Asianet Suvarna News Asianet Suvarna News

ಮೋದಿಗೂ ಇಷ್ಟವಿರಲಿಲ್ಲ 2000 ರು. ನೋಟು : ನೋಟುಗಳ ಹಿಂತೆಗೆತ ಅಪನಗದೀಕರಣ ಅಲ್ಲ: ನೃಪೇಂದ್ರ

2016ರಲ್ಲಿ ನೋಟು ಅಪನಗದೀಕರಣದ ಬಳಿಕ 2000 ರು. ಮುಖಬೆಲೆಯ ನೋಟು ಬಿಡುಗಡೆಯ ಪ್ರಸ್ತಾಪಕ್ಕೆ ಪ್ರಧಾನಿ ನರೇಂದ್ರ ಮೋದಿ ಆಕ್ಷೇಪ ಹೊಂದಿದ್ದರು ಎಂದು ಪ್ರಧಾನಿಗಳ ಪ್ರಧಾನ ಕಾರ್ಯದರ್ಶಿಯಾಗಿದ್ದ ನೃಪೇಂದ್ರ ಮಿಶ್ರಾ ಹೇಳಿದ್ದಾರೆ.

PMs Principal Secretary Nripendra Mishra said Modi also did not like RS 2000 Note, Withdrawal of notes is not demonetisation akb
Author
First Published May 21, 2023, 7:13 AM IST

ನವದೆಹಲಿ: 2016ರಲ್ಲಿ ನೋಟು ಅಪನಗದೀಕರಣದ ಬಳಿಕ 2000 ರು. ಮುಖಬೆಲೆಯ ನೋಟು ಬಿಡುಗಡೆಯ ಪ್ರಸ್ತಾಪಕ್ಕೆ ಪ್ರಧಾನಿ ನರೇಂದ್ರ ಮೋದಿ ಆಕ್ಷೇಪ ಹೊಂದಿದ್ದರು ಎಂದು ಪ್ರಧಾನಿಗಳ ಪ್ರಧಾನ ಕಾರ್ಯದರ್ಶಿಯಾಗಿದ್ದ ನೃಪೇಂದ್ರ ಮಿಶ್ರಾ ಹೇಳಿದ್ದಾರೆ.

ಅಧಿಕಾರಿಗಳ ತಂಡ ಅಪನಗದೀಕರಣದ ಪ್ರಸ್ತಾಪದ ಬಳಿಕ ಹಣದ ತುರ್ತು ಅಗತ್ಯವನ್ನು ಪೂರೈಸಲು 2000 ರು.ಮುಖಬೆಲೆಯ ನೋಟು ಬಿಡುಗಡೆ ಪ್ರಸ್ತಾಪ ಮುಂದಿಟ್ಟಿರು. ಆದರೆ ಬಡವರು ಮತ್ತು ಮಧ್ಯಮ ವರ್ಗದ ಜನರು 2000 ರು. ಮುಖಬೆಲೆಯ ನೋಟುಗಳನ್ನು ಬಳಸುವುದಿಲ್ಲ. ಅವರು ಹೆಚ್ಚಾಗಿ 100 ರು. ಮತ್ತು 500 ರು.ನೋಟು ಬಳಸುತ್ತಾರೆ. ಹೀಗಾಗಿ ಬಡವರಿಗೆ ತೊಂದರೆಯಾಗುವ ನೋಟುಗಳ ಬಿಡುಗಡೆಗೆ ತಮ್ಮ ಆಕ್ಷೇಪ ಇದೆ ಎಂದಿದ್ದರು. ಈ ವೇಳೆ ಆಪ್ತರ ತಂಡ ಇದು ತಾತ್ಕಾಲಿಕ ಕ್ರಮ ಅಷ್ಟೇ ಎಂದು ಮನವರಿಕೆ ಮಾಡಿಕೊಟ್ಟಿತು. ಹೀಗಾಗಿ ತಮ್ಮ ತಂಡದ ಸಲಹೆ ಅನ್ವಯ, ತಂಡದ ನಾಯಕನಾಗಿ ಅವರು ಈ ನಿರ್ಧಾರ ಒಪ್ಪಿಕೊಂಡರು ಎಂದು ಮಿಶ್ರಾ ಹೇಳಿದ್ದಾರೆ.

2000 ರು. ನೋಟುಗಳ ಹಿಂತೆಗೆತ ಅಪನಗದೀಕರಣ ಅಲ್ಲ: ನೃಪೇಂದ್ರ

2 ಸಾವಿರ ರು. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುತ್ತಿರುವುದು ಅಪನಗದೀಕರಣ ಅಲ್ಲ ಎಂದು 2016ರ ಅಪನಗದೀಕರಣ ವೇಳೆ ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿದ್ದ ನೃಪೇಂದ್ರ ಮಿಶ್ರಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  2016ರ ನ.8ರಂದು ಅಪನಗದೀಕರಣವಾದಾಗ ಆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿದ್ದ ನೃಪೇಂದ್ರ ಅವರಿಗೆ ಅಪನಗದೀಕರಣ ಯೋಚನೆಯ ಹಿಂದಿನ ಕಾರಣಗಳೂ ಗೊತ್ತು. ಹೀಗಾಗಿ ಅವರ ಅಭಿಪ್ರಾಯ ಮಹತ್ವ ಪಡೆದುಕೊಂಡಿದೆ.

ಬ್ಯಾಂಕ್ ಖಾತೆ ಇಲ್ಲದವರು 2000ರೂ. ನೋಟು ವಿನಿಮಯ ಮಾಡಿಕೊಳ್ಳುವುದು ಹೇಗೆ? ಎಲ್ಲಿ?

ದೈನಂದಿನ ವಹಿವಾಟುಗಳಿಗೆ 2000 ರು. ಮುಖಬೆಲೆಯ ನೋಟುಗಳು ವ್ಯವಹಾರಿಕ ಕರೆನ್ಸಿ ಅಲ್ಲ ಎಂದು ಪ್ರಧಾನಿ ನಂಬಿಕೆ ಹೊಂದಿದ್ದಾರೆ. ಆದರೆ ಇದು ಕಪ್ಪು ಹಣ ಸೃಷ್ಟಿಗೆ ಹಾಗೂ ತೆರಿಗೆ ವಂಚನೆಗೆ ಅನುವು ಮಾಡಿಕೊಡುತ್ತದೆ. ಹೀಗಾಗಿ ಕಡಿಮೆ ಮುಖಬೆಲೆಯ ನೋಟುಗಳನ್ನು ಜನಸಮೂಹದ ಹಣ ಎಂದು ಪ್ರಧಾನಿ ಭಾವಿಸಿದ್ದಾರೆ ಎಂದು ಅವರು ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದಾರೆ.

2000 ರು. ಮುಖಬೆಲೆಯ ನೋಟುಗಳ ಹಿಂತೆಗೆತವು ಪ್ರಧಾನಿ ನರೇಂದ್ರ ಮೋದಿ ಅವರ ಹಂತಹಂತದ ಪ್ರಕ್ರಿಯೆಯನ್ನು ದೃಢೀಕರಿಸುತ್ತದೆ. ಮೊದಲು 2000 ರು. ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಲಾಯಿತು, ಬಳಿಕ ಹಂತಹಂತವಾಗಿ ಚಲಾವಣೆಯಿಂದ ಹಿಂದಕ್ಕೆ ಪಡೆಯಲಾಯಿತು. ಇದೀಗ 2023ರ ಸೆ.30ರಿಂದ ಸಂಪೂರ್ಣವಾಗಿ ಬಳಕೆ ನಿಲ್ಲಿಸಲಾಗುತ್ತಿದೆ. ಆದರೆ ಇದನ್ನು ಅಪನಗದೀಕರಣ ಎಂದು ವದಂತಿ ಹಬ್ಬಿಸಲಾಗುತ್ತಿದೆ. ಇದು ಅಪನಗದೀಕರಣ ಅಲ್ಲ ಎಂದು ನೃಪೇಂದ್ರ (Nripendra) ಅವರು ತಿಳಿಸಿದ್ದಾರೆ.

2000 ನೋಟ್‌ ವಾಪಸ್‌ಗೆ ಮೋದಿ ವಿರುದ್ಧ ವಿಪಕ್ಷಗಳ ವಾಗ್ದಾಳಿ

2000 ರು. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡ ಕೇಂದ್ರ ಸರ್ಕಾರದ ನಿರ್ಧಾರದ ಬೆನ್ನಲ್ಲೇ ಶನಿವಾರ ವಿಪಕ್ಷಗಳು ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ‘ಎರಡನೇ ನೋಟು ಅಮಾನ್ಯೀಕರಣವು ಮೊದಲಿನ ತಪ್ಪು ನಿರ್ಧಾರವನ್ನು ಮುಚ್ಚುವ ಪ್ರಯತ್ನವೇ? ಇದರಿಂದ ದೇಶದ ಆರ್ಥಿಕತೆಗೆ ನಷ್ಟವಾಗಿದ್ದು ಈ ಬಗ್ಗೆ ತನಿಖೆ ನಡೆಯಬೇಕು’ ಎಐಸಿಸಿ  ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆಗ್ರಹಿಸಿದ್ದಾರೆ.

ಇನ್ನು ಪಕ್ಷೇತರ ರಾಜ್ಯಸಭಾ ಸಂಸದ ಕಪಿಲ್‌ ಸಿಬಲ್‌ (Kapil sibal), ‘ಚಲಾವಣೆಯಲ್ಲಿರುವ ನಗದು ಭ್ರಷ್ಟಾಚಾರಕ್ಕೆ ನೇರ ಸಂಬಂಧ ಹೊಂದಿದೆ. 2016ರಲ್ಲಿ ಚಲಾವಣೆಯಲ್ಲಿದ್ದ ನಗದು 17.7 ಲಕ್ಷ ಕೋಟಿ ರು. ಇದ್ದರೆ 2022ರಲ್ಲಿ 30.18 ಲಕ್ಷ ಕೋಟಿ ರು. ಇದೆ ಹಾಗಾಗಿ ಭ್ರಷ್ಟಾಚಾರ ಹೆಚ್ಚಿದೆ. ಮೋದಿ ಜಿ ಇದಕ್ಕೇನು ಹೇಳುತ್ತೀರಿ’ ಎಂದು ಕಿಡಿಕಾರಿದ್ದಾರೆ.

7 ವರ್ಷಕ್ಕೇ ಇತಿಹಾಸದ ಪುಟ ಸೇರಿದ ಗುಲಾಬಿ ನೋಟಿನ ಕತೆ ಇದು!

‘2000ರು. ನೋಟು ಏಕೆ ಪರಿಚಯಿಸಿದಿರಿ. ಶೀಘ್ರ 500 ನೋಟು ಬ್ಯಾನ್‌ ಆಗಬಹುದೇ?, ಸ್ಮಾರ್ಟ್‌ಪೋನ್‌ (Smart Phone) ಇಲ್ಲದ 70 ಕೋಟಿ ಭಾರತೀಯ ಡಿಜಿಟಲ್‌ ಪಾವತಿ ಹೇಗೆ ಮಾಡಬೇಕು ಎಂದು ಎಂಐಎಂ ನಾಯಕ, ಸಂಸದ ಅಸಾದುದ್ದೀನ್‌ ಒವೈಸಿ (Asadudin Owaisi) ಪ್ರಶ್ನಿಸಿದ್ದಾರೆ. ‘ತಾನೇ ಮುದ್ರಿಸಿದ ನೋಟನ್ನು 7 ವರ್ಷ ಬಳಸದವರು 70 ವರ್ಷದಲ್ಲಿ ದೇಶ ಏನು ಮಾಡಿದೆ ಎಂದು ಕೇಳುತ್ತಾರೆ’ ಎಂದು ಕಾಂಗ್ರೆಸ್‌ ನಾಯಕ ಪವನ್‌ ಖೇರಾ (Pavan Khera) ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

Follow Us:
Download App:
  • android
  • ios