದ ನಿಜವಾದ ವೀರರಾದ 21 ಪರಮವೀರ ಚಕ್ರ ಪುರಸ್ಕೃತರ ಹೆಸರನ್ನು ಅಂಡಮಾನ್ ಮತ್ತು ನಿಕೋಬಾರ್‌ನ 21 ದ್ವೀಪಗಳಿಗೆ ನಾಮಕರಣ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ತುಂಬಾ ಹೆಮ್ಮೆಯಾಗುತ್ತಿದೆ' ಎಂದು ಟ್ವೀಟ್ ಮಾಡಿದ್ದಾರೆ.

Scroll to load tweet…