'ಲೋನ್ಗಾಗಿ ನಮ್ಮ ಬಳಿ ಬರಬೇಡಿ..' ಬಜಾಜ್ ಫಿನ್ಸರ್ವ್ ಎಂಡಿ ಹೇಳಿಕೆಗೆ ನೆಟ್ಟಿಗರ ಆಕ್ರೋಶ!
ಬಜಾಜ್ ಫಿನ್ಸರ್ವ್ ಲಿಮಿಟೆಡ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಬಜಾಜ್, ಮೊಬೈಲ್ ಫೋನ್ ಬಳಕೆದಾರರು ಶೀಘ್ರದಲ್ಲೇ ಬಜಾಜ್ ಫೈನಾನ್ಸ್ನಿಂದ 'ರೈಟ್ ಟು ಫಾರ್ಗಟನ್' ಹೊಂದಿರುತ್ತಾರೆ ಎಂದು ಹೇಳಿದ್ದಾರೆ. ಆದರೆ, ಖಚಿತವಾಗಿ ಹೇಳುತ್ತೇನೆ. ನಿಮ್ಮ ಉತ್ಪನ್ನಗಳ ಖರೀದಿ ಹಾಗೂ ಪರಿಹಾರಕ್ಕಾಗಿ ಎಂದಿಗೂ ನೀವು ನಮ್ಮ ಬಳಿ ಹಿಂತಿರುಗುವ ಅಗತ್ಯವಿಲ್ಲ' ಎಂದಿದ್ದಾರೆ.
ಮುಂಬೈ (ಜೂ.8): ಬಜಾಜ್ ಫೈನಾನ್ಸ್ನ ಪ್ರತಿನಿಧಿಗಳಿಂದ ನಿರಂತರ ಕರೆಗಳಿಂದ ನೀವು ತೊಂದರೆಗೆ ಒಳಗಾಗಿದ್ದೀರಾ? ಅಂತವರಿಗೆ ಆಗುವಂಥ ಸಮಸ್ಯೆಯನ್ನು ತಪ್ಪಿಸಲು ಶೀಘ್ರದಲ್ಲಿಯೇ ಬಜಾಜ್ ಫೈನಾನ್ಸ್ ರೈಟ್ ಟು ಫಾರ್ಗಟನ್ (ಮರೆತುಹೋಗುವ ಹಕ್ಕು) ಸೇವೆಯನ್ನು ತನ್ನ ಗ್ರಾಹಕರಿಗೆ ನೀಡಲಿದೆ. ಆದರೆ, ಇದನ್ನು ವಿವರಿಸವಾಗ ಅವರು ಹೇಳಿದ ಕೆಲವೊಂದು ಮಾತುಗಳು ಇಷ್ಟು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಲಿದೆ ಎಂದು ಅವರೂ ಕೂಡ ನಿರೀಕ್ಷೆ ಮಾಡಿರಲಿಲ್ಲ. ಬಜಾಜ್ ಫೈನಾನ್ಸ್ನ ಅಧೀನದಲ್ಲಿರುವ ಬಜಾಜ್ ಫಿನ್ಸರ್ವ್ ಲಿಮಿಟೆಡ್ ಕಂಪನಿಯ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಸಂಜೀವ್ ಬಜಾಜ್, ಶೀಘ್ರದಲ್ಲಿಯೇ ಮೊಬೈಲ್ ಗ್ರಾಹಕರು ಬಜಾಜ್ ಫೈನಾನ್ಸ್ನಿಂದ ರೈಟ್ ಟು ಫಾರ್ಗಟನ್ ಸೇವೆಯನ್ನು ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. 'ಇನ್ನು ಮೂರು ತಿಂಗಳ ಸಮಯದಲ್ಲಿ ನಮ್ಮ ವೆಬ್ಸೈಟ್ ಹಾಗೂ ಮೊಬೈಲ್ ಅಪ್ಲಿಕೇಶನ್ನಲ್ಲಿ ಒಂದು ಆಯ್ಕೆ ಸೇರ್ಪಡೆಯಾಗಲಿದೆ. ಹಾಗೇನಾದರೂ ನೀವು ಈ ಆಯ್ಕೆಯನ್ನು ಕ್ಲಿಕ್ ಮಾಡಿದಲ್ಲಿ ಬಜಾಜ್ ಫೈನಾನ್ಸ್ನ ಅಧಿಕಾರಿಗಳು ನಿಮಗೆ ಇನ್ನೆಂದೂ ಕರೆ ಮಾಡಿ ಸಮಸ್ಯೆ ನೀಡೋದಿಲ್ಲ. ನಮ್ಮೊಂದಿಗೆ ರೈಟ್ ಟು ಫಾರ್ಗಟನ್ ಆಗುವ ಅವಕಾಶ ಇದಾಗಿದೆ. ಆದರೆ, ಒಂದಂತೂ ಖಚಿತಪಡಿಸಿಕೊಳ್ಳಿ. ಆ ಬಳಿಕ ನೀವೆಂದೂ ನಿಮ್ಮ ಉತ್ಪನ್ನಗಳು ಹಾಗೂ ಅದರ ಖರೀದಿ ಪರಿಹಾರಕ್ಕಾಗಿ ನಮ್ಮ ಬಳಿ ಬರುವ ಅಗತ್ಯವಿಲ್ಲ' ಎಂದು ಲೋನ್ ನೀಡುವ ಸಲುವಾಗಿ ಬಜಾಜ್ ಫೈನಾನ್ಸ್ ಮಾಡುವ ಟೆಲಿಮಾರ್ಕೆಟಿಂಗ್ ಕರೆಗಳ ಬಗ್ಗೆ ಹೇಳಿದ್ದಾರೆ.
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಟೆಲಿಕಾಂಗಳು ಕಿರಿಕಿರಿ ಮಾಡುವ ವಾಣಿಜ್ಯ ಸಂವಹನಗಳ (ಯುಸಿಸಿ) ಬೆದರಿಕೆಯನ್ನು ತಡೆಯಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿರುವ ಸಮಯದಲ್ಲಿ ಬಜಾಜ್ ಫೈನಾನ್ಸ್ನಿಂದ ಈ ಹೇಳಿಕೆ ಬಂದಿದೆ. ಕೆಲವೊಮ್ಮೆ ಈ ಕರೆಗಳು ಮೋಸ ಹಾಗೂ ವಂಚನೆಗಳಿಗೂ ಕಾರಣವಾಗುತ್ತದೆ ಎಂದು ಹೇಳಿದೆ.
ಆದರೆ, ಸುನೀಲ್ ಬಜಾಜ್ ಹೇಳಿರುವ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಅವರ ಈ ರೀತಿಯ ವರ್ತನೆ ಹಾಗೂ ದುರಹಂಕಾರ ಉದ್ಯಮಕ್ಕೆ ಒಳ್ಳೆಯದಲ್ಲ ಎಂದು ಕೆಣಕಿದ್ದಾರೆ."ಸಂಜೀವ್ ಬಜಾಜ್ ಭ್ರಮೆಯ ಜಗತ್ತಿನಲ್ಲಿ ವಾಸಿಸುತ್ತಿದ್ದಾರೆ. ದುಃಖದ ಭಾಗವೆಂದರೆ ಬಜಾಜ್ ಮತ್ತು ಕೋಟಾಕ್ನಂತಹ ಪ್ರತಿಷ್ಠಿತ ಕಾರ್ಪೊರೇಟ್ ಸಂಸ್ಥೆಗಳು ಇಂತಹ ಆಕ್ರಮಣಕಾರಿ ಸ್ಪ್ಯಾಮ್ಗೆ ಜವಾಬ್ದಾರರಾಗಿರುವುದು. ಆದರೆ ಕೆಟ್ಟ ಭಾಗವೆಂದರೆ ಸಾಲದ ಪಡೆದುಕೊಳ್ಳುವಂತೆ ಮಾಡುವ ಸ್ಪ್ಯಾಮ್ ಕರೆಯ ವರ್ತನೆ ಮತ್ತು ಸಮರ್ಥನೆ. ನಮ್ಮಲ್ಲಿ ಹೆಚ್ಚಿನವರಿಗೆ ಇಂಥ ಲೋನ್ಗಳ ಅಗತ್ಯವೇ ಇರೋದಿಲ್ಲ' ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದಿದ್ದಾರೆ.
ಗ್ರಾಹಕರನ್ನೇ ಅಗೌರವದಿಂದ ನೋಡುವುದನ್ನು ನೀವೆಂದೂ ಕೇಳಿಲ್ಲವೆಂದರೆ, ಇಲ್ಲಿ ನೋಡಿ ಸಂಜೀವ್ ಬಜಾಜ್ ಅದನ್ನು ಉದಾಹರಣೆಯ ಮೂಲಕ ಮಾಡುತ್ತಿದ್ದಾರೆ ಎಂದು ಇನ್ನೊಬ್ಬರು ಬರೆದಿದ್ದಾರೆ.ಇದು ಸಂಜೀವ್ ಬಜಾಜ್ ಅವರ ಸಂಪೂರ್ಣ ದುರಹಂಕಾರ. ನಾವು ಅನಗತ್ಯ ಕರೆಗಳಿಂದ ನಿಮಗೆ ತೊಂದರೆ ಕೊಡುತ್ತಲೇ ಇರುತ್ತೇನೆ ಆದರೆ, ದೂರು ನೀಡುವ ಯಾವುದೇ ಹಕ್ಕಿಲ್ಲ' ಎನ್ನುವ ರೀತಿಯಲ್ಲಿ ಅವರು ಮಾತನಾಡುತ್ತಿದ್ದಾರೆ ಎಂದು ಇನ್ನೊಬ್ಬರು ಬರೆದಿದ್ದಾರೆ.
ಸ್ವತಃ ಸಂಜೀವ್ ಬಜಾಜ್ ಹೇಳಿರುವ ಮಾಹಿತಿ ಪ್ರಕಾರ, ಎನ್ಬಿಎಫ್ಸಿಯ ವ್ಯವಹಾರದಲ್ಲಿ ಪುಶ್ ಕಾಲ್ಗಳ ಮೂಲಕ ನೀಡಲಾಗುವ ಲೋನ್ಗಳ ಪ್ರಮಾಣ ಕೇವಲ ಶೇ.15ರಷ್ಟಿದೆ. ಇದನ್ನು ಈಗ ಶೇ.10ಕ್ಕೆ ಇಳಿಸುವುದು ಗುರಿ. ಕೊನೆಗೆ ಇದನ್ನು ಸಂಪೂರ್ಣವಾಗಿ ಕೊನೆ ಮಾಡುವ ಇರಾದೆ ಹೊಂದಿದ್ದೇವೆ. ಇನ್ನು ಮುಂದೆ ಸೇವೆಗಳಿಗಾಗಿ ಮಾತ್ರವೇ ನಮ್ಮ ಕರೆಗಳು ಇರಲಿದೆ. ಪ್ರಚಾರ ಕೆಲಸಗಳು ಡಿಜಿಟಲ್ ಮೂಲಕವೇ ಆಗುತ್ತದೆ ಎಂದು ತಿಳಿಸಿದ್ದಾರೆ.
ಹಾವೇರಿ ರೈತನ ಹೆಸರಲ್ಲಿ ಪುಣೆಯಲ್ಲಿ ಖಾಸಗಿ ಫೈನಾನ್ಸ್ ಕಂಪನಿಯಿಂದ ಸಾಲ..!
ಲೋನ್ಗಳು ಉಚಿತವಾಗಿ ನೀಡುತ್ತಿದ್ದೇನೆ ಅನ್ನೋ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಜನರೇನು ಇವರು ಕೊಟ್ಟ ಸಾಲದ ಇಎಂಐಅನ್ನು ಪಾವತಿ ಮಾಡುತ್ತಿಲ್ಲವೇ? ಆದರೆ. ಜನರಿಗೆ ಕಿರುಕುಳ ನೀಡುವ ಮಟ್ಟಿಗೆ ಅವರಿಗೆ ದೂರವಾಣಿ ಕರೆ ಮಾಡುವ ಹಕ್ಕನ್ನು ನಿಮಗೆ ನೀಡಿದವರು ಯಾರು? ಹಾಗೇನಾದರೂ ದುರಂಹಕಾರಕ್ಕೆ ಮುಖ ಏನಾದರೂ ಇರುತ್ತಿದ್ದರೆ, ಅದು ಸಂಜೀವ್ ಬಜಾಜ್ರ ರೀತಿ ಇರ್ತಿತ್ತು. ತುಂಬಾ ಕೆಟ್ಟದಾಗಿ ಈ ವಿಚಾರ ತಿಳಿಸಲಾಗಿದೆ' ಎಂದು ಇನ್ನೊಬ್ಬರು ಟೀಕೆ ಮಾಡಿದ್ದಾರೆ.
ಸಿಬಿಲ್ ಸ್ಕೋರ್ ಕಡಿಮೆ ಕಾರಣ ನೀಡಿ ಶೈಕ್ಷಣಿಕ ಸಾಲ ರಿಜೆಕ್ಟ್ ಮಾಡುವಂತಿಲ್ಲ: ಕೇರಳ ಹೈಕೋರ್ಟ್!