Asianet Suvarna News Asianet Suvarna News

ಬಿಗ್‌ಬಾಸ್‌ಗೆ ಹೋಗ್ತೀರಾ ಎಂದರೆ ಚಿಕ್ಕಣ್ಣ ಏನಂತಾರೆ ಕೇಳಿ..!

ಚಿತ್ರರಂಗದಲ್ಲಿ ಕೆಲವು ಹಾಸ್ಯನಟರಿಗೆ ನಾಯಕರಷ್ಟೇ ಪ್ರಾಮುಖ್ಯತೆ ಇದೆ. ಯಾಕೆಂದರೆ ಅವರು ಸಿನಿಮಾದಲ್ಲಿದ್ದಾರೆ ಎಂದರೆ ಖಂಡಿತವಾಗಿ ಆ ಸಿನಿಮಾ ನೋಡಬೇಕು ಎಂದು ಚಿತ್ರಮಂದಿರಕ್ಕೆ ಲಗ್ಗೆ ಇಡುವ ಪ್ರೇಕ್ಷಕರಿದ್ದಾರೆ. ಅಂಥ ನಟರಲ್ಲಿ ಒಬ್ಬರಾದ ಚಿಕ್ಕಣ್ಣ ತಮ್ಮ ಚಿತ್ರ ಬದುಕಿನ ನಿರೀಕ್ಷೆಗಳ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.
 

Talk with Sandalwood Comedy Actor Chikkanna
Author
Bengaluru, First Published Jun 25, 2021, 4:10 PM IST

- ಶಶಿಕರ ಪಾತೂರು

ಹಾಸ್ಯ ಎಲ್ಲರಿಗೂ ಇಷ್ಟವೇ. ಆದರೆ ಹಾಸ್ಯನಟರ ಕಷ್ಟ ಏನೆಂದರೆ ನೇರವಾಗಿ ಕಂಡಾಗಲೂ ಜನ ಅವರು ಕಾಮಿಡಿ ಮಾಡಲೇಬೇಕು ಎಂದುಕೊಳ್ಳುತ್ತಾರೆ! ಅದರಲ್ಲಿಯೂ ಚಿಕಣ್ಣನಂತೆ ಕೈ ತುಂಬ ಚಿತ್ರಗಳಿರುವ ನಟ ತಮ್ಮೊಂದಿಗೆ ಪರದೆಯ ಮೇಲಿನ ಪಾತ್ರದಂತೆ ಚೆಲ್ಲುಚೆಲ್ಲಾಗಿ ವರ್ತಿಸಬೇಕು ಎಂದು ನಿರೀಕ್ಷಿಸಿದರೆ ಖಂಡಿತವಾಗಿ ಕಷ್ಟ!

ಯಾಕೆಂದರೆ ಸಾಮಾನ್ಯವಾಗಿ ಚಿಕ್ಕಣ್ಣ ವೇದಿಕೆಯ ಮೇಲೆ ಮಾತನಾಡುವುದೇ ಕಡಿಮೆ. ಇಷ್ಟೆಲ್ಲ ಕೆಲಸ ಕಾರ್ಯಗಳ ನಡುವೆ ಮನಸ್ಸು ಮೂಡಿದರೆ ಮಾತ್ರ ಒಂದಷ್ಟು ಮಾತನಾಡಬಲ್ಲರು. ಹಾಸ್ಯ ಜೀವನದ ಒಂದು ಭಾಗ ಅಷ್ಟೇ. ನಿಜ ಜೀವನದಲ್ಲಿ  ಇಪ್ಪತ್ತನಾಲ್ಕು ಗಂಟೆಯೂ ಹಾಸ್ಯ ಮಾಡಲು ಸಾಧ್ಯವಿಲ್ಲವಲ್ಲ? ಅದನ್ನು ಅರ್ಥ ಮಾಡಿಕೊಂಡವರು ಚಿಕ್ಕಣ್ಣನ ವರ್ತನೆಯನ್ನು ಕೂಡ ಗೌರವಿಸಲೇಬೇಕು. 

ಚಿಕ್ಕಣ್ಣ ಮೈಸೂರಲ್ಲೇನು ಮಾಡುತ್ತಿದ್ದೀರಿ?

ಶೂಟಿಂಗ್ ನಿಂತ ಮೇಲೆ ಬೆಂಗಳೂರಲ್ಲಿದ್ದು ಏನು ಮಾಡೋಣ? ಊರಲ್ಲಿದ್ದುಕೊಂಡು ನಮ್ಮಿಂದಾಗುವ ಕೆಲಸ ಮಾಡೋಣ ಅಂತ ಮೈಸೂರಿಗೆ ಬಂದೆ. ಕಳೆದ ಲಾಕ್ಡೌನಲ್ಲಿ ನೆಟ್ಟ ಗಿಡಗಳು ಜಮೀನು ತುಂಬ ಬೆಳೆದು ನಿಂತಿವೆ. ಹಾಗಾಗಿ ಕುರಿ ಮೇಯಿಸೋದೇ ಕೆಲಸವಾಗಿತ್ತು. ಈಗಿನವರಭಾಷೆಯಲ್ಲಿ ಹೇಳುವುದಾದರೆ ಗೋಟ್ ಫಾರ್ಮಿಂಗ್ ಮಾಡುತ್ತಿದ್ದೇನೆ ಎಂದು ಹೇಳಬಹುದು. ಮೊನ್ನೆ ಬರ್ತ್
ಡೇ ಇತ್ತು. ಕೋವಿಡ್ ಕಾಲವಾಗಿರುವ ಕಾರಣ ನಾನೇನು ದೊಡ್ಡದಾಗಿ ಆಚರಿಸಿಕೊಂಡಿಲ್ಲ. ಆದರೆ ನನ್ನ ಮೊಬೈಲ್ ನಂಬರ್‌ಗೆ ಬಂದ ಮೆಸೇಜ್‌ಗಳಿಗೆ ಪ್ರತಿಯೊಂದಕ್ಕೂ ಉತ್ತರಿಸುವ ಪ್ರಯತ್ನ ಮಾಡಿದ್ದೇನೆ. ಎರಡು ದಿನ ಅದೇ ಕೆಲಸವಾಯಿತು. 

ವೆಬ್ ಸೀರೀಸ್‌ಗೂ ಮೊದಲು ಹೊಸ ಸಿನಿಮಾ- ರಮೇಶ್ ಅರವಿಂದ್

ಮದುವೆ ಬಗ್ಗೆ, ವಧುವಿನ ಬಗ್ಗೆ ನಿಮ್ಮ ಕಲ್ಪನೆಗಳೇನು?

ಸರಿಯಾಗಿ ಕೆಲಸವೇ ಇಲ್ಲ; ಇನ್ನು ಮದುವೆ ಎಲ್ಲಿಂದ ಆಗೋಣ! ನನ್ನ ಪ್ರಕಾರ ಮದುವೆಯನ್ನೆಲ್ಲ ಯೋಜನೆ ಹಾಕಿ ಆಗೋದಲ್ಲ. ಕಾಲ ಕೂಡಿ ಬಂದಾಗ ಅದಾಗಿಯೇ ಆಗುತ್ತದೆ! ನಾವು ಮುಖ್ಯವಾಗಿ ನಮ್ಮ ವೃತ್ತಿ ಬದುಕಿನತ್ತ ಗಮನ ಕೇಂದ್ರೀಕರಿಸುವುದು ಮುಖ್ಯ. ಒಪ್ಪಿಕೊಂಡಿರುವ ಸಿನಿಮಾಗಳೇ ಏಳೆಂಟು ಇವೆ..! ಸದ್ಯಕ್ಕೆ ನನ್ನ ಯೋಜನೆ, ಯೋಚನೆ, ಕಲ್ಪನೆಗಳೆಲ್ಲ ನಾನು ನಾಯಕನಾಗಿರುವ
`ಉಪಾಧ್ಯಕ್ಷ' ಸಿನಿಮಾದ ಮೇಲಿದೆ. ಮೊದಲು ಅದೊಂದು ನೆರವೇರಿದರೆ ನನ್ನ ಕಲ್ಪನೆ,ಯೋಜನೆಗಳೆಲ್ಲ ಸಾಕಾರವಾದಂತೆ. ಉಪಾಧ್ಯಕ್ಷ ಚಿತ್ರ ಮೇ ತಿಂಗಳಲ್ಲಿ ಶೂಟಿಂಗ್ ಶುರು ಮಾಡಬೇಕಿತ್ತು. ಆದರೆ ಲಾಕ್ಡೌನ್ ಕಾರಣದಿಂದ ಎಲ್ಲರ ಹಾಗೆ ನಮ್ಮ ಯೋಜನೆಯೂ ಮುಂದೆ ಹೋಯಿತು. 

ಅದ್ಭುತ ರಂಗಭೂಮಿ ಕಲಾವಿದ ಕೃಷ್ಣಮೂರ್ತಿ ಕವತ್ತಾರು

ಒಂದು ವೇಳೆ `ಬಿಗ್‌ಬಾಸ್‌ ಸ್ಪರ್ಧಿ'ಯಾಗಿ ನಿಮ್ಮನ್ನು ಕರೆದರೆ ನೀವು ಭಾಗವಹಿಸುತ್ತೀರ?

ಬಿಗ್‌ಬಾಸ್‌ ಎಪಿಸೋಡ್‌ಗಳನ್ನು ನೋಡಿದ್ದೇನೆ. ಭಾಗವಹಿಸುವ ವಿಚಾರದಲ್ಲಿ ನನಗೆ ಯಾವುದೇ ಚಾಲೆಂಜ್ ಇಲ್ಲ ಎಂದುಕೊಂಡಿದ್ದೇನೆ. ಉದಾಹರಣೆಗೆ ಮೊಬೈಲ್‌ ಫೋನ್ ಬಳಸಿದಿರುವುದು ನನಗೆ ಕಷ್ಟವೇ ಅಲ್ಲ. ಯಾಕೆಂದರೆ ಜೀವನದ ಇಪ್ಪತ್ತೈದು ವರ್ಷಗಳನ್ನು ಯಾವ ಮೊಬೈಲ್ ಕೂಡ ಇಲ್ಲದೆ ಕಳೆದಿದ್ದೇನೆ. ಮಾತ್ರವಲ್ಲ, ನಾನು ಕಿರುತೆರೆಯಿಂದಲೇ ಬೆಳ್ಳಿ ಪರದೆಗೆ ಕಾಲಿಟ್ಟವನು. ಹಾಗಾಗಿ
ವಾಪಾಸು ಕಿರುತೆರೆಗೆ ಹೋಗುವುದು ದೊಡ್ಡ ವಿಷಯವೇನಲ್ಲ. ಆದರೆ `ಬಿಗ್ ಬಾಸ್' ವಿಚಾರಕ್ಕೆ ಬಂದರೆ ನನಗೆ ಅವರ ಕಡೆಯಿಂದ ಯಾವುದೇ ಆಹ್ವಾನ ಬಂದಿಲ್ಲ. ಹಾಗಾಗಿ ಆ ಬಗ್ಗೆ ಯೋಚಿಸುವ ಸಂದರ್ಭವೂ ಬಂದಿಲ್ಲ. ಈಗಂತೂ ಸಿನಿಮಾ ಚಿತ್ರೀಕರಣ ಶುರುವಾದ ಕಾರಣ ಒಪ್ಪಿಕೊಂಡ ಚಿತ್ರಗಳನ್ನು ಪೂರ್ತಿ ಮಾಡುವುದು ಮುಖ್ಯವಾಗುತ್ತದೆ.

ತಕ್ಕ ಮಟ್ಟಿಗೆ ಸಂಪಾದನೆ ಇರುವಾಗಲೂ ಸರಳವಾಗಿರುವ ನಿಮ್ಮ ವರ್ತನೆಗೆ ಸ್ಫೂರ್ತಿ ಯಾರು?

ವಾಸ್ತವದ ಬಗ್ಗೆ ಅರಿವು ಇರುವುದೇ ನನ್ನ ಸರಳತೆಗೆ ಕಾರಣ. ಯಾಕೆಂದರೆ ಇದು ನನ್ನ ಬಲವಂತದ ವರ್ತನೆ ಅಲ್ಲ. ನಾನು ಸಹಜವಾಗಿ ಇರುವುದೇ ಹೀಗೆ. ನನ್ನ ಪ್ರಕಾರ ದುಬಾರಿತನದಿಂದ ಆ ಕ್ಷಣಕ್ಕೆ ಏನೋ ಖುಷಿ ಸಿಗಬಹುದಷ್ಟೇ. ಆದರೆ ಒಂದು ನಿಜವಾದ ಆತ್ಮತೃಪ್ತಿ ಲಭಿಸುವುದು ಚಿಕ್ಕಪುಟ್ಟ ವಿಚಾರಗಳಿಂದಲೇ. ನೀವು ಎಷ್ಟೇ ಎತ್ತರದಲ್ಲಿದ್ದರೂ ಒಂಟಿಯಾಗಿ ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಂಡಾಗ ಅಥವಾ ಒಂಟಿಯಾಗುವ ಪರಿಸ್ಥಿತಿ ಬಂದಾಗ ಸಣ್ಣ ಪುಟ್ಟ ಖುಷಿಗಳನ್ನು ಅನುಭವಿಸಲು ಮರೆತ ಹಾಗೆ ಅನಿಸಬಾರದು. ಹಾಗಾಗಿ ನನ್ನ ಪ್ರಕಾರ ಅದೇ ಶಾಶ್ವತ. ಇನ್ನಷ್ಟು ಆಳವಾಗಿ ನೋಡಿದರೆ ಯಾವುದೂ ಶಾಶ್ವತವಲ್ಲ. ಇದು ಕೋವಿಡ್ ಕಾಲದ ಜ್ಞಾನೋದಯವಲ್ಲ. ಜೀವನ ನೀರ ಮೇಲಿನ ಗುಳ್ಳೆ ಎಂದು ದಾಸರು ಅವತ್ತೇ ಹೇಳಿದ್ದಾರೆ. ಅದರಲ್ಲಿಯೂ ಸಿನಿಮಾ ಕಲಾವಿದನ ವೃತ್ತಿ ಜೀವನ ಕೂಡ ಗುಳ್ಳೆಯಂತೆಯೇ. ಎಲ್ಲ ದಿನ ಒಂದೇ ರೀತಿ ಇರಬಹುದು ಅನ್ನೋಕೆ ನಮ್ಮದೇನು ಸರ್ಕಾರಿ ಕೆಲಸವಲ್ಲವಲ್ಲ? ಹಾಗಾಗಿ ಈಗ ದುಡ್ಡು ಬಂತು ಅಂತ ಒಮ್ಮೆಲೆ ಲೈಫ್ ಸ್ಟೈಲ್ ಚೇಂಜ್ ಮಾಡ್ಕೊಂಡರೆ ಮುಂದೆ ಸಾಧಾರಣ ಬದುಕಿಗೆ ಒಗ್ಗಲಾಗದೆ ಸಫರ್ ಪಡೋ ಸಂದರ್ಭ ಬಂದೀತು!

`ಸತ್ಯ' ಖ್ಯಾತಿಯ ಗರ್ ಬಿಳಿಗೌಡ ನಟನಾಗಿದ್ದು ಹೇಗೆ?

ನಿಮ್ಮ ಯಶಸ್ಸಿಗೆ ನೀವು ಮುಖ್ಯವಾಗಿ ಯಾವುದಕ್ಕೆ ಅಥವಾ ಯಾರಿಗೆ ಋಣಿಯಾಗಿದ್ದೀರಿ?

ನನ್ನ ಯಶಸ್ಸಿನ ಕ್ರೆಡಿಟ್ ಮೊದಲು ಜನಗಳಿಗೇನೇ ಕೊಡಬೇಕು. ಯಾಕೆಂದರೆ ನಾನೇನು ಸಂಚಾರಿ ವಿಜಯ್ ಅವರಂತೆ ಎಕ್ಸ್ಟ್ರಾರ್ಡಿನರಿ ನಟ ಅಲ್ಲ. ರಂಗಭೂಮಿಯಿಂದ ತರಬೇತಿ ಪಡೆದು ಬಂದವನಲ್ಲ. ನನ್ನಿಂದಾಗುವ ಪಾತ್ರಗಳನ್ನಷ್ಟೇ ಮಾಡುತ್ತೇನೆ. ಸಿನಿಮಾದಲ್ಲಿ ಪ್ರೇಕ್ಷಕರು ನನ್ನ ಬಯಸಿಲ್ಲ ಎಂದರೆ ಇಂದು ನನಗೆ ಯಾರು ತಾನೇ ಅವಕಾಶ ಕೊಡುತ್ತಿದ್ದರು? "ಆಕ್ಟ್ ಚೆನ್ನಾಗಿ ಮಾಡುತ್ತಾನೆ" ಅಂದಮಾತ್ರಕ್ಕೆ ಯಾರು ಕರೀತಾರೆ? ಅವರು ಕರೆಯದಿದ್ದರೂ ತಪ್ಪಿಲ್ಲ. ಯಾಕೆಂದರೆ ದುಡ್ಡು ಹಾಕಿರುವ ನಿರ್ಮಾಪಕರು ಅದರ ರಿಟರ್ನ್ಸ್ ಬಗ್ಗೆ ಯೋಚಿಸುತ್ತಿರುತ್ತಾರೆ. ಯಾರಾದರೂ ಶಿಫಾರಸ್ಸು ಮಾಡಿದ್ರೆ ಅದು ಒಂದೆರಡು ಸಿನಿಮಾಕ್ಕಷ್ಟೇ ಅವಕಾಶ ನೀಡಬಹುದು. ಆದರೆ ನಾನಿದ್ದ ಸಿನಿಮಾಗಳೆಲ್ಲ ಬಿಡುಗಡೆಯಾಗಿ ಲಾಂಗ್ ರನ್ ಕಂಡಿದೆ ಎಂದರೆ ಅದಕ್ಕೆ ಜನ ಬೆಂಬಲ ಇರುವುದೇ ಕಾರಣ. ಅವರಿಗೆ ಜೀವನಪೂರ್ತಿ ಋಣಿಯಾಗಿದ್ದೇನೆ.

Follow Us:
Download App:
  • android
  • ios