*  3 ತಿಂಗ​ಳಲ್ಲಿ ಶೇ.43ರಷ್ಟು ವಿದೇಶಿ ಹೂಡಿಕೆ ರಾಜ್ಯಕ್ಕೆ ಬಂದಿ​ದೆ*  ಅತೀ ಹೆಚ್ಚು ಎಫ್‌​ಡಿಐ ರಾಜ್ಯಕ್ಕೆ ಹರಿದು ಬರು​ತ್ತಿ​ದೆ*  ಈಗಿರುವ ಕೈಗಾರಿಕೆಗಳು ನಮ್ಮ ರಾಜ್ಯ ತೊರೆಯುವ ಪ್ರಶ್ನೆಯೇ ಇಲ್ಲ 

ಉಡುಪಿ(ಏ.12): ರಾಜ್ಯದಲ್ಲಿ ನಡೆಯುತ್ತಿರುವ ಧರ್ಮಗಳ(Religion) ನಡುವಿನ ಸಂಘರ್ಷದಿಂದ ರಾಜ್ಯಕ್ಕೆ ಬರುವ ಉದ್ದಿಮೆಗಳಿಗೆ, ಕೈಗಾರಿಕೆಗಳಿಗೆ ಸಮಸ್ಯೆಯಾಗುತ್ತದೆ ಎಂಬುದು ಸುಳ್ಳು. ಅತೀ ಹೆಚ್ಚು ವಿದೇಶಿ ನೇರ ಹೂಡಿಕೆ (FDI) ನಮ್ಮ ರಾಜ್ಯಕ್ಕೆ ಬರುತ್ತಿದೆ. ಈ 3 ತಿಂಗ​ಳಲ್ಲಿ ಶೇ.43ರಷ್ಟುವಿದೇಶಿ ಹೂಡಿಕೆ ನಮ್ಮ ರಾಜ್ಯಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದರು.

Add Asianetnews Kannada as a Preferred SourcegooglePreferred

ಸೋಮವಾರ ರಾತ್ರಿ ಮಣಿಪಾಲದ ಕಂಟ್ರಿ ಇನ್‌ ಹೋಟೆಲ್‌ನಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿ​ಕ್ರಿ​ಯಿ​ಸಿದ ಅವರು, ಪ್ರಪಂಚದ ಮೂಲೆಮೂಲೆಗಳಿಂದ ಹೂಡಿಕೆದಾರರು(Investors) ಕರ್ನಾಟಕಕ್ಕೆ(Karnataka) ಬರುತ್ತಿದ್ದಾರೆ. ಈಗಿ​ರುವ ಕೈಗಾರಿಕೆಗಳು ನಮ್ಮ ರಾಜ್ಯ ತೊರೆಯುವ ಪ್ರಶ್ನೆಯೇ ಇಲ್ಲ, ಕರ್ನಾಟಕದಲ್ಲಿ ಮಾನವ ಸಂಪನ್ಮೂಲ ಯಥೇಚ್ಛವಾಗಿದೆ. ಮೂಲಸೌಕರ್ಯದ ಗುಣಮಟ್ಟವೂ ಚೆನ್ನಾಗಿದೆ. ದೇಶದ ಅತ್ಯುತ್ತುಮ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ (ಆರ್‌ ಆ್ಯಂಡ್‌ ಡಿ ಸೆಂಟರ್‌) ಗಳು ಸೇರಿ 180 ಕೇಂದ್ರಗಳು ನಮ್ಮ ರಾಜ್ಯದಲ್ಲೇ ಇವೆ. ಬೇರೆ ರಾಜ್ಯಗಳಿಗೆ ವಿದೇಶಿ ಹೂಡಿಕೆದಾರರಿಂದ ಬೇಡಿಕೆ ಇಲ್ಲ, ಹಾಗಾಗಿ ಆಫರ್‌ ಕೊಡುತ್ತಿದ್ದಾರೆ. ಅಂಗಡಿಗಳಲ್ಲಿ ವ್ಯಾಪಾರ ಇಲ್ಲದಾಗ ಆಫರ್‌ ಕೊಡುತ್ತಾರಲ್ಲ ಹಾಗೆ ಎಂದರು.

Samanata Day: ಮುರುಘಾ ಶ್ರೀ ಜನ್ಮದಿನ ಇನ್ನು ಸಮಾನತಾ ದಿನ: ಸಿಎಂ ಬೊಮ್ಮಾಯಿ

ನಾವು ಮಾತ​ನಾ​ಡಲ್ಲ, ನಮ್ಮ ಕೆಲಸ ಮಾತ​ನಾ​ಡು​ತ್ತ​ವೆ-ಸಿಎಂ

‘ಮುಖ್ಯಮಂತ್ರಿ ನಾಲಿಗೆ ಕಳೆದುಕೊಂಡಿದ್ದಾರೆ’ ಎಂಬ ಪ್ರತಿ​ಪಕ್ಷ ನಾಯ​ಕ ಸಿದ್ದ​ರಾ​ಮಯ್ಯ(Siddaramaiah) ಟೀಕೆ​ಗ​ಳಿಗೆ ಸಿಎಂ ಬೊಮ್ಮಾಯಿ ತೀವ್ರ ಆಕ್ರೋಶ ವ್ಯಕ್ತ​ಪ​ಡಿ​ಸಿ​ದ್ದಾ​ರೆ. ‘ನಾವು ಮಾತನಾಡುವುದಿಲ್ಲ, ನಮ್ಮ ಕೆಲಸಗಳೇ ಮಾತನಾಡುತ್ತದೆ, ಯಾವ ಸಂದರ್ಭದಲ್ಲಿ ಏನು ನಿರ್ಧಾರ ಏನು ಕ್ರಮ ಕೈಗೊಳ್ಳಬೇಕು ನಮಗೆ ಗೊತ್ತಿದೆ. ಅದನ್ನು ಸಿದ್ದರಾಮಯ್ಯ ಅವರಿಂದ ಕಲಿಯಬೇಕಾದ್ದಿಲ್ಲ’ ಎಂದಿದ್ದಾರೆ.

3 ತಂಡಗಳ ರಾಜ್ಯ ಪ್ರವಾಸ:

ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆ(Karnataka Assembly Election) ಈಗಾಗಲೇ ತಯಾರಿ ಪ್ರಾರಂಭಿಸಿದ್ದೇವೆ. ನಾಳೆಯಿಂದ ಎಲ್ಲಾ ತಂಡಗಳು ರಾಜ್ಯ ಪ್ರವಾಸ ಮಾಡಲಿವೆ. ಮೂರು ತಂಡಗಳು ಮೂರು ವಿಭಾಗಗಳನ್ನು ಹಂಚಿಕೊಂಡಿವೆ. ಪಕ್ಷದ ಕಾರ್ಯಕಾರಿ ಸಮಿತಿಗೂ ಮುನ್ನ ಒಂಬತ್ತು ಸಭೆ ಮಾಡುತ್ತೇವೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುತಾಲಿಕ್‌ ವಿವಾದ ಬೇಡ: 

ಶ್ರೀರಾಮ ಸೇನೆಯ ಪ್ರಮೋದ್‌ ಮುತಾಲಿಕ್‌(Pramod Mutaik) ಅವರನ್ನು ಗಡಿಪಾರು ಮಾಡುವಂತೆ ಮುಸ್ಲಿಂ ಮತ್ತು ಕಾಂಗ್ರೆಸ್‌(Congress) ನಾಯಕರು ಕೋಲಾರ ಡಿಸಿ ಭೇಟಿಯಾದ ವಿವಾದದಲ್ಲಿ ಬೀಳಲು ನಾನು ಬಯಸುವುದಿಲ್ಲ. ಯಾರು ಏನು ಹೇಳಿಕೆ ಕೊಡುತ್ತಾರೆ ಎಂಬುದು ಮುಖ್ಯವಲ್ಲ. ಸುಮ್ಮನೆ ವಿವಾದ ಬೆಳೆಸಲು ಹೇಳಿಕೆ ಕೊಡುತ್ತಾರೆ. ರಾಜ್ಯದ ಜನರ ಆಸ್ತಿಪಾಸ್ತಿ ಜೀವ ರಕ್ಷಣೆ ನಮ್ಮ ಕರ್ತವ್ಯ. ಅದರಲ್ಲಿ ಯಾವುದೇ ರಾಜಿ ಇಲ್ಲ. ಯಾರೇ ಇರಲಿ, ನಿರ್ದಾಕ್ಷಿಣ್ಯ, ದಿಟ್ಟ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪ್ರತಿಕ್ರಿಯಿಸಿದರು.

ಉಡುಪಿಯಲ್ಲಿ ಮುಖ್ಯಮಂತ್ರಿ ಟೆಂಪಲ್‌ ರನ್‌

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಉಡುಪಿಯಲ್ಲಿ ರಾತ್ರಿ ವರೆಗೆ ಬಿಡುವಿಲ್ಲದೇ ಸರ್ಕಾರಿ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಬೆಳಗ್ಗೆ 12.30ಕ್ಕೆ ನಗರದ ಆದಿ ಉಡುಪಿ ಹೆಲಿಪ್ಯಾಡ್‌ಗೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದರು. ಸಚಿವರಾದ ಶ್ರೀರಾಮುಲು ಮತ್ತು ಸುನಿಲ್‌ ಕುಮಾರ್‌ ಜೊತೆಗಿದ್ದರು. ಅಲ್ಲಿಂದ ಇನ್ನಿಬ್ಬರು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಎಸ್‌. ಅಂಗಾರ ಅವರನ್ನೊಳಗೊಂಡು ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಳದ ಬ್ರಹ್ಮಕಲಶೋತ್ಸವ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು, ನಂತರ ಅಲ್ಲಿಯೇ ಮಧ್ಯಾಹ್ನದ ಊಟ ಪೂರೈಸಿದರು.

ಸರ್ಕಾರ ಮಾಡುವ ಕೆಲಸ ಮಾಡುತ್ತಿರುವ ಶಕ್ತಿಧಾಮ: ಸಿಎಂ ಬೊಮ್ಮಾಯಿ

ನಂತರ ಉಡುಪಿಯ ಅಜ್ಜರಕಾಡುನಲ್ಲಿ ನೂತನ ಹವಾನಿಯಂತ್ರಿತ ಬನ್ನಂಜೆ ಗೋವಿಂದಾಚಾರ್ಯ ಡಿಜಿಟಲ್‌ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬನ್ನಂಜೆಯ ಡಾ.ವಿ.ಎಸ್‌.ಆಚಾರ್ಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣವನ್ನು ಉದ್ಘಾಟಿಸಿದರು.

ಬಳಿಕ ಬನ್ನಂಜೆ ನಾರಾಯಣಗುರು ಮಂದಿರಕ್ಕೆ ತೆರಳಿ, ಗುರುಗಳಿಗೆ ಪೂಜೆ ಸಲ್ಲಿಸಿದರು, ಅಲ್ಲಿಂದ ಉಡುಪಿ ಕೃಷ್ಣಮಠಕ್ಕೆ ತೆರಳಿ ದೇವರ ದರ್ಶನ ಪಡೆದು, ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರಿಂದ ಗೌರವ ಸ್ವೀಕರಿಸಿದರು.

ಅಲ್ಲಿಂದ ಮಲ್ಪೆಯ ಕೊಳದ ಬಾಲಕರ ಶ್ರೀರಾಮ ಭಜನಾ ಮಂದಿರದ ಬ್ರಹ್ಮಕಲಶೋತ್ಸವ-ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಂತರ ಉಡುಪಿ ಸಗ್ರಿಯ ವಾಸುಕಿ ಸುಬ್ರಹ್ಮಣ್ಯ ದೇವಾಲಯದಲ್ಲಿ ನಾಗಮಂಡಲೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು. ಸಂಜೆ ಮಣಿಪಾಲದ ಕಂಟ್ರಿ ಇನ್‌ ಹೊಟೇಲಿನಲ್ಲಿ ಪಕ್ಷದ ಪ್ರಮುಖರೊಂದಿಗೆ ಸಂವಾದ ನಡೆಸಿ, ಅಲ್ಲಿಯೇ ವಾಸ್ತವ್ಯ ಮಾಡಿದರು.