ಇನ್ಫೋಸಿಸ್ ಸಂಸ್ಥೆಯಲ್ಲಿ ಆಂತರಿಕ ಕಲಹವಾಗುತ್ತಿದೆ ಎಂದು ಸುದ್ದಿಯಾಗುತ್ತಿದೆ. ಆದರೆ ಇಲ್ಲಿನ ಲೆಕ್ಕ ದೇವರು ಬದಲಿಸಲಾರ ಎಂದು ಸಂಸ್ಥಾಪಕ ನಂದನ್ ನೀಲೇಕಣಿ ಹೇಳಿದ್ದಾರೆ. 

ನವದೆಹಲಿ (ನ.07) : ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿಗಳಲ್ಲಿ ಒಂದಾಗಿರುವ ಬೆಂಗಳೂರು ಮೂಲದ ಇನ್ಫೋಸಿಸ್‌ನಲ್ಲಿ ಕಾರ್ಪೋರೆಟ್ ಆಡಳಿತ ವೈಫಲ್ಯಗಳಾಗಿವೆ ಎಂಬ ದೂರು ನೀಡಿದ್ದ ಅನಾಮಿಕ ಮಾಹಿತಿದಾರರಿಗೆ ಕಂಪನಿಯ ಓರ್ವ ಹಾಗೂ ಓರ್ವ ಮಾಜಿ ಹಿರಿಯ ಅಧಿಕಾರಿಯೊಬ್ಬರು ಕುಮ್ಮಕ್ಕು ನೀಡಿದ್ದಾರೆ ಎಂಬ ವರದಿ ಸಂಚಲನಕ್ಕೆ ಕಾರಣವಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರ ಬೆನ್ನಲ್ಲೇ, ಕಂಪನಿಯೊಳಗೆ ಆಂತರಿಕ ಕಲಹ ನಡೆಯುತ್ತಿದೆಯಾ? ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ ಈ ವರದಿಯನ್ನು ಕುಚೋದ್ಯದ ದೂಷಣೆ ಎಂದು ಕಂಪನಿ ಖಂಡಿಸಿದೆ. ಶೂನ್ಯ ಲಾಭಕ್ಕೆ ನೂರಾರು ಕೋಟಿ ರು. ಮೊತ್ತದ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಹೆಚ್ಚಿನ ಆದಾಯ ಹಾಗೂ ಲಾಭ ತೋರಿಸಲು ಲೆಕ್ಕಾಧಿಕಾರಿಗಳನ್ನೇ ದಾರಿ ತಪ್ಪಿಸುವ ಕೆಲಸವನ್ನು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಲೀಲ್ ಪಾರೀಖ್ ಹಾಗೂ ಮುಖ್ಯ ಹಣಕಾಸು ಅಧಿಕಾರಿ ನೀಲಂಜನ ರಾಯ್ ಅವರು ಮಾಡುತ್ತಿದ್ದಾರೆ ಎಂದು ಅನಾಮಿಕ ಮಾಹಿತಿದಾರರು ದೂರು ನೀಡಿದ್ದರು. ಇದು
ಭಾರಿ ಚರ್ಚೆಗೆ ಕಾರಣವಾಗಿತ್ತು. 

ಇನ್ಫೋಸಿಸ್ ಷೇರುಗಳ ಕುಸಿತಕ್ಕೂ ಕಾರಣವಾಗಿ, ಹೂಡಿಕೆದಾರರ ಸಂಪತ್ತು 53 ಸಾವಿರ ಕೋಟಿ ರು.ನಷ್ಟು ಕರಗಿತ್ತು. ಈ ಆರೋಪಗಳ ಕುರಿತು ಸ್ವತಂತ್ರ ತನಿಖೆ ನಡೆಸಲು ಬಾಹ್ಯ ಕಂಪನಿಯೊಂದನ್ನು ಇನ್ಫೋಸಿಸ್ ನೇಮಕ ಮಾಡಿತ್ತು. ನೈತಿಕ ಉದ್ಯೋಗಿಗಳು ಎಂದು ಹೇಳಿಕೊಂಡಿರುವ ಮಾಹಿತಿದಾರರು ಓರ್ವ ಸಹ ಸಂಸ್ಥಾಪಕ ಹಾಗೂ ಓರ್ವ ಮಾಜಿ ಹಿರಿಯ ಅಧಿಕಾರಿಯ ಅಣತಿಯಂತೆ ನಡೆದು ಕೊಂಡಿದ್ದಾರೆ ಎಂಬ ಅಂಶ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ವೆಬ್‌ಸೈಟ್‌ವೊಂದು ವರದಿ ಮಾಡಿದೆ. 

ಕಂಪನಿಯ ಸಹಸಂಸ್ಥಾಪಕ ಹಾಗೂ ಮಾಜಿ ಅಧಿಕಾರಿಯ ವಿರುದ್ಧ ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ಮಾಡಲಾಗಿರುವ ವರದಿ ಕುಚೋದ್ಯದ ದೂಷಣೆಯಾಗಿದೆ. ಇದನ್ನು ಕಂಪನಿ ಖಂಡಿಸುತ್ತದೆ ಎಂದು ಇನ್ಫೋಸಿಸ್ ಹೇಳಿಕೆ ಬಿಡುಗಡೆ ಮಾಡಿದೆ. ಅಲ್ಲದೆ ಆರೋಪಗಳ ಬಗ್ಗೆ ಬಾಹ್ಯ ಸಂಸ್ಥೆ ತನಿಖೆ ನಡೆಸುತ್ತಿದೆ. ಅದರಿಂದ ಹೊರಬರುವ ಮಾಹಿತಿಯನ್ನು ಸಂಬಂಧಿಸಿದ ಎಲ್ಲರೊಂದಿಗೂ ಹಂಚಿಕೊಳ್ಳಲಾಗುತ್ತದೆ ಎಂದು ತಿಳಿಸಿದೆ.

ದೇವರು ಲೆಕ್ಕ ಬದಲಿಸಲಾರ 
ಈ ನಡುವೆ ಸಮ್ಮೇಳನವೊಂದರಲ್ಲಿ ಮಾತನಾಡಿದ ಇನ್ಫೋಸಿಸ್ ಮುಖ್ಯಸ್ಥ ನಂದನ್ ನಿಲೇಕಣಿ, ಪರಿಪೂರ್ಣ ಹಾಗೂ ಗೌರವಾನ್ವಿತ ವ್ಯಕ್ತಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಉದ್ದೇಶದಿಂದ ಈ ಊಹಾಪೋಹಗಳನ್ನು ಹರಡಲಾಗುತ್ತಿದೆ. ಜೀವನಪೂರ್ತಿ ಕೊಡುಗೆ ನೀಡಿದ ಸಹಸಂಸ್ಥಾಪಕರ ಬಗ್ಗೆ ನನಗೆ ತುಂಬಾ ಗೌರವವಿದೆ. ಇನ್ಫೋಸಿಸ್‌ನಲ್ಲಿ ಬಲಿಷ್ಠ ಪ್ರಕ್ರಿಯೆಗಳು ಇವೆ. ದೇವರು ಕೂಡ ಕಂಪನಿಯ ಲೆಕ್ಕಗಳನ್ನು ಬದಲಿಸಲಾರ. ಈ ರೀತಿಯ ಆರೋಪಗಳ ಮೂಲಕ ನಮ್ಮ ಹಣಕಾಸು ತಂಡವನ್ನು ಅಪಮಾನಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.