Asianet Suvarna News Asianet Suvarna News

ಕನ್ನಡತಿಯ ಪ್ರತಿಭೆ `ಪ್ರತಿಮಾ' ಎನ್ನುವ ಸಮೀಕ್ಷಾ..!

`ಕನ್ನಡತಿ' ಧಾರಾವಾಹಿಯಲ್ಲಿ ಪ್ರತಿಮಾ ಎಂದರೆ ಸೌಂದರ್ಯದ ಪ್ರತಿಮೆ. ತಮ್ಮ ಒಲವು ತುಂಬಿದ ಕಂಗಳು, ನಿಷ್ಕಲ್ಮಶ ನಗುವಿನಿಂದ ಸದಾ ಸೆಳೆಯುವ ಈಕೆ ನಮ್ಮದೇ ಅಕ್ಕನೋ, ಅತ್ತಿಗೆಯೋ ಆಗಬಾರದಿತ್ತೇ ಎಂದು ಅಂದುಕೊಂಡವರು ಹಲವರು. ಅಂಥ ಪಾತ್ರಕ್ಕೆ ಜೀವಕೊಟ್ಟ ಸಮೀಕ್ಷಾ ಸುವರ್ಣ ನ್ಯೂಸ್ ಕಾಮ್ ಜೊತೆಗೆ ಮಾತನಾಡಿದ್ದಾರೆ.
 

Colors Kannada serial Kannadathi Actress Sameekshas interview
Author
Bengaluru, First Published Mar 25, 2021, 9:36 AM IST

ಸಮೀಕ್ಷಾ ಅವರಿಗೆ `ಕನ್ನಡತಿ' ಎಂಟನೇ ಧಾರಾವಾಹಿ. ಆದರೆ ಈ ಬಗ್ಗೆ ಒಂದು ಸಮೀಕ್ಷೆ ನಡೆಸಿದಾಗ ಅವರನ್ನು ಕನ್ನಡತಿ ಪ್ರತಿಮಾ ಎಂದು ಗುರುತಿಸುತ್ತಿರುವವರೇ ಹೆಚ್ಚು! ಇವರ ತಂದೆ ಕುಂದಾಪುರದ ಕೋಟದವರು. ತಾಯಿ ತೀರ್ಥಹಳ್ಳಿ ನಿವಾಸಿ. ಸಮೀಕ್ಷಾ ಪ್ರಸ್ತುತ ಬೆಂಗಳೂರಲ್ಲೇ ಇದ್ದಾರೆ. ಕನ್ನಡತಿ ತಮಗೆ ಪಾತ್ರವಾಗಿ ಮಾತ್ರವಲ್ಲ ಒಟ್ಟು ಧಾರಾವಾಹಿಯಾಗಿಯೂ ವಿಭಿನ್ನ ಎನ್ನುವ ಇವರು ಅದಕ್ಕೆ ಕಾರಣಗಳನ್ನೂ ಕೊಡುತ್ತಾರೆ. "ಧಾರಾವಾಹಿಯ ಹೆಸರಿನಲ್ಲಷ್ಟೇ ಅಲ್ಲ; ಒಟ್ಟು ಕತೆಯಲ್ಲಿಯೂ ಕನ್ನಡತನಕ್ಕೆ ಒತ್ತು ನೀಡಲಾಗಿದೆ. ಪ್ರತಿ ಸಂಚಿಕೆಯ ಕೊನೆಯಲ್ಲಿ ಕನ್ನಡ ಪದಗಳ ಅರ್ಥ ಹೇಳುವ ಸಂದರ್ಭಗಳು ಕೂಡ ಬೇರೆ ಯಾವ ಧಾರಾವಾಹಿಗಳಲ್ಲಿಯೂ ಕಾಣುವುದು ಕಷ್ಟ. ಹಾಗಾಗಿ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಮೆಚ್ಚುವಂಥ ಸನ್ನಿವೇಶ ಈ ಧಾರಾವಾಹಿಯಲ್ಲಿದೆ" ಎನ್ನುತ್ತಾರೆ ಸಮೀಕ್ಷಾ. ಅವರ ವೃತ್ತಿ ಬದುಕಿನ ಇದುವರೆಗಿನ ಪಯಣದ ಬಗ್ಗೆ ಸಣ್ಣದೊಂದು ಬೆಳಕು ಚೆಲ್ಲುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. 

- ಶಶಿಕರ ಪಾತೂರು
 
ನೀವು ಕಿರುತೆರೆಗೆ ಕಾಲಿಟ್ಟಿದ್ದು ಹೇಗೆ?
ಅದು ಐದಾರು ವರ್ಷಗಳ ಹಿಂದಿನ ಮಾತು. ನಿರ್ದೇಶಕ ಎಂ.ಡಿ ಕೌಶಿಕ್ ಅವರು ನನ್ನ ಕೌಟುಂಬಿಕ ಸ್ನೇಹಿತ. ಅವರು `ನಮ್ಮೂರ ಶಾಲೆ' ಎನ್ನುವ ಡಾಕ್ಯುಮೆಂಟರಿ ಮಾಡಿದ್ದರು. ಅದರ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟೆ. ಆಗ ನಟನೆಯನ್ನು ವೃತ್ತಿಯಾಗಿ ಸ್ವೀಕರಿಸುವ ಆಸಕ್ತಿ ನನ್ನಲ್ಲಿ ಮೂಡಿತು. ಆದರೆ ಧಾರಾವಾಹಿ ಕ್ಷೇತ್ರಕ್ಕೆ ಯಾವ ರೀತಿ ಎಂಟ್ರಿ ಕೊಡಬಹುದು ಎನ್ನುವ ಬಗ್ಗೆ ನನಗೆ ಐಡಿಯಾ ಇರಲಿಲ್ಲ. ಹಾಗಾಗಿ ಉಷಾ ಭಂಡಾರಿಯವರ `ಆಪ್' (An Actor Prepares) ಸಂಸ್ಥೆಗೆ ಸೇರಿಕೊಂಡೆ. ಅಲ್ಲಿ ಮೂರು ತಿಂಗಳ ತರಬೇತಿ ಪಡೆದು ಮರಳುವಾಗ, "ಇನ್ನು ಧಾರಾವಾಹಿಗೆ ಪಾತ್ರಧಾರಿಗಳನ್ನು ಆಡಿಶನ್ ಮಾಡುವಾಗ ನಿಮಗೂ ಕರೆ ಬರುತ್ತದೆ" ಎಂದು ತಿಳಿಸಿದ್ದರು. ಅದರಂತೆ ಕಲರ್ಸ್ ವಾಹಿನಿಯಿಂದ ಕರೆ ಬಂತು. ಆದರೆ ಫೊಟೊ ಕೊಟ್ಟು ಎರಡು ತಿಂಗಳಾದರೂ ಅಲ್ಲಿಂದ ಯಾವುದೇ ಸೂಚನೆ ಬರದೇ ಹೋದಾಗ ಅವರಿಗೆ ಫೋನ್ ಮಾಡಿ ವಿಚಾರಿಸಿದೆ. "ನೀವು ಆಯ್ಕೆ ಆಗಿದ್ದೀರಿ; ಸದ್ಯದಲ್ಲೇ ಕರೆಯುತ್ತೇವೆ" ಎಂದರು. ಕೊನೆಗೆ `ಗಾಂಧಾರಿ' ಧಾರಾವಾಹಿ ನಿರ್ದೇಶಕ ಲೋಕೇಶ್ ಅವರು ಆಡಿಶನ್‌ಗೆ ಕರೆದರು. ಪಾತ್ರಕ್ಕೆ ಆಯ್ಕೆ ಆಗಿರುವುದಾಗಿ ವಾಹಿನಿಯಿಂದ ಸೂಚನೆ ಸಿಕ್ಕಿತು.

Colors Kannada serial Kannadathi Actress Sameekshas interview

ಗಡಿನಾಡಿನ ಯುವನಟ ರಘು ಭಟ್ ಸಂದರ್ಶನ

ನಟಿಯಾದ ಮೇಲೆ ನಿಮಗೆ ಜನರಿಂದ ಸಿಕ್ಕಂಥ ಪ್ರತಿಕ್ರಿಯೆಗಳು ಹೇಗಿತ್ತು?
ಕಲರ್ಸ್‌ ವಾಹಿನಿಯಲ್ಲಿ `ಗಾಂಧಾರಿ'ಯ ಬಳಿಕ, ಕಸ್ತೂರಿ ವಾಹಿನಿಯಲ್ಲಿ `ರಾಜಕುಮಾರಿ', ಝೀ ವಾಹಿನಿಯಲ್ಲಿ `ಯಾರೇ ನೀ ಮೋಹಿನಿ', ಸುವರ್ಣ ವಾಹಿನಿಯಲ್ಲಿ `ಇಂತಿ ನಿಮ್ಮ ಆಶಾ', ಸೇರಿದಂತೆ ವಿವಿಧ ಚಾನೆಲ್‌ಗಳಲ್ಲಿ ಸುಮಾರು ಏಳೆಂಟು ಧಾರಾವಾಹಿಗಳಲ್ಲಿ ಪಾತ್ರ ಮಾಡಿದ್ದೇನೆ. ಕಲರ್ಸ್ ಕನ್ನಡದಲ್ಲಿಯೇ `ನಮ್ಮನೆ ಯುವರಾಣಿ', `ಇಷ್ಟದೇವತೆ' ಮತ್ತು ಈಗ `ಕನ್ನಡತಿ'ಯ ತನಕ ಪಯಣ ಮುಂದುವರಿದಿದೆ. ಮೊದಲನೇ ಧಾರಾವಾಹಿ `ಗಾಂಧಾರಿ' ನನಗೆ ಎಲ್ಲೂ ಇರದ ಜನಪ್ರಿಯತೆ ತಂದುಕೊಟ್ಟಿತ್ತು. ಜನ  ನನ್ನನ್ನು ಎಲ್ಲೇ ಕಂಡರೂ "ನೀವು ಗಾಂಧಾರಿ ವಿಜಯ ಅವರಲ್ವಾ?" ಎಂದು ಕೇಳುತ್ತಿದ್ದರು. ಅದರ ಬಳಿಕ 'ಯಾರೇ ನೀ ಮೋಹಿನಿ' ಧಾರಾವಾಹಿಯ ಪಾತ್ರದ ಬಗ್ಗೆಯೂ ಜನ ಈಗಲೂ ಮಾತನಾಡುತ್ತಾರೆ. ಈಗ `ಕನ್ನಡತಿ'ಯಲ್ಲಿ  ಪ್ರತಿಮಾ ಪಾತ್ರ ಮಾಡಿದ ಬಳಿಕವಂತೂ ಜನ ನನ್ನನ್ನು ಮಾಸ್ಕ್ ಹಾಕಿದ್ದರೂ ಗುರುತು ಹಿಡಿದು ಬಂದು ಮಾತನಾಡಿಸುತ್ತಾರೆ! ಈ ಮಟ್ಟದ  ಪ್ರತಿಕ್ರಿಯೆ ಸಿಗುತ್ತಿರುವುದಕ್ಕೆ ಖುಷಿಯಿದೆ.

ಹೊಸ ಲುಕ್ ನಲ್ಲಿ `ಹೂಮಳೆ' ಶ್ರೀರಾಮ್

ಮನೆಯಲ್ಲಿನ ಪ್ರೋತ್ಸಾಹ ಮತ್ತು ಸಿನಿಮಾ ನಟನೆಯ ಅನುಭವದ ಬಗ್ಗೆ ಹೇಳಿ
ನಾನು ಕಲಾವಿದೆಯಾಗಿ ಗುರುತಿಸಿಕೊಂಡದ್ದೇ ಮದುವೆಯ ಬಳಿಕ. ಹಾಗಾಗಿ ಅದರಲ್ಲಿ ನನ್ನ ಗಂಡನ ಪ್ರೋತ್ಸಾಹ ತುಂಬಾನೇ ಇದೆ. ಮಕ್ಕಳಿಗೆ ಕೂಡ ನನ್ನ ಪಾತ್ರ ತಂದು ಕೊಡುತ್ತಿರುವ ಜನಪ್ರಿಯತೆಯ ಬಗ್ಗೆ ಖುಷಿ ಇದೆ. ನಮ್ಮಮ್ಮನಂತು ಮೊದಲಿನಿಂದಲೂ ಕಲಾವಿದೆಯಾಗುವ ನನ್ನ ಆಸೆಗೆ ಒತ್ತಾಸೆ ನೀಡುತ್ತಲೇ ಬಂದಿದ್ದಾರೆ. ಹಾಗಾಗಿಯೇ ಸಿನಿಮಾಗಳಲ್ಲಿ ಕೂಡ ನಟಿಸಲು ಸಾಧ್ಯವಾಯಿತು. ಇದುವರೆಗೆ `ಪುಷ್ಪಕ ವಿಮಾನ', `ನಟರಾಜ ಸರ್ವೀಸ್' ಹೀಗೆ ಸುಮಾರು ಹತ್ತರಷ್ಟು ಚಿತ್ರಗಳಲ್ಲಿ ವಿವಿಧ ರೀತಿಯ ಪಾತ್ರಗಳನ್ನುಮಾಡಿದ್ದೇನೆ. ಅವುಗಳಲ್ಲಿ `ಚಮಕ್' ಸಿನಿಮಾದ ಪಾತ್ರವನ್ನು ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಅದರಲ್ಲಿ ನಾನು ನಟಿಸಿದ ತುಣುಕೊಂದು `ಟಿಕ್ ಟಾಕ್'ನಲ್ಲಿಯೂ ವೈರಲ್ ಆಗಿತ್ತು. "ಚಿಕ್ಕ ವಯಸ್ಸಲ್ಲಿ ಗೂಬೆ ತರಹ ಇದ್ದೆ; ಈಗ ಗೊಂಬೆ ತರಹ ಆಗಿದ್ದೀಯ" ಎನ್ನುವ ಆ ಸಂಭಾಷಣೆ ಬಹುಶಃ ನಿಮಗೂ ನೆನಪಿರಬಹುದು! ಅದರ ಬಳಿಕ `ಗೀತ' ಸಿನಿಮಾದಲ್ಲಿ ಗಣೇಶ್ ಅವರೊಂದಿಗೆ ನಟಿಸುವಾಗ ನಾವು ಈ ಡೈಲಾಗ್ ಫೇಮಸ್ ಆದ ಬಗ್ಗೆ ಮಾತನಾಡಿ ನಕ್ಕಿದ್ದೆವು. 

ಕನ್ನಡತಿಯ ತಾಪಸಿ ಈ ದೀಪ ಶ್ರೀ
 

Follow Us:
Download App:
  • android
  • ios