ಅಗ್ನಿವೀರರಾಗಲು ಆನ್‌ಲೈನ್‌ ಮೂಲಕ 27,152 ಮಂದಿ ನೋಂದಣಿ 

ಬೆಂಗಳೂರು(ಆ.11): ಹಾಸನದಲ್ಲಿ ಬುಧವಾರ ಅಗ್ನಿಪಥ ಸೇನಾ ನೇಮಕ ರ‍್ಯಾಲಿ ಆರಂಭವಾಗಿದೆ. ಈ ಮೂಲಕ ಇದೇ ಮೊದಲ ಬಾರಿ ರಾಜ್ಯದಲ್ಲಿ ಅಗ್ನಿವೀರರ ನೇಮಕಕ್ಕೆ ಚಾಲನೆ ಲಭಿಸಿದಂತಾಗಿದೆ. ಮೊದಲ ದಿನವೇ ನೇಮಕಾತಿ ರ‍್ಯಾಲಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನೇಮಕಾತಿಗೆ ಸಂಬಂಧಿಸಿದ ವಿವಿಧ ಪರೀಕ್ಷೆಗಳು ಆರಂಭವಾಗಿವೆ. ಆಗಸ್ಟ್‌ 22ರವರೆಗೆ ರ‍್ಯಾಲಿ ನಡೆಯಲಿದ್ದು, ಅಗ್ನಿವೀರರಾಗಲು ಆನ್‌ಲೈನ್‌ ಮೂಲಕ 27,152 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಸೇನೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

ರ‍್ಯಾಲಿಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಅಗ್ನಿವೀರ್‌ ಕ್ಲರ್ಕ್ / ಸ್ಟೋರ್‌ ಕೀಪರ್‌, ತಾಂತ್ರಿಕ, ಟ್ರೇಡ್‌ಮೆನ್‌ ಮುಂತಾದ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.

ಕೇರಳ ಲೋಕಸೇವಾ ಆಯೋಗದ ಪರೀಕ್ಷೆಯನ್ನು ಒಟ್ಟಿಗೆ ಪಾಸಾದ ತಾಯಿ - ಮಗ

ನ.1ರಿಂದ ಮಹಿಳಾ ಅಗ್ನಿವೀರರ ನೇಮಕ:

ನವೆಂಬರ್‌ 1 ರಿಂದ ನ. 3ರವರೆಗೆ ಬೆಂಗಳೂರಿನ ಮಾಣಿಕ್‌ಷಾ ಪರೇಡ್‌ ಮೈದಾನದಲ್ಲಿ ಮಿಲಿಟರಿ ಪೊಲೀಸ್‌ನಲ್ಲಿರುವ ಅಗ್ನಿವೀರ್‌ ಹುದ್ದೆಗಳಿಗೆ ಮಹಿಳಾ ಸಿಬ್ಬಂದಿಯ ನೇಮಕಾತಿ ರ‍್ಯಾಲಿ ನಡೆಯಲಿದೆ. ಕರ್ನಾಟಕ, ಕೇರಳ, ಲಕ್ಷದ್ವೀಪ ಅಭ್ಯರ್ಥಿಗಳು ಈ ರ‍್ಯಾಲಿಯಲ್ಲಿ ಪಾಲ್ಗೊಳ್ಳಬಹುದು. ಆನ್‌ಲೈನ್‌ನಲ್ಲಿ ನೋಂದಣಿಗೆ ಆ. 10 ರಿಂದ ಸೆಪ್ಟೆಂಬರ್‌ 7, 2022ರವರೆಗೆ ಇರಲಿದೆ. ಆಸಕ್ತ ಯುವತಿಯರು https://joinindinarmy.nic.in/ ಈ ವೆಬ್‌ಸೈಟ್‌ ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.