ಶೃಂಗೇರಿಯಲ್ಲಿ 100 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆಗಾಗಿ ಯುವಕರ ಹೋರಾಟಶೃಂಗೇರಿ ಪಟ್ಟಣ ಸೇರಿ ಸುತ್ತಲಿನ ಹಳ್ಳಿಗಳಲ್ಲಿ ತಮಟೆ ಚಳುವಳಿ ಮೂಲಕ ಜಾಗೃತಿಒಂದು ವರ್ಷದಿಂದಲೂ ಈಡೇರದ ಆಸ್ಪತ್ರೆ ನಿರ್ಮಾಣದ ಭರವಸೆ 

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

Add Asianetnews Kannada as a Preferred SourcegooglePreferred

ಚಿಕ್ಕಮಗಳೂರು (ನ.24) : ಜಿಲ್ಲೆಯ ಶೃಂಗೇರಿಯಲ್ಲಿ 100 ಹಾಸಿಗೆಯ ಆಸ್ಪತ್ರೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ಕಳೆದ ಎರಡು ವರ್ಷಗಳಿಂದ ನಿರಂತರ ಹೋರಾಟ ನಡೆದುಕೊಂಡು ಬಂದಿದ್ದು, ಇದು ಶೃಂಗೇರಿ ಜನತೆಯ ಸುಮಾರು 15 ವರ್ಷಗಳ ಬೇಡಿಕೆಯಾಗಿದೆ. ಕಳೆದ ವರ್ಷ ಅಕ್ಟೋಬರ್ ವೇಳೆ ಸ್ವಯಂಪ್ರೇರಿತ ಶೃಂಗೇರಿ ಬಂದ್ ನಡೆಸಿ ಬೃಹತ್ ಹೋರಾಟ ಸಹ ಮಾಡಲಾಗಿತ್ತು. ಆಗ ಒಂದು ತಿಂಗಳೊಳಗೆ ಆಸ್ಪತ್ರೆಗೆ ಜಾಗ ಮಂಜೂರಾತಿ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಇದಗಿ ಒಂದು ವರ್ಷ ಕಳೆದರೂ ಸುಸಜ್ಜಿತ ಆಸ್ಪತ್ರೆ ಕನಸು ಕನಸಾಗಿಯೇ ಉಳಿದಿದೆ.

ಪ್ರತಿಭಟನೆ ಮಾಡುವ ವೇಳೆ ಧ್ವನಿವರ್ಧಕ ಬಳಸಲು ಸ್ಥಳೀಯ ಆಡಳಿತ ಸಂಸ್ಥೆ ಅನುಮತಿ ನೀಡದ ಹಿನ್ನೆಲೆ, 100 ಹಾಸಿಗೆಯ ಆಸ್ಪತ್ರೆ ನಿರ್ಮಿಸುವಂತೆ ಆಗ್ರಹಿಸಿ ತಮಟೆ ಭಾರಿಸಿಕೊಂಡು ಶೃಂಗೇರಿ ಪಟ್ಟಣದ ಯುವಕರು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ನಮ್ಮ ಊರಿನಲ್ಲಿ ಆಸ್ಪತ್ರೆಯಿಲ್ಲ, ವಾಹನ ಸವಾರರು ನಿಧಾನವಾಗಿ ವಾಹನ ಚಲಾಯಿಸುವಂತೆ ಮನವಿಯ ಬಿತ್ತಿಪತ್ರ ಪ್ರದರ್ಶನ ಮಾಡಿದರು. ಶೃಂಗೇರಿ ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕ್ಷೇತ್ರ. ನಿತ್ಯ ಸಾವಿರಾರು ವಾಹನಗಳು ಇಲ್ಲಿಗೆ ಬಂದು ಹೋಗುತ್ತವೆ. ಇಲ್ಲಿ ಸಣ್ಣ ಸಮಸ್ಯೆಗೂ ಶಿವಮೊಗ್ಗ, ಉಡುಪಿ ಅಥವಾ ಮಂಗಳೂರಿಗೆ ಹೋಗಬೇಕು.

ಚಿಗಟೇರಿ ಜಿಲ್ಲಾಸ್ಪತ್ರೆ ಖಾಸಗಿಕರಣಕ್ಕೆ ವಿರೋಧ: ಕೆಆರ್ ಎಸ್ ಪ್ರತಿಭಟನೆ

ವರ್ಷವಾದರೂ ಈಡೇರದ ಭರವಸೆ: ಕಳೆದ ವರ್ಷ ಪಟ್ಟಣದ ಸಾರ್ವಜನಿಕರು ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ಬಂದ್‌ ಮಾಡಿದ್ದರು. ಈ ವೇಳೆ ಒಂದು ತಿಂಗಳ ಒಳಗಾಗಿ ಆಸ್ಪತ್ರೆಯನ್ನು ಮಂಜೂರು ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ನಂತರ ಶೃಂಗೇರಿಗೆ ಆಗಮಿಸಿದ್ದ ಸಿಎಂ ಬೊಮ್ಮಾಯಿ ಕೂಡ ಶೀಘ್ರದಲ್ಲೇ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಆದರೂ, ಎಲ್ಲರ ಮಾತುಗಳು ಭರವಸೆಯಾಗಿಯೇ ಉಳಿದುಕೊಂಡಿವೆ. ಒಂದು ವರ್ಷವಾದರೂ ಆಸ್ಪತ್ರೆ ನಿರ್ಮಾಣದ ಸುಳಿವು ಸಿಗುತ್ತಿಲ್ಲ ಎಂದು ಸರ್ಕಾರದ ನಡೆಯನ್ನು ಖಂಡಿಸಿದರು.

ನಾಳೆಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ: ಸಮಾನ ಮನಸ್ಕ ಯುವಕರು ಗುಂಪು 'ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ' ಎಂದು ಹೆಸರಿಟ್ಟುಕೊಂಡು ನಾಳೆಯಿಂದ (ನ.25 ಹಾಗೂ 26ರಂದು) ಎರಡು ದಿನ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದೆ. ಈ ಧರಣಿಗೆ ಹಲವಾರು ಸಂಘ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ. ಈ ನಡುವೆ ಜನಪರ ಹೋರಾಟಕ್ಕೆ ಪೊಲೀಸರು ಮೈಕ್ ಪ್ರಚಾರಕ್ಕೆ ಅನುಮತಿ ನೀಡುತ್ತಿಲ್ಲ. ನಮ್ಮ ಹೋರಾಟವನ್ನು ಹತ್ತಿಕ್ಕಲು ಅಸಮರ್ಥ ರಾಜಕೀಯ ನಾಯಕರುಗಳ ಪಿತೂರಿ ನಡೆಸಿದ್ದಾರೆ. ಆಸ್ಪತ್ರೆ ಹೋರಾಟ ಹತ್ತಿಕ್ಕುವ ನಾಚಿಕೆಗೇಡಿನ ಮಾಡುತ್ತಿದ್ದಾರೆ ಎಂದು ಆಸ್ಪತ್ರೆ ಹೋರಾಟ ಸಮಿತಿ ಆರೋಪಿಸಿದೆ. ರಾತ್ರಿ ವೇಳೆ ಶೃಂಗೇರಿ ಪಟ್ಟಣ ಹಾಗೂ ಸುತ್ತಲಿನ ಹಳ್ಳಿಗಳ್ಳಲ್ಲಿ ತಮಟೆ ಬಾರಿಸುತ್ತಾ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.