ಅಂದಾಜು 70 ಚದರಅಡಿಯ ಪ್ರಸಾದ ಹಾಗೂ ಹೂವಿನ ಅಂಗಡಿ ಬರೋಬ್ಬರಿ 1.72 ಕೋಟಿ ರೂಪಾಯಿಗೆ ಬಿಡ್‌ ಆಗಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿನ ಖಜ್ರಾನಾ ಗಣೇಶ ದೇವಸ್ಥಾನದಲ್ಲಿನ ಈ ಮಳಿಗೆಗೆ ಮೂಲಬೆಲೆ 30 ಲಕ್ಷ ರೂಪಾಯಿ ಆಗಿತ್ತು.

ನವದೆಹಲಿ (ಅ. 28): ಇಂದೋರ್ ನಗರದ ಪ್ರಸಿದ್ಧ ಖಜ್ರಾನ ಗಣೇಶ ದೇವಸ್ಥಾನದ ಸಂಕೀರ್ಣದಲ್ಲಿರುವ ಕೇವಲ 69.50 ಚದರ ಅಡಿ ವಿಸ್ತೀರ್ಣದ ಪೂಜಾ ಸಾಮಗ್ರಿ ಮಾರಾಟ ಮಳಿಗೆಯನ್ನು 30 ವರ್ಷಗಳ ಗುತ್ತಿಗೆಗೆ ಮಾರಾಟ ಮಾಡಲಾಯಿತು. ಈ ಪುಟ್ಟ ಮಳಿಗೆಯು 1.72 ಕೋಟಿ ರೂ.ಗಳ ಬೃಹತ್ ಬಿಡ್ ಅನ್ನು ಆಕರ್ಷಿಸಿದೆ, ಮೂಲ ಬೆಲೆ 30 ಲಕ್ಷ ರೂಪಾಯಿಯಿಂದ ಬಿಡ್‌ ಆರಂಭವಾಗಿತ್ತು ಎಂದು ದೇಗುಲದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದು ದೇಶದಲ್ಲಿ ವಾಣಿಜ್ಯ ಆಸ್ತಿಗೆ ನೀಡಲಾಗುವ ಅತ್ಯಧಿಕ ದರಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ಆಸ್ತಿಗಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಸ್ಥಳೀಯ ನಿವಾಸಿಯೊಬ್ಬರು 1.72 ಕೋಟಿ ರೂಪಾಯಿಗಳನ್ನು ಈ ಮಳಿಗೆಗೆ ಪಾವತಿಸಲು ಮುಂದಾದರು, '1-ಎ' ಮಳಿಗೆಯನ್ನು 30 ವರ್ಷಗಳ ಅವಧಿಗೆ ಭೋಗ್ಯಕ್ಕೆ ಅವರು ತೆಗೆದುಕೊಂಡಿದ್ದಾರೆ. ಇದು ಆ ಮಳಿಗೆಗೆ ಪಡೆದ ಅತಿ ಹೆಚ್ಚು ಮೊತ್ತದ ಬಿಡ್ ಆಗಿದೆ ಎಂದು ಅಧಿಕಾರಿ ಹೇಳಿದರು. ಈ ಅಂಗಡಿಗೆ ದೇವಸ್ಥಾನದ ಆಡಳಿತ ಮಂಡಳಿಯೇ ಮೂಲ ಮಾಲೀಕರಾಗಿದ್ದಾರೆ. ಇದರ ನಿಜವಾದ ವಿಸ್ತೀರ್ಣ 69.50 ಚದರ ಅಡಿ ಆಗಿರುವ ಕಾರಣ, ವ್ಯಕ್ತಿ ಪ್ರತಿ ಚದರಅಡಿಗೆ 2.47 ಲಕ್ಷ ರೂಪಾಯಿ ಮೊತ್ತವನ್ನು ಪಾವತಿಸಿದಂತಾಗಲಿದೆ.

ಗುತ್ತಿಗೆ ಷರತ್ತುಗಳ ಪ್ರಕಾರ, ಮಳಿಗೆಯಲ್ಲಿ ಹೂವುಗಳು, 'ಪ್ರಸಾದ' (ಭಕ್ತಿಯ ಅರ್ಪಣೆ) ಮತ್ತು ಇತರ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡಲು ಮಾತ್ರ ಬಳಸಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ. ಇಂದೋರ್ ಅಭಿವೃದ್ಧಿ ಪ್ರಾಧಿಕಾರದ (ಐಡಿಎ) ಮೇಲ್ವಿಚಾರಣೆಯಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮಳಿಗೆಯನ್ನು ಭೋಗ್ಯಕ್ಕೆ ತೆಗೆದುಕೊಳ್ಳಲು, ದೇವಾಲಯದ ಅಧಿಕಾರಿಗಳು ಕನಿಷ್ಠ ಮೂಲ ಬೆಲೆಯನ್ನು 30 ಲಕ್ಷ ರೂ.ಗೆ ನಿಗದಿಪಡಿಸಿದ್ದರು. ಅಂದರೆ ಅಂಗಡಿಯು ಮೂಲ ದರಕ್ಕಿಂತ ಆರು ಪಟ್ಟು ಹೆಚ್ಚು ಬಿಡ್ ಅನ್ನು ಆಕರ್ಷಣೆ ಮಾಡಿದೆ. ಮಧ್ಯಪ್ರದೇಶ ಮತ್ತು ದೇಶದ ಇತರ ಭಾಗಗಳಿಂದ ಪ್ರತಿದಿನ ಹೆಚ್ಚಿನ ಸಂಖ್ಯೆಯ ಭಕ್ತರು ಖಜ್ರಾನಾ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಮತ್ತು ದೇವಾಲಯದ ಸಮೀಪವಿರುವ ಹೂವುಗಳು, 'ಪ್ರಸಾದ' ಮತ್ತು ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳು ದೊಡ್ಡ ಮಟ್ಟದ ವ್ಯಾಪಾರದ ಕೇಂದ್ರಗಳಾಗಿವೆ.

ಟೆಂಡರ್ ನಲ್ಲಿ ಬಿಡ್ ಮೊತ್ತ ಕೇಳಿ ರಿಯಲ್ ಎಸ್ಟೇಟ್ ಕ್ಷೇತ್ರದ ದಿಗ್ಗಜರೂ ಬೆಚ್ಚಿ ಬಿದ್ದಿದ್ದಾರೆ. ಈ ಒಪ್ಪಂದವು ಮಧ್ಯಪ್ರದೇಶದ ಆರ್ಥಿಕ ರಾಜಧಾನಿ ಇಂದೋರ್‌ನಲ್ಲಿನ ಅತ್ಯಂತ ದುಬಾರಿ ಆಸ್ತಿ ವ್ಯವಹಾರಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ.

Add Asianetnews Kannada as a Preferred SourcegooglePreferred

ವಿಶ್ವದ ಟಾಪ್ 100 ಅತ್ಯಂತ ಮೌಲ್ಯಯುತ ಬ್ರ್ಯಾಂಡ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಕಂಪನಿ ಇದೇ ನೋಡಿ!

ಇದೇ ವೇಳೆ 36 ಚದರ ಅಡಿ ಮಳಿಗೆಗೆ 22 ಲಕ್ಷ ರೂಪಾಯಿ ಬಿಡ್‌ ಬಂದಿದೆ. ಖಜ್ರಾನಾ ದೇವಸ್ಥಾನದ ಪ್ರಧಾನ ಅರ್ಚಕ ಅಶೋಕ್ ಭಟ್ ಮಾತನಾಡಿ, ಇಂದೋರ್ ಅಭಿವೃದ್ಧಿ ಪ್ರಾಧಿಕಾರವು ಎರಡು ಖಾಲಿ ಅಂಗಡಿಗಳಿಗೆ ಟೆಂಡರ್ ನೀಡಿದೆ. ಇದರಲ್ಲಿ ಮೊದಲ ನಂಬರ್ ಅಂಗಡಿಯನ್ನು ಖಜ್ರಾನಾ ನಿವಾಸಿ ದೇವೇಂದ್ರ ರಾಥೋಡ್ ಎಂಬುವವರಿಗೆ 1 ಕೋಟಿ 72 ಲಕ್ಷದ 1557 ರೂ.ಗೆ 30 ವರ್ಷಗಳ ಗುತ್ತಿಗೆಗೆ ನೀಡಲಾಗಿದೆ. ಅರ್ಚಕರ ಪ್ರಕಾರ, ದೇವೇಂದ್ರ ರಾಥೋಡ್ ಅವರು ಇದೇ ಆವರಣದಲ್ಲಿ 13 ಸಂಖ್ಯೆಯ ಅಂಗಡಿಯನ್ನು ಹೊಂದಿದ್ದಾರೆ. ಈ ಟೆಂಡರ್‌ನಲ್ಲಿ ಹಾಕಲಾದ ಬಿಡ್ ಮೊತ್ತವನ್ನು ತಿಂಗಳೊಳಗೆ ಪಾವತಿಸಲು ಕಾಲಾವಕಾಶ ನೀಡಿದ್ದಾರೆ. ಈ ಮೊತ್ತವನ್ನು ಖಜ್ರಾನಾ ಗಣೇಶ್ ನಿರ್ವಹಣಾ ಸಮಿತಿಯಲ್ಲಿ ಠೇವಣಿ ಇಡಲಾಗುವುದು.

Elon Musk: ಟ್ವಿಟರ್‌ಗೆ ಎಲಾನ್ ಮಸ್ಕ್‌ ಬಾಸ್‌: ಪರಾಗ್‌ ಅಗರವಾಲ್‌ ಸೇರಿ ಹಲವು ಉನ್ನತ ಅಧಿಕಾರಿಗಳು ವಜಾ?

ಗಮನಿಸಬೇಕಾದ ಸಂಗತಿಯೆಂದರೆ, ದೇಶ ಮತ್ತು ಪ್ರಪಂಚದಾದ್ಯಂತದ ಹೆಚ್ಚಿನ ಸಂಖ್ಯೆಯ ಭಕ್ತರು ಪ್ರತಿದಿನ ಈ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಮತ್ತು ದೇವಾಲಯದ ಆವರಣದಲ್ಲಿರುವ 60 ಅಂಗಡಿಗಳು ಹೂವುಗಳು, ಪ್ರಸಾದ ಮತ್ತು ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುತ್ತವೆ. ಅಂಗಡಿಯವರೊಬ್ಬರು ಹೇಳುವ ಪ್ರಕಾರ ಪ್ರತಿ ಅಂಗಡಿಯಲ್ಲಿ ನಿತ್ಯ 15-20 ಸಾವಿರ ರೂ. ವಿಶೇಷವೆಂದರೆ ಕೊನೆಯದಾಗಿ ಬರುವ ಅಂಗಡಿಗಳಲ್ಲಿ ಹೆಚ್ಚು ವ್ಯಾಪಾರವಾಗುತ್ತದೆ. ಇದೇ ಕಾರಣಕ್ಕೆ ಈ ಕಾಂಪ್ಲೆಕ್ಸ್‌ನಲ್ಲಿನ ಕೊನೆಯ ಅಂಗಡಿ ಸಂಖ್ಯೆ-1 (ಎ)ಗೆ ಭಾರಿ ಬಿಡ್ ಮಾಡಲಾಗಿದೆ.