Asianet Suvarna News Asianet Suvarna News

'ಓದು ಓದು ಅಂತ ಒತ್ತಡ': ಸತ್ಯ ಸೀರಿಯಲ್‌ನ ಹ್ಯಾಂಡ್ಸಂ ಸಾಗರ್ ಬಿಳಿ ಗೌಡ ನಟನಾಗಿದ್ದು ಹೇಗೆ ?

ಸಾಗರ್ ಬಿಳಿಗೌಡ ಎನ್ನುವುದು ಇವರ ಹೆಸರು. ಹೆಸರಿಗೆ ತಕ್ಕಂತೆ ಬೆಳ್ಳಗಿನ ಹುಡುಗ. ಸಾಗರದಂಥ ಕಲಿಕೆ! `ಸತ್ಯ' ಧಾರಾವಾಹಿಯ ಕಾರ್ತಿಕ್ ಪಾತ್ರದ ಮೂಲಕ ದೊಡ್ಡ ಜನಪ್ರಿಯತೆ ಪಡೆದಿದ್ದರೂ ಅದುವರೆಗೆ ಇವರು ಸಾಗಿ ಬಂದ ದಾರಿಯೇ ವಿಭಿನ್ನ.

Kannada serial Sathya hero Sagarbiligowda loves acting
Author
Bengaluru, First Published May 30, 2021, 1:04 PM IST

-ಶಶಿಕರ ಪಾತೂರು

ಅಸಿಸ್ಟೆಂಟ್ ಕಮಿಷನರ್ ಆಗಿದ್ದ ತಾತ, ಡೆಪ್ಯುಟಿ ಸೆಕ್ರಟರಿಯಾಗಿದ್ದ ತಂದೆ ಜೊತೆಗೆ ತಾಯಿಯೂ ಶಿಕ್ಷಕಿ. ಇಂಥದೊಂದು ಕುಟುಂಬದಲ್ಲಿ ಜನಿಸಿ ಕಲಾವಿದನಾಗುವ ಕನಸು ಕಾಣುವುದಕ್ಕೂ ಧೈರ್ಯ ಬೇಕು. ಆ ಧೈರ್ಯ ಸಾಗರ್‌ ಅವರಲ್ಲಿತ್ತು. ಶಾಲಾ ದಿನಗಳಿಂದಲೂ ನಟನಾಗಬೇಕು ಎನ್ನುವ ಆಸಕ್ತಿ ವ್ಯಕ್ತಪಡಿಸುತ್ತಲೇ ಬಂದಿದ್ದರು. ಆದರೆ ಕಾಲೇಜ್‌ ಸೇರುವ ಹೊತ್ತಿಗೆ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ನೀಡುವಂತೆ ಮನೆಯವರಿಂದ ಒತ್ತಡವಿತ್ತು.

ಅವರನ್ನು ನಿರಾಸೆ ಪಡಿಸದೆ ಸಾಗರ ದಾಟಿ ಲಂಡನ್‌ನಲ್ಲಿ ಎಮ್‌ಬಿಎ ಮಾಡಿದ್ದಾರೆ ಸಾಗರ್‌. ಭಾರತದಲ್ಲಿ ಮಾಸ್ಟರ್ ಇನ್ ಬಿಸ್ನೆಸ್‌ ಲಾ ಮಾಡಿದ್ದಾರೆ. ಕೊನೆಗೆ ಅಭಿನಯ ತರಬೇತಿ ಪಡೆದುಕೊಂಡು ಕಿರುತೆರೆಯ ಜನಪ್ರಿಯ ತಾರೆಯೂ ಆಗಿದ್ದಾರೆ. ಈ ಎಲ್ಲ ವಿಚಾರದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್ ಜೊತೆಗೆ ಅವರು ಮಾತನಾಡಿದ್ದಾರೆ.

ನೀವು ಪಾತ್ರಗಳನ್ನು ಆಯ್ಕೆ ಮಾಡುವ ವಿಧಾನ ಹೇಗೆ?

ಆದಷ್ಟು ವೈವಿಧ್ಯಮಯವಾದ ಪಾತ್ರ ಮಾಡಲು ಬಯಸುತ್ತೇನೆ. ಅದಕ್ಕೆ ತಕ್ಕ ಹಾಗೆ ನನಗೆ ಅವಕಾಶಗಳು ದೊರಕಿವೆ. ನನ್ನ ಮೊದಲ ಧಾರಾವಾಹಿ `ಕಿನ್ನರಿ'. ಅದರಲ್ಲಿ ನಂದು ಎನ್ನುವ ಮನೆ ಕೆಲಸದವನ ಪಾತ್ರ. ಮನೆ ಮಗನಂತೆ ಇದ್ದರೂ ಅನಾಥ. ಜಾಸ್ತಿ ಓದದೆ, ಪೆದ್ದನಂತೆ ಇರುವವನು. ಅದರ ಬಳಿಕ ನಟಿಸಿದ `ಮನಸಾರೆ'ಯಲ್ಲಿ ನಾನು ನಿಜ ಜೀವನದಲ್ಲಿ ಹೇಗಿರುತ್ತೇನೋ ಅದಕ್ಕೆ ಹತ್ತಿರವಾದ ಪಾತ್ರ.  ತಲೆಹರಟೆ, ತುಂಟಾಟ, ತಮಾಷೆ ತುಂಬಿದ ವ್ಯಕ್ತಿ.

ಇದು ಉಸಿರು ನೀಡುವ ಪ್ರಯತ್ನ- ಕವಿರಾಜ್

ಇದೀಗ ನಟಿಸುತ್ತಿರುವ `ಸತ್ಯ' ಧಾರಾವಾಹಿಯ ಕಾರ್ತಿಕ್ ತುಂಬ  ಒಳ್ಳೆಯ ವ್ಯಕ್ತಿ. ಹೆಚ್ಚು ಓದಿರುತ್ತಾನೆ. ಆದರೆ ಕತ್ತಲೆ, ಜಿರಲೆ ಎಂದದರೆ ಭಯ ಇರುತ್ತದೆ. ಯಾಕೆಂದರೆ ಆತ ತುಂಬ ರಕ್ಷಣಾ ವಲಯದೊಳಗೆ ಬೆಳೆದಂಥ ಶ್ರೀಮಂತ ಹುಡುಗ. ಈ ಪಾತ್ರಕ್ಕಂತೂ ಹೀಗೆಯೇ ಎನ್ನಬಹುದಾದ ಒಂದು ಇಮೇಜ್ ಇಲ್ಲ. ಆತ ನೋವಾದರೆ ಅಳುತ್ತಾನೆ, ಕೋಪ ಬಂದಾಗ ಹೊಡೆದಾಡುತ್ತಾನೆ, ನಂಬಿಕೆ ಕಂಡಾಗ ಪ್ರೀತಿಸುತ್ತಾನೆ. ಒಂದು ರೀತಿಯಲ್ಲಿ ಇದುವರೆಗೆ ಮಾಡಿರುವ ಪಾತ್ರಗಳಿಗಿಂತ ಕಷ್ಟ. ಯಾಕೆಂದರೆ ನಿಜ ಜೀವನದಲ್ಲಿ ತುಂಬ ರಫ್ ಆಗಿ ಮಾತನಾಡುತ್ತಿರುವ ನನಗೆ ಮುದ್ದು ಮುದ್ದಾಗಿ ಮಾತನಾಡುವುದು, ಮುಗ್ಧನಂತೆ ನಡೆದುಕೊಳ್ಳುವುದು ಎಂದರೆ ನಿಜಕ್ಕೂ ಚಾಲೆಂಜಿಂಗ್ ಆಗಿರುತ್ತದೆ.

ನಟನಾ ತರಬೇತಿಯ ಮೂಲಕ ನೀವು ಕಲಿತುಕೊಂಡಿದ್ದೇನು? 

ಪಾತ್ರದಲ್ಲಿರುವ ಚಾಲೆಂಜ್‌ ಎದುರಿಸುವ ಬಗ್ಗೆ ತರಬೇತಿ ಪಡೆದುಕೊಂಡಿದ್ದೇನೆ. ಮೊದಲು ಟಿ.ಎಸ್ ನಾಗಾಭರಣ ಅವರ ಬಳಿ ನಟನಾ ತರಬೇತಿ ಪಡೆದೆ. ಮೊದಲ ನಾಟಕವನ್ನು `ಬೆನಕ' ತಂಡದಲ್ಲೇ ಮಾಡಿದೆ. ಕೃಷ್ಣಮೂರ್ತಿ ಕವತ್ತಾರು ಅವರ ಬಳಿಯಲ್ಲಿ ಗುರುಕುಲ ಮಾದರಿಯಲ್ಲಿ ಅಭಿನಯ ಕಲಿತೆ. ಅಲ್ಲಿಗೆ ಸೇರುವ ಮೊದಲೇ "ನಿರ್ಧಿಷ್ಟ ಕಾಲಾವಧಿಯ ತರಬೇತಿ ಎಂದು ನಾನು ನೀಡಲಾರೆ. ಒಂದು ಹಂತದ ಬೆಳವಣಿಗೆ ನಿನ್ನಲ್ಲಿ ಕಂಡು 'ನೀನು ನೆಕ್ಸ್ಟ್ ಲೆವಲ್‌ಗೆ ಹೋಗಬಹುದು' ಎಂದು ನನಗೆ ಅನಿಸುವ ತನಕ ನನ್ನ ಬಳಿ ಕಲಿಯಬೇಕಾಗುತ್ತದೆ. ಹಾಗಿದ್ದರೆ ಮಾತ್ರ ಇಲ್ಲಿ ಸೇರಿಕೊಳ್ಳಬಹುದು" ಎಂದು ಅವರು ಕಂಡಿಶನ್ ಹಾಕಿದ್ದರು.

ರಾಕೇಶ್ ಮಯ್ಯ ಶಿವಣ್ಣ ಬಗ್ಗೆ ಹೇಳಿದ್ದೇನು ?

ನಾನು ಒಪ್ಪಿದ್ದೆ. ಬಳಿಕ ಅವರದೇ ಸಲಹೆಯಂತೆ ವಿದೇಶಕ್ಕೆ ಹೋಗಿ ಆರು ತಿಂಗಳು ಅಡ್ವಾನ್ಸ್ ಆಕ್ಟಿಂಗ್ ಕೋರ್ಸ್ ಕೂಡ ಮಾಡಿದ್ದೇನೆ. ಒಬ್ಬ ನಟ ಕ್ಯಾಮೆರಾ ಎದುರಿಸಬೇಕಾದರೆ ಏನೇನು ನೈಪುಣ್ಯತೆ ಇರಬೇಕು, ವಾಯ್ಸ್ ಮಾಡ್ಯುಲೇಶನ್ ಹೇಗೆ ಮೊದಲಾದ ಎಲ್ಲವನ್ನು ಕವತ್ತಾರು ಅವರೇ ಕಲಿಸಿದರು. ಪ್ರಸ್ತುತ ಸಿನಿಮಾದ ನಟನೆಗೂ ಸಿದ್ಧವಾಗಿದ್ದೇನೆ.

`ಸತ್ಯ'ದಂಥ ನಾಯಕಿ ಪ್ರಧಾನ ಧಾರಾವಾಹಿಯ ನಟನೆ ಸಿನಿಮಾ ಅವಕಾಶಗಳಿಗೆ ತಡೆಯಾಗದೆ?

ನಾಗಾಭರಣ ಅವರು ಒಂದು ಮಾತು ಹೇಳುತ್ತಿದ್ದರು "ಕಲಾವಿದ ಚಿಕ್ಕವನಿರಬಹುದು; ಆದರೆ ಯಾವ ಪಾತ್ರ ಕೂಡ ಚಿಕ್ಕದಲ್ಲ" ಎಂದು! ಅದರಲ್ಲಿಯೂ `ಸತ್ಯ' ಧಾರಾವಾಹಿಯನ್ನು ಗಮನಿಸಿದರೆ ಅದರಲ್ಲಿರುವ ಪಾತ್ರಗಳೇ ವಿಭಿನ್ನ. ಮಾತ್ರವಲ್ಲ, `ಪೈಲ್ವಾನ್', `ಹೆಬ್ಬುಲಿ', `ಗಜಕೇಸರಿ'ಯಂಥ ಚಿತ್ರಗಳನ್ನು ಮಾಡಿದ ತಂಡ ಅದು. ಅದಕ್ಕೆ ತಕ್ಕಂತೆ ಮೇಕಿಂಗ್ ವಿಚಾರದಲ್ಲಿಯೂ ಅಷ್ಟೇ; ನನಗೆ ಸಿನಿಮಾದಲ್ಲಿ ನಟಿಸಿದ ಅನುಭವವೇ ಆಗಿದೆ. ಯಾಕೆಂದರೆ ಎರಡು ಕ್ಯಾಮೆರಾಗಳು, ಲೈಟಿಂಗ್ ಕ್ವಾಲಿಟಿ, ಹೀಗೆ ಯಾವುದೇ ವಿಚಾರದಲ್ಲಿ ಕಾಂಪ್ರಮೈಸ್ ಇರಲಿಲ್ಲ. ಹೊಡೆದಾಟದ ದೃಶ್ಯಗಳಿದ್ದರೆ ಫೈಟ್ ಮಾಸ್ಟರ್ಸ್‌ ಬರುತ್ತಾರೆ.

ಬಿಗ್ ಬಾಸ್ ನನ್ನ ಮುಖವಾಡ ಕಳಚಿದೆ- ಪ್ರಶಾಂತ್ ಸಂಬರ್ಗಿ

ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಗಾಡಿ ಚೇಸಿಂಗ್ ದೃಶ್ಯ ಚಿತ್ರೀಕರಣ ಮಾಡುವಾಗಲೂ ಅಷ್ಟೇ ಅದು ಸುಮ್ಮನೇ ಒಂದು ಚೇಸಿಂಗ್ ಆಗಿರುವುದಿಲ್ಲ. ಅಲ್ಲಿಯೂ ಫೈಟ್ ಮಾಸ್ಟರ್ಸ್‌ ಇರುತ್ತಾರೆ. ಸಿನಿಮಾ ಟೀಮ್, ರಿಗ್‌ ಇರುತ್ತದೆ. ಈ ಎಲ್ಲ ಕ್ವಾಲಿಟಿ ಪರದೆಯ ಮೇಲೆಯೂ ಕಾಣಿಸುತ್ತದೆ. ಹಾಗಾಗಿ ಇದು ಕೂಡ ಸಿನಿಮಾ ನಟನೆಗೆ ಪೂರಕವಾದ ಒಂದು ಹೆಜ್ಜೆ ಎಂದೇ ನಂಬಿದ್ದೇನೆ.

ಪ್ರಸ್ತುತ ಲಾಕ್ಡೌನ್ ಕಾರಣ ಚಿತ್ರೀಕರಣ ನಿಂತು ಹೋಗಿರುವುದರಿಂದ ನಿಮಗಾಗಿರುವ ತೊಂದರೆಗಳೇನು?

ದೇವರ ದಯೆಯಿಂದ ಆರ್ಥಿಕವಾಗಿ ನನಗೆ ತೊಂದರೆಗಳಾಗಿಲ್ಲ. ಆದರೆ ಧಾರಾವಾಹಿ ಸೆಟ್‌ನಲ್ಲಿ ಒಂದು ಒಳ್ಳೆಯ ವಾತಾವರಣ ಕಂಡುಕೊಂಡಿರುತ್ತೇನೆ. ನಾನು ಹೋದೊಡನೆ ಪ್ರೊಡಕ್ಷನ್ ಹುಡುಗರು ತಾವಾಗಿಯೇ ನೆನಪಿಸಿಕೊಂಡು ಬಂದು ನನಗೆ ಟೀ ಕಾಫಿ ತಂದುಕೊಡುತ್ತಾರೆ. ಕಾರಣ ನಾನು ಗಲಾಟೆ ಮಾಡಬಹುದು ಅಂತಾನೋ, ಹೀರೋ ಬಂದಿದ್ದಾರೆ ಅಂತಾನೋ ಅಲ್ಲ. ಪ್ರೊಡಕ್ಷನ್ ಬಾಯ್ಸ್, ಲೈಟ್ ಹುಡುಗರಿಂದ ಹಿಡಿದು ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುತ್ತಿರುತ್ತೇನೆ. ಈಗ ನಮ್ಮ ಕ್ಷೇತ್ರದಲ್ಲೇ ದಿನಗೂಲಿ ಮಾಡುತ್ತಿರುವ ಇನ್ನಿತರ ಕಾರ್ಮಿಕರ ಪರಿಸ್ಥಿತಿ ಬಗ್ಗೆ ಯೋಚಿಸಿದಾಗ ಆತಂಕ ಮೂಡುತ್ತದೆ. ಪರಿಸ್ಥಿತಿ ಎಷ್ಟು ಕೆಟ್ಟದ್ದಾಗಿದೆ ಎಂದರೆ ಸರ್ಕಾರದಲ್ಲಿ ಒಂದೊಳ್ಳೆಯ ಹುದ್ದೆಯಲ್ಲಿದ್ದವರಿಗೂ ಸರಿಯಾದ ರೀತಿ ಚಿಕಿತ್ಸೆ ಪಡೆಯುವುದು ಕಷ್ಟವಾಗುತ್ತಿದೆ.  ಕೊರೊನಾ ಸಂದರ್ಭದಲ್ಲಿ ಚಿತ್ರೀಕರಣ ನಡೆಸುವುದಂತೂ ಖಂಡಿತವಾಗಿ ರಿಸ್ಕ್‌. ಹಾಗಾಗಿ ಚಿತ್ರೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎನ್ನಬಹುದು.

Follow Us:
Download App:
  • android
  • ios