ಇಂದಿನ ಕೇಂದ್ರ ಬಜೆಟ್ ನಾನು ನೋಡಿದ್ದು ರಾಜ್ಯಕ್ಕೆ ಇಷ್ಟೊಂದು ಅನ್ಯಾಯ ಮಾಡ್ತಾರೆ ಅಂತ ನಿರೀಕ್ಷೆ ಇರಲಿಲ್ಲ, ಬಿಜೆಪಿಯವರು ಅವರ ಕಚೇರಿ ಮುಂದೆ ದೊಡ್ಡ ಟಿವಿ ಹಾಕಿ ಬಜೆಟ್ ತೋರಿಸಿದ್ದು ಈಗ ರಾಜ್ಯದ ಜನರಿಗೆ ಏನು ಉತ್ತರ ಕೊಡ್ತಾರೆ ಎಂದು ಡಿ.ಕೆ.ಶಿವಕುಮಾರ್ ಕೇಂದ್ರ ಬಿಜೆಪಿ ವಿರುದ್ಧ ಹರಿಹಾಯ್ದರು
ಕನಕಪುರ: ಇಂದಿನ ಕೇಂದ್ರ ಬಜೆಟ್ ನಾನು ನೋಡಿದ್ದು ರಾಜ್ಯಕ್ಕೆ ಇಷ್ಟೊಂದು ಅನ್ಯಾಯ ಮಾಡ್ತಾರೆ ಅಂತ ನಿರೀಕ್ಷೆ ಇರಲಿಲ್ಲ, ಬಿಜೆಪಿಯವರು ಅವರ ಕಚೇರಿ ಮುಂದೆ ದೊಡ್ಡ ಟಿವಿ ಹಾಕಿ ಬಜೆಟ್ ತೋರಿಸಿದ್ದು ಈಗ ರಾಜ್ಯದ ಜನರಿಗೆ ಏನು ಉತ್ತರ ಕೊಡ್ತಾರೆ ಎಂದು ಡಿ.ಕೆ.ಶಿವಕುಮಾರ್ ಕೇಂದ್ರ ಬಿಜೆಪಿ ವಿರುದ್ಧ ಹರಿಹಾಯ್ದರು.
ನಗರದಲ್ಲಿ ಕನಕೋತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ರಾಜ್ಯಕ್ಕೆ ಯಾವ ವಿಶೇಷ ರೈಲು ಬಂದಿದೆ? ಎಷ್ಟು ಹಣ ಕೊಟ್ಟಿದ್ದಾರೆ? ಈ ಹಿಂದೆ ರಾಜ್ಯದ ಹಣಕಾಸು ಆಯೋಗದಲ್ಲಿ 80 ಸಾವಿರ ಕೋಟಿ ನಮಗೆ ನಷ್ಟ ಆಗಿದೆ. ಈಗಲೂ ಸಹ ಕೇಂದ್ರ ಬಜೆಟ್ನಿಂದ ನಮ್ಮರಾಜ್ಯಕ್ಕೆ ಯಾವುದೇ ಅನುಕೂಲವಿಲ್ಲ ಎಂದು ಕಿಡಿ ಕಾರಿದರು.
ಮಹಾತ್ಮ ಗಾಂಧೀಜಿ ಹೆಸರಿನ ನರೇಗಾ ಯೋಜನೆ ಹೆಸರನ್ನು ತೆಗೆದು ಈಗ ಜನರ ಹಾಗೂ ನಮ್ಮ ಪಕ್ಷದ ವಿರೋಧವನ್ನು ಗಮನಿಸಿ ಎಲ್ಲೋ ಸೇರಿಸಿರುವುದು ತಿಳಿದು ಬಂದಿದೆ. ನರೇಗಾ ಯೋಜನೆ ಎಲ್ಲಾ ಕಡೆಯೂ ಜಾರಿ ಮಾಡಲಿ ಅನ್ನೋದು ನಮ್ಮ ಒತ್ತಾಯವಾಗಿದೆ. ಯೋಜನೆಯಿಂದ ಎಲ್ಲಾ ರಾಜ್ಯಗಳಿಗೂ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ದೃಷ್ಟಿಯಿಂದ ಕನಕೋತ್ಸವ ಕಾರ್ಯಕ್ರಮದಲ್ಲಿ ಪುರುಷರ ಮತ್ತು ಮಹಿಳೆಯರ ಮ್ಯಾರಥಾನ್ ಓಟ ಆಯೋಜಿಸಿದ್ದದಾಗಿ ವಿವರಿಸಿದರು.
ಕೇಂದ್ರ ಬಜೆಟ್ನಲ್ಲಿ ನಮ್ಮ ರಾಜ್ಯಕ್ಕೆ ಬರಬೇಕಾದ ಪಾಲು ಒಂದೂ ಪೈಸೆಯೂ ಬಂದಿಲ್ಲ. ಚುನಾವಣೆಗೆ ಸಂಬಂಧಿಸಿದ ರಾಜ್ಯಗಳಿಗೆ ಅನುಕೂಲ ಮಾಡುವ ದೃಷ್ಟಿಯಲ್ಲಿ ಅಂತ ಚುನಾವಣಾ ಬಜೆಟ್ ಘೋಷಣೆ ಮಾಡಿದ್ದಾರೆ. ತೆರಿಗೆ ಬಾಕಿ ಉಳಿಸಿಕೊಂಡವರಿಗೆ ದಂಡ ಹಾಕುವುದಾಗಿ ಹೇಳಿದ್ದು, ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಬಂದ ಮೇಲೆ ನಮ್ಮ ರಾಜ್ಯಕ್ಕೆ ಬಹಳಷ್ಟು ನಷ್ಟವೇ ಆಗುತ್ತಿದೆ. ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಕೇಂದ್ರ ಮಂತ್ರಿಗಳೆಲ್ಲಾ ರಾಜೀನಾಮೆ ಕೊಡುವುದು ಒಳ್ಳೆಯದು ಎಂದು ಟೀಕಿಸಿದರು.
ಮಾಧ್ಯಮಗಳಿಗೆ ಹೇಳಿಕೆ ನೀಡಲಷ್ಟೇ ಸೀಮಿತ:
ನಮ್ಮ ರಾಜ್ಯಕ್ಕೆ ಅನ್ಯಾಯ ಆಗುತ್ತಿದ್ದರೂ ಬಿಜೆಪಿ ಸಂಸದರು, ಮಂತ್ರಿಗಳು ಏನು ಮಾತನಾಡದೇ ಇರುವುದು ಬಹಳ ಬೇಸರದ ಸಂಗತಿ. ಸ್ವಾಭಿಮಾನ ಏನಾದರೂ ಇದ್ದರೆ ಮೊದಲು ಎಲ್ಲರೂ ರಾಜೀನಾಮೆ ನೀಡಲಿ, ಧ್ವನಿ ಇಲ್ಲದ ಸಂಸದರು, ಧ್ವನಿ ಇಲ್ಲದ ಮಂತ್ರಿಗಳು ಕೇವಲ ಪತ್ರಿಕಾ ಹೇಳಿಕೆ ಕೊಡುವುದಕ್ಕೆ ಸೀಮಿತವಾಗಿದ್ದಾರೆ. ರಾಜ್ಯಕ್ಕೆ 10 ರುಪಾಯಿ ಅನುದಾನ ತರದ ಅವರೆಲ್ಲಾ ನೈತಿಕ ಶಕ್ತಿ ಕಳೆದುಕೊಂಡಿದ್ದಾರೆ. ಇದು ಜನ ವಿರೋಧಿ ಬಜೆಟ್, ಕರ್ನಾಟಕ ವಿರೋಧಿ ಬಜೆಟ್ ಆಗಿದೆ. ನಮ್ಮ ತೆರಿಗೆ ಪಾಲು ನಮಗೆ ಸಿಗುತ್ತಿಲ್ಲ, 7 ಹೈಸ್ಪೀಡ್ ರೈಲು ಅಂತ ಹೇಳಿದ್ದು, ನಮ್ಮಿಂದ ಪ್ರಾರಂಭವಾಗುವ ಹೊಸ ರೈಲು ಯಾವುದೂ ಇದರಲ್ಲಿ ಇಲ್ಲ, ರೈತರಿಗೆ ಯಾವುದೇ ಹೊಸ ಯೋಜನೆ ಇಲ್ಲ, ಕೇಂದ್ರ ಮಂತ್ರಿಗಳು, ಸಂಸದರು ರಾಜ್ಯದ ಹಿತದೃಷ್ಟಿಯಿಂದ ರಾಜಿನಾಮೆ ಕೊಡೋದು ಒಳ್ಳೆಯದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಮೇಕೆದಾಟು ಯೋಜನೆಗೆ ಹೊಸ ಡಿಪಿಆರ್:
ಮೇಕೆದಾಟು ಸೇರಿ ನೀರಾವರಿ ಯೋಜನೆಗೆ ಅನುದಾನ ನೀಡದ ವಿಚಾರ,5300 ಕೋಟಿ ಏನು ಭದ್ರಾ ಮೇಲ್ದಂಡೆಗೆ ಹೇಳಿದರೋ ಅದನ್ನೇ ಮಾಡಿಲ್ಲ. ಮೇಕೆದಾಟು ಯೋಜನೆ ಆರಂಭಕ್ಕೆ ನಾವು ಈಗಾಗಲೇ ಸಿದ್ದತೆ ಮಾಡಿಕೊಳ್ತಿದ್ದೀವಿ. ಈಗ ಮತ್ತೆ ಹೊಸ ಡಿಪಿಆರ್ ಮಂಡಿಸಲಿದೆ. ಅರಣ್ಯ ಜಮೀನಿಗೆ ಪರ್ಯಾಯ ಜಮೀನು ಕೊಡಲು ಮಂಡ್ಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ. ಯೋಜನೆಯಿಂದ ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಹಾಸನಕ್ಕೆ ಅನುಕೂಲ ಆಗಲಿರುವುದರಿಂದ ಮಂಡ್ಯ ಜಿಲ್ಲಾಧಿಕಾರಿಗೆ ಜವಾಬ್ದಾರಿ ಕೊಟ್ಟಿದ್ದೇವೆ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದು ರಾಜ್ಯದಲ್ಲಿ ಕಾಂಗ್ರೆಸ್ಗೆ ಜನ ಮತ ಹಾಕಿದ್ದಾರೆ ಅಂತ ನಮ್ಮ ಮೇಲೆ ದ್ವೇಷ ಕಾರುತ್ತಿದ್ದಾರೆ ಎಂದು ಆರೋಪಿಸಿದರು.
ಕೈಗಾರಿಕೆಗೆ ಎಲ್ಲಿ ಜಾಗ ಬೇಕು ಹೇಳಲಿ:
ಇಂಡಸ್ಟ್ರಿ ನಿರ್ಮಾಣ ಮಾಡಲು ಜಾಗ ನೀಡ್ತಿಲ್ಲ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಆರೋಪದ ವಿಚಾರಕ್ಕೆ ಡಿಸಿಎಂ ಡಿಕೆಶಿ ಪ್ರತಿಕ್ರಿಯಿಸಿ, ಎಲ್ಲಿ ಯಾವ ಜಾಗ ಬೇಕು ಕೇಳ್ರಪ್ಪ, ರಾಮನಗರದಲ್ಲೇ ಹೇಳಲಿ ಅವರ ಜಮೀನನ್ನೇ ಸ್ವಾಧೀನ ಮಾಡಿಕೊಡ್ತೀನಿ. ಎಲ್ಲಿ ಬೇಕು ಹೇಳಲಿ, ಒಂದು ಅರ್ಜಿ ಕೊಡೋಕೆ ಹೇಳಿ. ಯಾವ ಫ್ಯಾಕ್ಟರಿ ಮಾಡ್ತೀನಿ ಅಂತ ಹೇಳಲಿ ನಾನು ಭೂಸ್ವಾದೀನ ಮಾಡಿ ಕೊಡ್ತೀನಿ. ಅವರೆಲ್ಲಾ ಯಾಕೆ ರಾಜ್ಯ ರಾಜಕಾರಣಕ್ಕೆ ವಾಪಸ್ಸು ಬರ್ತಿನಿ ಅಂತಾವ್ರೆ, ಅಂದ್ರೆ ಅಲ್ಲೇನೋ ಇದೆ, ನನ್ನ ಬಾಯಲ್ಲಿ ಅದು ಬರೋದು ಬೇಡ. ಈಗ ಒಂದೂವರೆ ವರ್ಷ ಮಂತ್ರಿ ಆಗಿದ್ರಲ್ಲ, ರಾಜ್ಯಕ್ಕೆ ಅವರ ಕೊಡುಗೆ ಏನು ಎಂದು ಹೇಳಲಿ, ರಾಮನಗರಕ್ಕೆ ಆದರೂ ಬರಲಿ, ಇಲ್ಲ ಎಲ್ಲಿಗಾದ್ರೂ ಬರಲಿ ಅದು ಅವರ ಖುಷಿ. ನಾವ್ಯಾರು ಬೇಡ ಎನ್ನಲು ಎಂದು ಪ್ರಶ್ನಿಸಿದರು.


