ಭಾರತದ ಆರ್ಥಿಕತೆಯ ಬೆಳವಣಿಗೆಯಲ್ಲಿ ಇಂತಹ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಇಂತಹ ಉದ್ಯಮಗಳಿಗೆ ನೆರವು ನೀಡುವುದಕ್ಕಾಗಿ ಸರ್ಕಾರ ಏಕರೂಪದ ಜಿಎಸ್ಟಿ ಜಾರಿ ಮಾಡಬೇಕು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ನವದೆಹಲಿ(ಆ.28): ದೇಶದ ಆರ್ಥಿಕತೆಯ ಅಭಿವೃದ್ಧಿಗೆ ಪ್ರಮುಖ ಕಾರಣವಾಗಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ನೆರವಾಗುವುದಕ್ಕಾಗಿ ಏಕರೂಪದ ಜಿಎಸ್ಟಿ ಜಾರಿ ಮಾಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ವಯನಾಡ್ಗೆ ಪ್ರಯಾಣಿಸುವ ವೇಳೆ ಊಟಿಗೆ ಭೇಟಿ ನೀಡಿದ್ದ ರಾಹುಲ್, ಊಟಿಯ ಪ್ರಮುಖ ಚಾಕೋಲೆಟ್ ಬ್ರಾಂಡ್ ಆದಂತಹ ಮೂಡಿ ಚಾಕೋಲೆಟ್ ಸಂಸ್ಥೆಗೆ ಭೇಟಿ ನೀಡಿದ್ದರು. ಈ ವಿಡಿಯೋವನ್ನು ತಮ್ಮ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ‘ವಯನಾಡ್ಗೆ ಪ್ರಯಾಣಿಸುವ ಸಮಯದಲ್ಲಿ ಊಟಿಯ ಪ್ರಮುಖ ಬ್ರಾಂಡ್ ಆದಂತಹ ಮೂಡಿಸ್ ಚಾಕೊಲೆಟ್ಗೆ ಭೇಟಿ ನೀಡಿದ್ದೆ. ಇಲ್ಲಿ ಕೆಲಸ ಮಾಡುವವರ ಶ್ರದ್ಧೆ ನಿಜಕ್ಕೂ ಸ್ಪೂರ್ತಿದಾಯಕ’ ಎಂದು ಹೇಳಿದ್ದಾರೆ. ಅಲ್ಲದೇ ಮುರಳೀಧರ ರಾವ್ ಹಾಗೂ ಸ್ವಾತಿ ಎಂಬುವವರು ಈ ಕಾರ್ಖಾನೆಯನ್ನು ನಡೆಸುತ್ತಿದ್ದು, ಸುಮಾರು 70 ಮಹಿಳೆಯರು ಉನ್ನತ ರುಚಿಯ ಚಾಕೋಲೆಟ್ಗಳನ್ನು ಇಲ್ಲಿ ತಯಾರು ಮಾಡುತ್ತಾರೆ. ಆದರೆ ಇಂತಹ ಉದ್ಯಮಗಳು ಗಬ್ಬರ್ ಸಿಂಗ್ ತೆರಿಗೆಯಿಂದಾಗಿ ತೊಂದರೆಗೊಳಗಾಗುತ್ತಿವೆ ಎಂದು ಕಿಡಿಕಾರಿದ್ದಾರೆ.
ಚೀನಾದಿಂದ ಲಡಾಖ್ ಜಾಗ ಕಬಳಿಕೆ: ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ
ಭಾರತದ ಆರ್ಥಿಕತೆಯ ಬೆಳವಣಿಗೆಯಲ್ಲಿ ಇಂತಹ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಇಂತಹ ಉದ್ಯಮಗಳಿಗೆ ನೆರವು ನೀಡುವುದಕ್ಕಾಗಿ ಸರ್ಕಾರ ಏಕರೂಪದ ಜಿಎಸ್ಟಿ ಜಾರಿ ಮಾಡಬೇಕು ಎಂದು ಹೇಳಿದ್ದಾರೆ.
