25 ಭಾರತೀಯರಿಗೆ ಸ್ವಿಸ್ ಬ್ಯಾಂಕ್ಗಳ ನೋಟಿಸ್
ಕಪ್ಪುಹಣ ಮಾಹಿತಿ ವಿನಿಮಯ ಸಂಬಂಧ ಭಾರತ ಸರ್ಕಾರ ಮಾಹಿತಿ| 25 ಭಾರತೀಯರಿಗೆ ಸ್ವಿಸ್ ಬ್ಯಾಂಕ್ಗಳ ನೋಟಿಸ್|
ನವದೆಹಲಿ/ಬರ್ನ್[ಮೇ.27]: ತನ್ನ ದೇಶದ ಬ್ಯಾಂಕ್ಗಳಲ್ಲಿ ಠೇವಣಿ ಇಟ್ಟಿರುವ ಭಾರತೀಯರ ಪೈಕಿ ಸುಮಾರು 25 ಜನರಿಗೆ ಸ್ವಿಜರ್ಲೆಂಡ್ ಸರ್ಕಾರ ನೋಟಿಸ್ ಜಾರಿ ಮಾಡಿದೆ. ಈ ನೋಟಿಸ್ನಲ್ಲಿ, ಕಪ್ಪುಹಣ ಮಾಹಿತಿ ವಿನಿಮಯ ಸಂಬಂಧ ಭಾರತ ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದ ಅನ್ವಯ, ನಿಮ್ಮ ಮಾಹಿತಿಯನ್ನು ಭಾರತ ಸರ್ಕಾರಕ್ಕೆ ನೀಡಲಾಗುವುದು. ಒಂದು ವೇಳೆ ನೋಟಿಸ್ ತಲುಪಿದ 30 ದಿನಗಳಲ್ಲಿ ಮೇಲ್ಮನವಿ ಸಲ್ಲಿಸದೇ ಹೋದಲ್ಲಿ, ಬ್ಯಾಂಕ್ ಠೇವಣಿಗಳ ಕುರಿತು ಭಾರತ ಸರ್ಕಾರಕ್ಕೆ ಆಡಳಿತಾತ್ಮಕ ಮಾಹಿತಿ ರವಾನಿಸುವುದಾಗಿ ಸ್ವಿಜರ್ಲೆಂಡ್ ಸರ್ಕಾರ ಹೇಳಿದೆ.
ವಿಶೇಷವೆಂದರೆ ಮಾಚ್ರ್ ತಿಂಗಳ ಬಳಿಕ ಈ ರೀತಿಯಲ್ಲಿ 25 ಜನರಿಗೆ ಸ್ವಿಸ್ ಸರ್ಕಾರ ನೋಟಿಸ್ ಜಾರಿ ಮಾಡಿದೆ. ಅದರಲ್ಲೂ ಮೇ 21ರಂದು ಒಂದೇ ದಿನ 11 ಭಾರತೀಯರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಈ ಪೈಕಿ ಇಬ್ಬರ ಹೆಸರು ಬಹಿರಂಗವಾಗಿದೆ. ಅವರೆಂದರೆ ಕೃಷ್ಣ ಭಗವಾನ್ ರಾಮಚಂಚ್ ಮತ್ತು ಕಲ್ಪೇಶ್ ಹರ್ಷದ್ ಕಿನಾರಿವಾಲಾ. ಉಳಿದವರ ಹೆಸರೆಲ್ಲಾ ಮಿ.ಎ ಎಸ್ ಬಿ ಕೆ, ಮಿ, ಎ ಬಿ ಕೆ ಐ, ಮಿ. ಪಿ ಎ ಎಸ್ ಎಂದೆಲ್ಲಾ ನಮೂದಾಗಿದೆ.
ಹೀಗೆ ನೋಟಿಸ್ ನೀಡಲ್ಪಟ್ಟವರ ಪೈಕಿ ಬಹುತೇಕ ಜನ ಈ ಹಿಂದೆ ಸೋರಿಕೆಯಾಗಿದ್ದ ಎಚ್ಎಸ್ಬಿಸಿ ಬ್ಯಾಂಕಿನ ಠೇವಣಿದಾರರು ಎನ್ನಲಾಗಿದೆ.