ವಾರೆ ವ್ಹಾ ಮಿನಿಸ್ಟರ್: ತೈಲದರ ಏರಿದ್ರೆ ನಾವೆಲ್ಲಾ ಹಿಂಗ್ ಮಾಡ್ಬೇಕಂತೆ!
ತೈಲದರ ಸಮಸ್ಯೆಗೆ ಪರಿಹಾರ ಕೊಟ್ಟ ಸಚಿವ! ಜನತೆ ಇತರ ಖರ್ಚು ಮಾಡಿ ತೈಲ ತುಂಬಿಸಬೇಕು! ರಾಜಸ್ಥಾನ ಸಚಿವ ರಾಜಕುಮಾರ್ ರಿನ್ವಾ ವಿವಾದಾತ್ಮಕ ಹೇಳಿಕೆ! ರಿನ್ವಾ ಹೇಳಿಕೆ ವಿರುದ್ದ ಕಿಡಿಕಾರಿದ ಕಾಂಗ್ರೆಸ್
ಜೈಪುರ(ಸೆ.10): ತೈಲದರ ಏರಿಕೆ ಖಂಡಿಸಿ ಇಂದು ವಿಪಕ್ಷಗಳು ಭಾರತ್ ಬಂದ್ ಗೆ ಕರೆ ನೀಡಿವೆ. ಈ ಮಧ್ಯೆ ರಾಜಸ್ಥಾನದ ವಸುಂಧರಾ ರಾಜೆ ಸರ್ಕಾರದ ಸಚಿವರೊಬ್ಬರು ತೈಲದರ ಏರಿಕೆಗೆ ಜನಸಾಮಾನ್ಯ ಏನು ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ರಾಜಸ್ತಾನದ ಸಚಿವ ರಾಜಕುಮಾರ್ ರಿನ್ವಾ ಪ್ರಕಾರ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾದರೆ ಜನತೆ ತಮ್ಮ ಇತರ ಖರ್ಚುಗಳನ್ನು ಬಂದ್ ಮಾಡಿ ತಮ್ಮ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ತುಂಬಿಸಬೇಕು. ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ರಾಜಕುಮಾರ್ ರಿನ್ವಾ ಈ ರೀತಿ ಉತ್ತರಿಸಿದ್ದಾರೆ.
ಜನ ತಮ್ಮ ಇತರ ಖರ್ಚುಗಳನ್ನು ಕಡಿಮೆ ಮಾಡಿದರೆ ತೈಲದರ ಏರಿಕೆಯ ಬಿಸಿ ತಟ್ಟುವುದಿಲ್ಲ ಎಂದು ರಿನ್ವಾ ಹೇಳಿದ್ದು, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇನ್ನೇನು ಊಟವನ್ನೂ ಬಿಟ್ಟು ಪೆಟ್ರೋಲ್ ತುಂಬಿಸಬೇಕಾ ಎಂದು ಕೆಲವರು ರಿನ್ವಾ ವಿರುದ್ದ ಹರಿಹಾಯ್ದಿದ್ದಾರೆ.
ರಿನ್ವಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರವ ಕಾಂಗ್ರೆಸ್ ನಾಯಕ ಸಚಿನ್ ಪೈಲೆಟ್, ಬಿಜೆಪಿ ನಾಯಕತ್ವ ಎಷ್ಟು ಕೊಬ್ಬಿದೆ ಎಂಬುದಕ್ಕೆ ರಿನ್ವಾ ಹೇಳಿಕೆಯೇ ಕಾರಣ ಎಂದು ಕಿಡಿಕಾರಿದ್ದಾರೆ.