‘ಅತ್ಯಂತ ದೂರ ದೃಷ್ಟಿಕೋನ ಇಟ್ಟುಕೊಂಡು ಕೇಂದ್ರ ಸರ್ಕಾರ 2026-27ನೇ ಸಾಲಿನ ಬಜೆಟ್‌ ಮಂಡಿಸಿದ್ದು, ಈ ಆಯವ್ಯಯ ಕಾಂಗ್ರೆಸ್ಸಿಗರಿಗೆ ಅರ್ಥವಾಗುವುದಿಲ್ಲ. ಅವರ ಅಜ್ಞಾನದ ಬಗ್ಗೆ ನನಗೆ ಮರುಕವಿದೆ’ ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ನವದೆಹಲಿ : ‘ಅತ್ಯಂತ ದೂರ ದೃಷ್ಟಿಕೋನ ಇಟ್ಟುಕೊಂಡು ಕೇಂದ್ರ ಸರ್ಕಾರ 2026-27ನೇ ಸಾಲಿನ ಬಜೆಟ್‌ ಮಂಡಿಸಿದ್ದು, ಈ ಆಯವ್ಯಯ ಕಾಂಗ್ರೆಸ್ಸಿಗರಿಗೆ ಅರ್ಥವಾಗುವುದಿಲ್ಲ. ಅವರ ಅಜ್ಞಾನದ ಬಗ್ಗೆ ನನಗೆ ಮರುಕವಿದೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕರ್ನಾಟಕಕ್ಕೆ ವಿಶೇಷ ಕೊಡುಗೆ ತಂದಿಲ್ಲವೆಂದು ಆರೋಪಿಸಿರುವ ಕೈ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘2047ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮೋದಿ ಸರ್ಕಾರ ಬಜೆಟ್‌ ಮಂಡಿಸಿದೆ, 16ನೇ ಹಣಕಾಸು ಆಯೋಗದ ವರದಿಯು ರಾಜ್ಯಗಳ ತೆರಿಗೆ ಹಂಚಿಕೆಯನ್ನು ಶೇ.41ರಲ್ಲಿಯೇ ಉಳಿಸಿಕೊಂಡಿದೆ. ತೆರಿಗೆ ಹಂಚಿಕೆಗಳಲ್ಲಿ ಬದಲಾವಣೆಗಳು ಇಲ್ಲದಿದ್ದರೂ, ರಾಜ್ಯಗಳ ತೆರಿಗೆ ಹಂಚಿಕೆಯ ಪಾಲು ಬದಲಾಗಿದ್ದು, ಕರ್ನಾಟಕದ ಶೇ.3.647 ತೆರಿಗೆ ಪಾಲು ಇದೀಗ ಶೇ.4.131ಕ್ಕೆ ಹೆಚ್ಚಿಸಲಾಗಿದೆ. ಈ ಮೂಲಕ ಕರ್ನಾಟಕಕ್ಕೆ ಸಾವಿರಾರು ಕೋಟಿ ತೆರಿಗೆ ಪಾಲು ಸಿಗಲಿದೆ. 2026-27ರ ಬಜೆಟ್‌ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ₹63,049 ಕೋಟಿ ನೀಡಲಾಗಿದೆ’ ಎಂದರು.

ಬಜೆಟ್‌ನಲ್ಲಿ ರಾಜ್ಯಕ್ಕೆ 2 ಹೈ ಸ್ಪೀಡ್ ರೈಲು

ಬಜೆಟ್‌ನಲ್ಲಿ ರಾಜ್ಯಕ್ಕೆ 2 ಹೈ ಸ್ಪೀಡ್ ರೈಲು ಒದಗಿಸಿದ್ದು, ತೆಂಗು ಮತ್ತು ಗೊಂಡಬಿ ಬೆಳೆಗಾರರಿಗೂ ಉತ್ತೇಜನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಸಾವಿರಾರು ಕೋಟಿ ಬರಲಿದ್ದು, ಇದರಿಂದ ರಾಜ್ಯಕ್ಕೆ ಹೆಚ್ಚಿನ ಉಪಯೋಗವಾಗಲಿದೆ. ಜನಸಂಖ್ಯೆ ನಿಯಂತ್ರಣ, ಅರಣ್ಯ, ತಲಾ ಆದಾಯ, ಜಿಡಿಪಿ ಎಲ್ಲ ದೃಷ್ಟಿಯಿಂದ ನಮ್ಮ ಶೇರ್ ಇನ್ನು ಹೆಚ್ಚಾಗಲಿದೆ. ಏರೋಸ್ಪೇಸ್, ಉತ್ಪಾದನೆಯಲ್ಲಿ ಕರ್ನಾಟಕಕ್ಕೆ ಅನುಕೂಲವಾಗಲಿದೆ. ನಗರಾಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿದೆ ಎಂದರು.

ರಾಜ್ಯವಾರು ಘೋಷಣೆಗಳನ್ನು ಮಾಡುವುದಿಲ್ಲ

‘ಕೇಂದ್ರ ಬಜೆಟ್‌ನಲ್ಲಿ ರಾಜ್ಯವಾರು ಘೋಷಣೆಗಳನ್ನು ಮಾಡುವುದಿಲ್ಲ. ಆದರೆ, ವಲಯವಾರು ಯೋಜನೆಗಳನ್ನು ನೋಡಿದಾಗ ಕರ್ನಾಟಕಕ್ಕೆ ಸಾಕಷ್ಟು ಅನುಕೂಲವಾಗಲಿದೆ’ ಎಂದು ಕರ್ನಾಟಕಕ್ಕೆ ವಿಶೇಷ ಕೊಡುಗೆ ತಂದಿಲ್ಲವೆಂಬ ಕಾಂಗ್ರೆಸ್ ಆರೋಪಕ್ಕೆ ಸ್ಪಷ್ಟನೆ ನೀಡಿದರು.

‘ಈ ಬಜೆಟ್‌ನಲ್ಲಿ ನಮ್ಮ ಇಲಾಖೆಗೆ (ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಇಲಾಖೆ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆ) ₹33 ಸಾವಿರ ಕೋಟಿ ನೀಡಲಾಗಿದೆ’ ಎಂದು ತಿಳಿಸಿದರು.