ಆಲೂಗಡ್ಡೆ ಬೆಳೆದ ರೈತರ ಮೇಲೆ ಪೆಪ್ಸಿ ಮೊಕದ್ದಮೆ: ಇದ್ಯಾವ ಸೀಮೆ ನ್ಯಾಯ?
ನಿರ್ದಿಷ್ಟ ತಳಿಯ ಆಲೂಗಡ್ಡೆ ಬೆಳೆದ ರೈತರ ವಿರುದ್ಧ ಮೊಕದ್ದಮೆ ಹೂಡಿದ ಪೆಪ್ಸಿ| ಗುಜರಾತ್ನ 9 ರೈತರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಪೆಪ್ಸಿ| ಲೇಸ್ ಚಿಪ್ಸ್ಗಾಗಿ ನಿರ್ದಿಷ್ಟ ತಳಿಯ ಆಲೂಗಡ್ಡೆ ಮೇಲೆ ಸ್ವಾಮ್ಯತೆ ಹೊಂದಿರುವ ಪೆಪ್ಸಿ| ಅಕ್ರಮವಾಗಿ ಈ ತಳಿಯ ಆಲೂಗಡ್ಡೆ ಬೆಳೆದು ಮಾರಾಟ ಮಾಡಿದ ಆರೋಪ| ಪೆಪ್ಸಿ ನಿರ್ಧಾರಕ್ಕೆ ಭಾರತೀಯ ಕಿಸಾನ್ ಸಂಘ ಕೆಂಡಾಮಂಡಲ| ಬೆಳೆ ಬೆಳೆಯುವ ರೈತನ ಹಕ್ಕು ಕಸಿಯಲು ಸಾಧ್ಯವಿಲ್ಲ ಎಂದ ಬಿಕೆಎಸ್|
ಅಹಮದಾಬಾದ್(ಏ.26): ನಿರ್ದಿಷ್ಟ ತಳಿಯ ಆಲೂಗಡ್ಡೆ ಬೆಳೆದು ಒಪ್ಪಂದ ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ಪೆಪ್ಸಿ ಕಂಪನಿ ಗುಜರಾತ್ನ 9 ರೈತರ ಮೇಲೆ ಮೊಕದ್ದಮೆ ದಾಖಲಿಸಿದ ಘಟನೆ ನಡೆದಿದೆ.
ತನ್ನ ಲೇಸ್ ಆಲಗೂಡ್ಡೆ ಚಿಪ್ಸ್ಗಾಗಿ ಬೆಳೆಯುವ ವಿಶಿಷ್ಟ ತಳಿಯ ಆಲೂಗಡ್ಡೆಯನ್ನು ರೈತರು ತಮ್ಮ ಲಾಭಕ್ಕಾಗಿ ಬೆಳೆದಿದ್ದಾರೆ ಎಂಬುದು ಪೆಪ್ಸಿ ಕಂಪನಿಯ ಆರೋಪವಾಗಿದೆ.
ಆದರೆ ಪೆಪ್ಸಿ ಕಂಪನಿ ನಡೆಯಿಂದ ಕೆಂಡಾಮಂಡಲವಾಗಿರುವ ಭಾರತೀಯ ಕಿಸಾನ್ ಸಂಘ, ರೈತ ಏನು ಬೆಳೆಯಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಯಾರಿಗೂ ಇಲ್ಲ ಎಂದು ಕಿಡಿಕಾರಿದೆ. ಅಲ್ಲದೇ ಈ ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ರೈತರ ಹಕ್ಕು ಕಾಪಾಡಬೇಕು ಎಂದು ಆಗ್ರಹಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಕೆಎಸ್ ಮುಖ್ಯಸ್ಥ ಕೆವಿ ಪ್ರಭು, ತನ್ನ ರೈತ ಜಮೀನಿನಲ್ಲಿ ಬೆಳೆ ಬೆಳೆಯುವ ಹಕ್ಕನ್ನು ಹೊಂದಿದ್ದು, ಒಂದು ನಿರ್ದಿಷ್ಟ ಕಂಪನಿಗಾಗಿ ಈ ಹಕ್ಕನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಲೇಸ್ ಗಾಗಿ ತಾನು ನಿರ್ದಿಷ್ಟ ತಳಿಯ ಆಲೂಗಡ್ಡೆ ಮೇಲೆ ಸ್ವಾಮ್ಯತೆ ಪಡೆದಿದ್ದು, ಇದನ್ನು ಅಕ್ರಮವಾಗಿ ಬೆಳೆಯುವ ಮೂಲಕ ಹೆಚ್ಚಿನ ಲಾಭಕ್ಕಾಗಿ ರೈತರು ಮುಂದಾಗಿದ್ದಾರೆ ಎಂದು ಪೆಪ್ಸಿ ಕಂಪನಿ ಆರೋಪಿಸಿದೆ.
ಸುಮಾರು 9 ರೈತರು ಸ್ವಾಮ್ಯತೆ ಪಡೆದಿರುವ ತನ್ನ ನಿರ್ದಿಷ್ಟ ತಳಿಯ ಆಲೂಗಡ್ಡೆ ಬೆಳೆದು ಮಾರುತ್ತಿರುವುದರಿಂದ ಅವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪೆಪ್ಸಿ ಕಂಪನಿ ತಿಳಿಸಿದೆ.
ಆದರೆ ಈ ಆರೋಪ ನಿರಾಧಾರ ಎಂದಿರುವ ರೈತ ಸಂಘಟನೆ, ರೈತರ ಹಕ್ಕು ಮತ್ತು ಜೀವ ವೈವಿಧ್ಯತೆ ಮೇಲೆ ಪೆಪ್ಸಿ ಕಂಪನಿ ಪ್ರಹಾರ ನಡೆಸಿದೆ ಎಂದು ಗಂಭೀರ ಆರೋಪ ಮಾಡಿದೆ.