ಉಕ್ಕು, ಕಬ್ಬಿಣದ ಅದಿರಿನ ಮೇಲಿನ ರಫ್ತು ಸುಂಕ ರದ್ದುಗೊಳಿಸಿದ ಕೇಂದ್ರ ಸರ್ಕಾರ; ಏರಿಕೆಯಾಗುತ್ತ ಉಕ್ಕಿನ ಬೆಲೆ?
ಮೇನಲ್ಲಿ ಕೇಂದ್ರ ಸರ್ಕಾರ ಉಕ್ಕು ಮತ್ತು ಕಬ್ಬಿಣದ ಅದಿರಿನ ಮೇಲೆ ರಫ್ತು ಸುಂಕ ವಿಧಿಸಿತ್ತು. ಬೆಲೆಯೇರಿಕೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿತ್ತು. ಆದರೆ, ಇಂದಿನಿಂದಲೇ ಅನ್ವಯಿಸುವಂತೆ ಸರ್ಕಾರ ಈ ಆದೇಶವನ್ನು ರದ್ದುಗೊಳಿಸಿದೆ.
ನವದೆಹಲಿ (ನ.19): ಉಕ್ಕಿನ ಉತ್ಪನ್ನಗಳು ಹಾಗೂ ಕಬ್ಬಿಣದ ಅದಿರಿನ ಮೇಲೆ ವಿಧಿಸಿದ್ದ ರಫ್ತು ಸುಂಕವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಈ ಆದೇಶ ಇಂದಿನಿಂದಲೇ (ನ.19) ಅನ್ವಯಿಸಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಹಣಕಾಸು ಸಚಿವಾಲಯದ ಅಧಿಸೂಚನೆ ಅನ್ವಯ ನಿರ್ದಿಷ್ಟ ಕಬ್ಬಿಣ ಹಾಗೂ ಉಕ್ಕಿನ ಉತ್ಪನ್ನಗಳ ಮೇಲೆ ಯಾವುದೇ ರಫ್ತು ಸುಂಕವಿಲ್ಲ. ಮೇ ನಲ್ಲಿ ಉಕ್ಕಿನ ಬೆಲೆಯಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೆಲೆಯೇರಿಕೆ ತಡೆಗೆ ಅನೇಕ ಕ್ರಮಗಳನ್ನು ಕೈಗೊಂಡಿತ್ತು. ಅದರ ಭಾಗವಾಗಿಯೇ ಮೇ 22ರಿಂದ ಜಾರಿಗೆ ಬರುವಂತೆ ಉಕ್ಕಿನ ರಫ್ತಿನ ಮೇಲೆ ಶೇ. 15ರಷ್ಟು ಸುಂಕ ವಿಧಿಸಿತ್ತು. ಅಲ್ಲದೆ, ಶೇ.58ಕ್ಕಿಂತ ಅಧಿಕ ಕಬ್ಬಿಣದ ಅಂಶ ಹೊಂದಿರುವ ಕಬ್ಬಿಣದ ಅದಿರಿನ ಮೇಲಿನ ರಫ್ತು ಸುಂಕವನ್ನು ಶೇ.30ರಿಂದ ಶೇ.50ಕ್ಕೆ ಹೆಚ್ಚಳ ಮಾಡಿತ್ತು. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರದ (Inflation) ಕಾರಣ ಉಕ್ಕಿನ ಬೆಲೆಯಲ್ಲಿ ಏರಿಕೆಯಾಗೋದನ್ನು ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿತ್ತು. ಹಾಗೆಯೇ ಲ್ಲಿದ್ದಲು (Coal) ಸೇರಿದಂತೆ ಪ್ರಮುಖ ಕಚ್ಚಾ ವಸ್ತುಗಳ (Raw materials) ಮೇಲಿನ ಆಮದು ಸುಂಕವನ್ನು (Import duty) ತಗ್ಗಿಸಿತ್ತು. ಸರ್ಕಾರದ ಈ ಎಲ್ಲ ಕ್ರಮಗಳಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಉಕ್ಕಿನ ಬೆಲೆಯಲ್ಲಿ ಇಳಿಕೆಯಾಗಿತ್ತು.
ಅಂಥ್ರಾಸೈಟ್/ಪಿಸಿಐ ಕಲ್ಲಿದ್ದಲು, ಕೋಕಿಂಗ್ ಕಲ್ಲಿದ್ದಲು, ಕೊಕ್, ಸೆಮಿ ಕೊಕ್ ಮತ್ತು ಫೆರೋನಿಕಲ್ ಮೇಲಿನ ಆಮದು ಸುಂಕದ ರಿಯಾಯಿತಿಗಳನ್ನು ಕೂಡ ಹಿಂಪಡೆಯಲಾಗದೆ. ಈ ವಾರದ ಪ್ರಾರಂಭದಲ್ಲಿ ಉಕ್ಕು ಸಚಿವ ಜ್ಯೋತಿರಾಧಿತ್ಯ ಸಿಂಧ್ಯಾ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ರಫ್ತು ಸುಂಕ ಕಡಿತ ಮಾಡಲಾಗಿದೆ.
ಉದ್ಯಮರಂಗದಲ್ಲಿ ಮಹಿಳೆಯರಿಗೆ ಉತ್ತೇಜನ ಅಗತ್ಯ: ಡಾ.ಶ್ರೀಧರ್ ಮಿಟ್ಟ
ಏಪ್ರಿಲ್ ಮೊದಲ ವಾರದಲ್ಲಿ ಎಚ್ ಆರ್ ಸಿ ಉಕ್ಕು (HRC steel) ಬೆಲೆ ಪ್ರತಿ ಟನ್ ಗೆ 78,800ರೂ. ತಲುಪಿತ್ತು. ಆದರೆ, ಸರ್ಕಾರ ರಫ್ತು ಸುಂಕ ಹೆಚ್ಚಿಸಿದ ಬಳಿಕ ಪ್ರತಿ ವಾರ 2,000ರೂ.-3,000 ರೂ. ಇಳಿಕೆಯಾಗಿತ್ತು. 2020-21ನೇ ಆರ್ಥಿಕ ವರ್ಷದಲ್ಲಿ ಭಾರತ 10.8 ಮಿಲಿಯನ್ ಟನ್ ಸಿದ್ಧಪಡಿಸಿದ ಉಕ್ಕನ್ನು ರಫ್ತು ಮಾಡಿತ್ತು. 2021-22ರಲ್ಲಿ ಭಾರತವು 13.5 ಮಿಲಿಯನ್ ಟನ್ (ಎಂಟಿ) ಸಿದ್ಧಪಡಿಸಿದ ಉಕ್ಕನ್ನು ರಫ್ತು ಮಾಡಿದೆ. ಇದೇ ವೇಳೆ ದೇಶೀಯ ಉಕ್ಕಿನ ಬಳಕೆಯು 94 ಎಂಟಿನಿಂದ 106 ಎಂಟಿಗೆ ಏರಿಕೆಯಾಗಿತ್ತು. 2021-22ರಲ್ಲಿ ಭಾರತದ ಕಬ್ಬಿಣದ ಅದಿರು ರಫ್ತು 15.3 ಎಂಟಿ ಆಗಿದ್ದರೆ, ಕಬ್ಬಿಣದ ಅದಿರು ಉಂಡೆಗಳ ರಫ್ತು 11 ಎಂಟಿ ಇತ್ತು.
2022ರ ಅಕ್ಟೋಬರ್ ನಲ್ಲಿ ಉಕ್ಕು (Steel) ಮತ್ತು ಕಬ್ಬಿಣದ ಅದಿರು (Iron Ore) ರಫ್ತು(Export) ಗಣನೀಯ ಇಳಿಕೆ ಕಂಡಿತ್ತು. ಇನ್ನು ದೇಶೀಯ ಮಾರುಕಟ್ಟೆಯಲ್ಲಿ ಕಬ್ಬಿಣ ಹಾಗೂ ಉಕ್ಕಿನ ಬೆಲೆಯಲ್ಲಿ ಇಳಿಕೆಯಾಗಿತ್ತು. ಈ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಉಕ್ಕು ಮತ್ತು ಕಬ್ಬಿಣದ ಬೆಲೆಯೇರಿಕೆಯನ್ನು ತಡೆಯುವಲ್ಲಿ ಸರ್ಕಾರ ಕೈಗೊಂಡ ಕ್ರಮಗಳು ಫಲ ನೀಡಿದ್ದವು.
ಅಕ್ಕಿ (Rice) ಬೆಲೆಯಲ್ಲಿ ಏರಿಕೆಯಾದ ಬೆನ್ನಲ್ಲೇ ಕೇಂದ್ರ ಸರ್ಕಾರ (Central Government) ಸೆಪ್ಟೆಂಬರ್ ನಲ್ಲಿ ಬಾಸ್ಮತಿಯೇತರ ಅಕ್ಕಿ ರಫ್ತಿನ ಮೇಲೆ ಶೇ.20ರಷ್ಟು ಸುಂಕ ವಿಧಿಸಿತ್ತು. ಅಲ್ಲದೆ, ನುಚ್ಚಕ್ಕಿಯ ರಫ್ತನ್ನು ನಿಷೇಧಿಸಿತ್ತು. ಬಾಂಗ್ಲಾದೇಶ (Bangladesha) ಅಕ್ಕಿ ಮೇಲಿನ ಆಮದು ಸುಂಕ ಕಡಿತಗೊಳಿಸಿದ ಬೆನ್ನಲ್ಲೇ ಭಾರತದಲ್ಲಿ ಅಕ್ಕಿ ಬೆಲೆಯಲ್ಲಿ ಶೇ.5ರಷ್ಟು ಏರಿಕೆಯಾಗಿತ್ತು. ಒಂದೆಡೆ ವಿದೇಶಗಳಿಗೆ ಅಕ್ಕಿ ರಫ್ತು (Export) ಹೆಚ್ಚುವ ಭಯವಾದ್ರೆ. ಇನ್ನೊಂದೆಡೆ ಮಳೆ ಅಭಾವದಿಂದ ಈ ಭಾರೀ ಅಕ್ಕಿ ಉತ್ಪಾದನೆ ತಗ್ಗಿದೆ. ಇದು ದೇಶದಲ್ಲಿ ಅಕ್ಕಿ ಲಭ್ಯತೆಯನ್ನು ತಗ್ಗಿಸುವ ಜೊತೆಗೆ ಬೆಲೆಯೇರಿಕೆಗೆ ಕಾರಣವಾಗಬಹುದು ಎಂಬ ಭಯದಿಂದ ಕೇಂದ್ರ ಸರ್ಕಾರ ಅಕ್ಕಿ ರಫ್ತಿನ ಮೇಲೆ ಶೇ.20ರಷ್ಟು ಸುಂಕ ವಿಧಿಸಿತ್ತು.
Bengaluru Tech Summit: ಬೆಂಗಳೂರಿಗೆ 5 ವರ್ಷದಲ್ಲಿ ಆರ್ಥಿಕ ರಾಜಧಾನಿ ಪಟ್ಟ: ಸಿಎಂ ಬೊಮ್ಮಾಯಿ
ಇನ್ನು ಗೋಧಿ (Wheat) ಬೆಳೆ ಇಳುವರಿಯಲ್ಲಿ ಹಠಾತ್ ಕುಸಿತವಾಗಿದ್ದರಿಂದ ಭಾರತವು ಮೇ ತಿಂಗಳಿನಲ್ಲಿ ಗೋಧಿ ರಫ್ತು(Export) ಮಾಡುವುದಕ್ಕೆ ನಿಷೇಧ ವಿಧಿಸಿತ್ತು. ಕಳೆದ ಬಾರಿಯ ಗೋಧಿ ಕೊಯ್ಲಿನಲ್ಲಿ ಇಳುವರಿ ಬಹಳ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ಗೋಧಿ ದಾಸ್ತಾನು ಕೂಡ ಕಡಿಮೆ ಇತ್ತು. ಸರ್ಕಾರ ಗೋಧಿ ರಫ್ತಿನ ಮೇಲೆ ನಿಷೇಧ ವಿಧಿಸಿದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಮಾತ್ರ ಗೋಧಿ ಬೆಲೆ ಏರಿಕೆಯಾಗುತ್ತಿದೆ.