ಆರ್ಬಿಐ ಸ್ವಾಧೀನಕ್ಕೆ ಮೋದಿ ಯತ್ನ: ಚಿದು ಕೊಟ್ಟ ದಾಖಲೆ ಏನು?
ನೋಟ್ ಬ್ಯಾನ್ ಆಗಿ 2 ವರ್ಷ ಕಳೆದಿರುವ ಸಂದರ್ಭದಲ್ಲಿಯೇ ಕಾಂಗ್ರೆಸ್ ನಾಯಕ, ಕೇಂದ್ರ ಹಣಕಾಸು ಇಲಾಖೆ ಮಾಜಿ ಸಚಿವ ಪಿ.ಚಿದಂಬರಂ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಕೋಲ್ಕೊತಾ[ನ.08] ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ನರೇಂದ್ರ ಮೋದಿ ಸರಕಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವನ್ನೇ ವಶಪಡಿಸಿಕೊಳ್ಳಲು ಮುಂದಾಗಿದೆ ಎಂದು ಕಾಂಗ್ರೆಸ್ ನಾಯಕ, ಕೇಂದ್ರ ಹಣಕಾಸು ಇಲಾಖೆ ಮಾಜಿ ಸಚಿವ ಪಿ.ಚಿದಂಬರಂ ಗಂಭೀರ ಆರೋಪ ಮಾಡಿದ್ದಾರೆ.
ದೇಶದ ಆರ್ಥಿಕತೆ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ. ಕೇಂದ್ರ ಬ್ಯಾಂಕಿನ ನಿರ್ದೇಶಕರಿಗೂ ಸಹ ಸೂಚನೆ ನೀಡುತ್ತಿದೆ. ನವೆಂಬರ್ 19ರಂದು ನಡೆಯುವ ಆರ್ಬಿಐ ನಿರ್ದೇಶಕ ಮಂಡಳಿ ಸಭೆಯಲ್ಲಿ ತನ್ನ ಪ್ರಸ್ತಾವಗಳಿಗೆ ಸಮ್ಮತಿ ಪಡೆದುಕೊಳ್ಳಲು ಸರಕಾರ ಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ವಿತ್ತೀಯ ಕೊರತೆ ಬಿಕ್ಕಟ್ಟಿನಿಂದ ಸರಕಾರಕ್ಕೆ ಭಯ ಹುಟ್ಟಿದೆ. ಎಲ್ಲ ಮಾರ್ಗಗಳೂ ವಿಫಲವಾದ ಬಳಿಕ ಆರ್ಬಿಐ ಮೀಸಲು ನಿಧಿಯಿಂದ 1 ಲಕ್ಷ ಕೋಟಿ ರೂ.ಗಳನ್ನು ನೀಡುವಂತೆ ಕೇಂದ್ರ ಸರಕಾರ ಬೇಡಿಕೆ ಇಟ್ಟಿದ್ದು ದೇಶದ ಮೂಲ ಹಣಕ್ಕೆ ಕೈ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.