* ಕೇಂದ್ರಕ್ಕೆ ವಿಪಕ್ಷಗಳ ಆಡಳಿತದ ರಾಜ್ಯಗಳ ಬೇಡಿಕೆ* ರಾಜ್ಯಗಳ ಬೇಡಿಕೆ ಬಗ್ಗೆ ಇಂದು ಮಂಡಳಿ ನಿರ್ಧಾರ* 5 ವರ್ಷ ನಷ್ಟಭರಿಸಿ ಇಲ್ಲವೇ ಹಂಚಿಕೆ ನೀತಿ ಬದಲಾಯಿಸಿ

ಚಂಡೀಗಢ(ಜೂ.29): ಜಿಎಸ್‌ಟಿ ಜಾರಿಯಾದ ಬಳಿಕ ರಾಜ್ಯಗಳಿಗೆ ಆದ ನಷ್ಟವನ್ನು ಕೇಂದ್ರ ಸರ್ಕಾರ ಭರಿಸುವ ಅವಧಿ ಮುಕ್ತಾಯಗೊಂಡ ಬೆನ್ನಲ್ಲೇ, ಈ ಯೋಜನೆಯನ್ನು ಇನ್ನೂ 5 ವರ್ಷ ವಿಸ್ತರಿಸಿ ಇಲ್ಲವೇ ತೆರಿಗೆ ಆದಾಯ ಹಂಚಿಕೆ ನೀತಿಯಲ್ಲಿ ಬದಲಾವಣೆ ಮಾಡಿ ಎಂದು ವಿಪಕ್ಷಗಳ ಆಡಳಿತದ ರಾಜ್ಯಗಳು ಕೇಂದ್ರವನ್ನು ಒತ್ತಾಯಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಗಳವಾರದಿಂದ ಇಲ್ಲಿ ಆರಂಭವಾದ ಎರಡು ದಿನಗಳ ಜಿಎಸ್‌ಟಿ ಮಂಡಳಿ ಸಭೆಗೂ ಮುನ್ನ ವಿಪಕ್ಷಗಳ ಆಡಳಿತದ ರಾಜ್ಯಗಳು ಇಂಥದ್ದೊಂದು ಬೇಡಿಕೆ ಇಟ್ಟಿವೆ. ಈ ಕುರಿತು ಬುಧವಾರದ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ.

ಬೇಡಿಕೆ ಏನು?:

ನಷ್ಟಭರಿಸುವ ಅವಧಿ 2022ರ ಜುಲೈಗೆ ಮುಗಿಯಲಿದೆ. ಆದರೆ ರಾಜ್ಯಗಳಿಗೆ ಇನ್ನೂ ಹೆಚ್ಚಿನ ತೆರಿಗೆ ಹಣ ಹರಿದು ಬರದೇ ಇರುವ ಕಾರಣ ಇನ್ನೂ 5 ವರ್ಷ ಕೇಂದ್ರ ಸರ್ಕಾರವೇ ನಷ್ಟಭರಿಸಬೇಕು ಎಂದು ರಾಜ್ಯಗಳು ಒತ್ತಾಯಿಸಿವೆ. ಒಂದು ವೇಳೆ ಇದಕ್ಕೆ ಒಪ್ಪದೇ ಹೋದಲ್ಲಿ ಹಾಲಿ ಜಿಎಸ್‌ಟಿ ಸಂಗ್ರಹದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಜಾರಿಯಲ್ಲಿರುವ ಶೇ.50-ಶೇ.50 ಹಂಚಿಕೆ ವಿಧಾನ ಬದಲಾಯಿಸಬೇಕು. ರಾಜ್ಯಗಳಿಗೆ ಶೇ.70-80ರಷ್ಟುಪಾಲು ಕೊಡಬೇಕು ಎಂದು ಅವು ಒತ್ತಾಯಿಸಿವೆ.

ಸುಪ್ರೀಂ ತೀರ್ಪು ಉಲ್ಲೇಖಿಸಿ ಎಚ್ಚರಿಕೆ

ಇತ್ತೀಚಿನ ತೀರ್ಪೊಂದರ ವೇಳೆ ಸುಪ್ರೀಂಕೋರ್ಚ್‌, ಜಿಎಸ್‌ಟಿ ಮಂಡಳಿಯ ನಿರ್ಧಾರ ಪಾಲನೆ ರಾಜ್ಯಗಳಿಗೆ ಕಡ್ಡಾಯವಲ್ಲ. ಅದರ ನಿರ್ಧಾರ ರಾಜ್ಯಗಳ ಪಾಲಿಗೆ ಕೇವಲ ಸಲಹೆ ರೂಪದ್ದು ಎಂದು ಹೇಳಿತ್ತು. ಈ ಅಂಶಗಳನ್ನು ತಮ್ಮ ಬೇಡಿಕೆಯಲ್ಲಿ ಪ್ರಸ್ತಾಪಿಸಿರುವ ರಾಜ್ಯಗಳು, ಒಂದು ವೇಳೆ ಕೇಂದ್ರ ಸರ್ಕಾರ ತಮ್ಮ ಬೇಡಿಕೆಗೆ ಒಪ್ಪದೇ ಹೋದಲ್ಲಿ ತಾವೇ ತೆರಿಗೆ ದರ ನಿಗದಿ ಮಾಡಬಹುದು ಎಂಬ ಪರೋಕ್ಷ ಎಚ್ಚರಿಕೆ ಸಂದೇಶವನ್ನು ರಾಜ್ಯಗಳಿಗೆ ರವಾನಿಸಿವೆ.