ಈ ರಾಜ್ಯದಲ್ಲಿ ಇನ್ಮುಂದೆ ಕೇವಲ 500 ರೂ.ಗೆ ಎಲ್ಪಿಜಿ ಸಿಲಿಂಡರ್ ಪಡೀಬಹುದು!
ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಹಾಗೂ ಬಿಪಿಎಲ್ ಕುಟುಂಬಗಳಿಗೆ ಇನ್ಮುಂದೆ 500 ರೂ. ಗೆ ಎಲ್ಪಿಜಿ ಸಿಲಿಂಡರ್ ನೀಡೋ ಪ್ಲ್ಯಾನ್ ಮಾಡಿದೆ ರಾಜಸ್ಥಾನ ಸರ್ಕಾರ.
ಜೈಪುರ (ಜೂನ್ 7, 2023): ರಾಜಸ್ಥಾನದಲ್ಲಿ ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ನಾನಾ ತಂತ್ರಗಳನ್ನು ಹೂಡುತ್ತಿದೆ. ಅದೇ ರೀತಿ, ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಹಾಗೂ ಬಿಪಿಎಲ್ ಕುಟುಂಬಗಳಿಗೆ ಇನ್ಮುಂದೆ 500 ರೂ. ಗೆ ಎಲ್ಪಿಜಿ ಸಿಲಿಂಡರ್ ನೀಡೋ ಪ್ಲ್ಯಾನ್ ಮಾಡಿದೆ.
ಹೌದು, 14 ಲಕ್ಷ ಫಲಾನುಭವಿಗಳಿಗೆ 60 ಕೋಟಿ ರೂ. ಸಬ್ಸಿಡಿ ವರ್ಗಾವಣೆಯೊಂದಿಗೆ, ರಾಜಸ್ಥಾನವು ಈಗ ಉಜ್ವಲ ಸಿಲಿಂಡರ್ನ ಬೆಲೆ 500 ರೂ. ಗೆ ನೀಡುವ ಮೊದಲ ರಾಜ್ಯವಾಗಿದೆ. ಬಿಪಿಎಲ್ ಕುಟುಂಬಗಳ ಗ್ಯಾಸ್ ಸಂಪರ್ಕ ಹೊಂದಿರುವವರಿಗೂ ಸಹಾಯಧನ ನೀಡಲಾಗುವುದು ಎಂದು ತಿಳಿದುಬಂದಿದೆ. ಸೋಮವಾರ ರಾಜಸ್ಥಾನ ರಾಜಧಾನಿ ಜೈಪುರದಲ್ಲಿ ನಡೆದ ರಾಜ್ಯ ಮಟ್ಟದ ಲಾಭಾರ್ತಿ ಉತ್ಸವದಲ್ಲಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಬ್ಸಿಡಿ ಮೊತ್ತವನ್ನು ವರ್ಗಾಯಿಸಿದರು.
ಇದನ್ನು ಓದಿ: ರಾಜಸ್ಥಾನದಲ್ಲೂ 100 ಯುನಿಟ್ ವಿದ್ಯುತ್ ಫ್ರೀ
ಈ ಮಧ್ಯೆ, ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಅಶೋಕ್ ಗೆಹ್ಲೋಟ್, "ಬಿಜೆಪಿ ನಮ್ಮ ಯೋಜನೆಗಳನ್ನು ನಿಲ್ಲಿಸುತ್ತದೆ, ಆದರೆ ನಾವು ಸಿಲಿಂಡರ್ಗಳನ್ನು ಕಡಿಮೆ ಮಾಡುವ ಮೂಲಕ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಪ್ರಚಾರ ನೀಡಿದ್ದೇವೆ" ಎಂದು ಹೇಳಿದರು. ಕಾನೂನಿನ ಮೂಲಕ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡಿದ ಅಶೋಕ್ ಗೆಹ್ಲೋಟ್, ಇದು ಚುನಾವಣಾ ಕೇಂದ್ರಿತ ಯೋಜನೆ ಅಲ್ಲ. ಏಕೆಂದರೆ ವಿದೇಶಗಳಲ್ಲಿ ನಡೆಯುವಂತೆಯೇ ಜನರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದರ ಮೇಲೆ ತಮ್ಮ ಗಮನ ಯಾವಾಗಲೂ ಇರುತ್ತದೆ ಎಂದೂ ಹೇಳಿದರು.
ಅಲ್ಲದೆ, "ಭಾರತ ಸರ್ಕಾರವು ಸಹ ಈ ಕಾನೂನನ್ನು ಜಾರಿಗೊಳಿಸಬೇಕೆಂದು ನಾವು ಬಯಸುತ್ತೇವೆ. ಅದು 2,000 ಅಥವಾ 3,000 ಆಗಿರಲಿ, ಜನರು ಜೀವನಕ್ಕೆ ಯೋಗ್ಯವಾದ ಪಿಂಚಣಿ ಪಡೆಯಬೇಕು." ವಿಧವೆಯರು, ಎಸ್ಸಿ-ಎಸ್ಟಿ ಸಮುದಾಯಗಳು ಮತ್ತು ಬಡವರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ಮುಂದಿನ ಪ್ರಣಾಳಿಕೆಯನ್ನು ರಚಿಸಲಾಗುವುದು ಎಂದೂ ರಾಜಸ್ಥಾನ ಸಿಎಂ ಹೇಳಿದರು.
ಇದನ್ನೂ ಓದಿ: ಭ್ರಷ್ಟಾಚಾರ ಇದ್ದಲ್ಲಿ ಜನ ಸರ್ಕಾರ ಉಳಿಸಲ್ಲ: ಬೊಮ್ಮಾಯಿ ಸರ್ಕಾರ ತೋರಿಸಿ ಗೆಹ್ಲೋಟ್ಗೆ ಸಚಿನ್ ಪೈಲಟ್ ಎಚ್ಚರಿಕೆ!
ಸಬ್ಸಿಡಿ ಗ್ಯಾಸ್ ಸಿಲಿಂಡರ್ ಬಜೆಟ್ ಭಾಷಣದಲ್ಲಿ ಘೋಷಿಸಿದ ಅಶೋಕ್ ಗೆಹ್ಲೋಟ್ ಅವರ ಹಣದುಬ್ಬರ ಪರಿಹಾರ ಪ್ಯಾಕೇಜ್ನ ಭಾಗವಾಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಸರಿಸುಮಾರು 76 ಲಕ್ಷ ಉಜ್ವಲ ಮತ್ತು ಬಿಪಿಎಲ್ ಫಲಾನುಭವಿಗಳಿದ್ದು, ಅಶೋಕ್ ಗೆಹ್ಲೋಟ್ ಸರ್ಕಾರ ಆಯೋಜಿಸಿರುವ ಹಣದುಬ್ಬರ ಪರಿಹಾರ ಕ್ಯಾಂಪ್ಗಳಲ್ಲಿ 14 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದಾರೆ. ಯೋಜನೆಯ ಲಾಭ ಪಡೆಯಲು ಕ್ಯಾಂಪ್ನಲ್ಲಿ ನೋಂದಣಿ ಕಡ್ಡಾಯವಾಗಿದೆ. ಈ ಯೋಜನೆಯಿಂದ ಸರ್ಕಾರಕ್ಕೆ ಪ್ರತಿ ವರ್ಷ ಸುಮಾರು 750 ಕೋಟಿ ರೂ. ಆರ್ಥಿಕ ಹೊರೆ ಬೀಳುವ ನಿರೀಕ್ಷೆ ಇದ್ದು, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾದರೆ ಅದು ಹೆಚ್ಚಾಗಬಹುದು.
ಈ ತಿಂಗಳ ಆರಂಭದಲ್ಲಿ ಅಶೋಕ್ ಗೆಹ್ಲೋಟ್ ಅವರು ಕರ್ನಾಟಕದ ಗೃಹ ಜ್ಯೋತಿ ಯೋಜನೆಯಂತೆ ಫ್ರೀ ವಿದ್ಯುತ್ ಘೋಷಿಸಿದ್ದಾರೆ. 100 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದು, ಇದು ಸುಮಾರು 1.24 ಕೋಟಿ ಕುಟುಂಬಗಳಿಗೆ ಪ್ರಯೋಜನ ನೀಡುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: From the India Gate: ಇದೇ ಭವಾನಿ ರೇವಣ್ಣ ಶಕ್ತಿ; 2000 ಕೋಟಿ ರೂ. ಭರವಸೆಗಾಗಿ ತಲೆಮರೆಸಿಕೊಂಡ ಸಚಿವರು!