ಕರ್ಣಾಟಕ ಬ್ಯಾಂಕ್ಗೆ ಮತ್ತೊಂದು ಅಂಗಸಂಸ್ಥೆ
ಕರ್ಣಾಟಕ ಬ್ಯಾಂಕ್ ತನ್ನ ‘ಕೆಬಿಎಲ್ ಸರ್ವಿಸಸ್ ಲಿಮಿಟೆಡ್’ ಎನ್ನುವ ಸಂಪೂರ್ಣ ಸ್ವಾಯತ್ತ ಹಣಕಾಸೇತರ ಅಂಗಸಂಸ್ಥೆಯ ಕಾರ್ಯಾರಂಭಕ್ಕೆ ಚಾಲನೆ ನೀಡಿದೆ.
ಮಂಗಳೂರು (ಏ.01): ದೇಶದ ಅಗ್ರಗಣ್ಯ ಬ್ಯಾಂಕ್ಗಳಲ್ಲಿ ಒಂದಾದ ಕರ್ಣಾಟಕ ಬ್ಯಾಂಕ್ ತನ್ನ ‘ಕೆಬಿಎಲ್ ಸರ್ವಿಸಸ್ ಲಿಮಿಟೆಡ್’ ಎನ್ನುವ ಸಂಪೂರ್ಣ ಸ್ವಾಯತ್ತ ಹಣಕಾಸೇತರ ಅಂಗಸಂಸ್ಥೆಯ ಕಾರ್ಯಾರಂಭಕ್ಕೆ ಚಾಲನೆ ನೀಡಿದೆ. ‘ಕೆಬಿಎಲ್ ವಿಕಾಸ್’ ಎಂಬ ಪರಿವರ್ತನಾ ಪ್ರಕ್ರಿಯೆಯ ಯೋಜನೆಗಳಲ್ಲೊಂದಾದ ‘ಕೆಬಿಎಲ್ ಸರ್ವಿಸಸ್’ ಅಂಗ ಸಂಸ್ಥೆಯು ತನ್ನ ಕೇಂದ್ರ ಕಚೇರಿಯನ್ನು ಬೆಂಗಳೂರಿನಲ್ಲಿ ಹೊಂದಿದೆ.
ಈ ಅಂಗಸಂಸ್ಥೆಯ ಕಾರ್ಯಾರಂಭಕ್ಕೆ ಚಾಲನೆ ನೀಡಿದ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಮತ್ತು ಕೆಬಿಎಲ್ ಸರ್ವಿಸಸ್ ಅಂಗಸಂಸ್ಥೆಯ ಅಧ್ಯಕ್ಷರೂ ಆಗಿರುವ ಮಹಾಬಲೇಶ್ವರ ಎಂ.ಎಸ್. ಮಾತನಾಡಿ, ಸಂಪೂರ್ಣ ಸ್ವಾಯತ್ತ ಅಂಗ ಸಂಸ್ಥೆ ಹೊಂದುತ್ತಿರುವುದು ಕರ್ಣಾಟಕ ಬ್ಯಾಂಕಿನ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲು. ಇದು ನಮ್ಮ ಬಹುದಿನಗಳ ಕನಸಾಗಿತ್ತು. ಈ ಅಂಗ ಸಂಸ್ಥೆ ಮೂಲಕ ನಾವು ಬ್ಯಾಂಕಿನ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ದಾಪುಗಾಲಿಟ್ಟಿದ್ದೇವೆ. ತನ್ಮೂಲಕ ಬ್ಯಾಂಕ್ ತನ್ನ ಕ್ಷಮತೆ ಹೆಚ್ಚಿಸಿಕೊಳ್ಳುವುದಲ್ಲದೆ, ಬ್ಯಾಂಕಿನ ಮೌಲ್ಯವೂ ಸಂವರ್ಧನೆಯಾಗಲಿದೆ ಎಂದು ಹೇಳಿದರು.
ಏ.1ರಿಂದ ಆಟೋ ಪೇಮೆಂಟ್ ಆಗದಿರಬಹುದು, ಎಚ್ಚರ! .
ನೇಪಥ್ಯದಲ್ಲಿ ನಡೆಯುವ ಹಣಕಾಸೇತರ ಚಟುವಟಿಕೆಗಳಾದ ಬ್ಯಾಕ್ ಎಂಡ್ ಪ್ರೊಸೆಸಿಂಗ್, ಸಂಗ್ರಹ, ತಂತ್ರಜ್ಞಾನ ಯೋಜನೆ ಮತ್ತು ನಿರ್ವಹಣೆ, ವ್ಯವಹಾರ ಆಕರಣೆಯಂಥ ಇನ್ನಿತರ ಕಾರ್ಯಗಳನ್ನು ಕೆಬಿಎಲ್ ಸರ್ವಿಸಸ್ ನಿರ್ವಹಿಸಲಿದೆ. ಇದರಿಂದಾಗಿ ಬ್ಯಾಂಕಿನ ಸಿಬ್ಬಂದಿಗೆ ಗ್ರಾಹಕರಿಗೆ ಸೇವೆ ಸಲ್ಲಿಸಲು ಹೆಚ್ಚಿನ ಸಮಯಾವಕಾಶ ದೊರೆಯಲಿದೆ ಎಂದರು.
ಈ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕಿನ ನಿರ್ದೇಶಕರಾದ ರಾಮ ಮೋಹನ ರಾವ್ ಬೆಳ್ಳೆ ಮತ್ತು ಡಿ.ಸುರೇಂದ್ರ ಕುಮಾರ್ ಇದ್ದರು.