Asianet Suvarna News Asianet Suvarna News

ಮುಂದಿನ 3 ವರ್ಷ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ಮುಂದುವರಿಕೆ!

* ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಶಕ್ತಿಕಾಂತ ದಾಸ್ ಮುಂದುವರಿಕೆ

* ಮುಂದಿನ ಮೂರು ವರ್ಷ ಗಳಿಗೆ ಮುಂದುವರಿಕೆ

* ದಾಸ್ ನೇಮಕಕ್ಕೆ ಕ್ಯಾಬಿನೆಟ್ ಕಮಿಟಿ(ನೇಮಕಾತಿ) ಒಪ್ಪಿಗೆ

Government Reappoints Shaktikanta Das As RBI Governor For Three Years pod
Author
Bangalore, First Published Oct 29, 2021, 11:52 AM IST

ನವದೆಹಲಿ(ಅ.29): ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India)) ಗವರ್ನರ್ ಶಕ್ತಿಕಾಂತ ದಾಸ್ ಅವರ ಅವಧಿಯನ್ನು ಸರ್ಕಾರ ಶುಕ್ರವಾರ ಮತ್ತೆ ಮೂರು ವರ್ಷಗಳವರೆಗೆ ವಿಸ್ತರಿಸಿದೆ. ಡಿಸೆಂಬರ್ 10 ರ ಬಳಿಕದ ಮೂರು ವರ್ಷಗಳ ಅವಧಿಗೆ ಅದೇ ಸ್ಥಾನಕ್ಕೆ ಮರು ನೇಮಕ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ  ಗೃಹ ಸಚಿವ ಅಮಿತ್ ಶಾ(Amit Shah)ರನ್ನೊಳಗೊಂಡ ಕೇಂದ್ರ ಸಂಪುಟದ ನೇಮಕಾತಿ ಸಮಿತಿ ಗುರುವಾರ ತಡರಾತ್ರಿ ಮರು ನೇಮಕಾತಿ ನಿರ್ಧಾರಕ್ಕೆ ಅನುಮೋದನೆ ನೀಡಿದೆ.

ಈ ಬಗ್ಗೆ ಹೊರಡಿಸಲಾದ ಅಧಿಕೃತ ಹೇಳಿಕೆಯಲ್ಲಿ 'ಕ್ಯಾಬಿನೆಟ್ ನೇಮಕಾತಿ ಸಮಿತಿಯು ಡಿಸೆಂಬರ್ 10, 2021 ರ ನಂತರ ಮೂರು ವರ್ಷಗಳ ಅವಧಿಗೆ ಆರ್‌ಬಿಐ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ (Shaktikanta Das) ಅವರನ್ನು ಮರುನೇಮಕ ಮಾಡಲು ಅಥವಾ ಮುಂದಿನ ಆದೇಶದವರೆಗೆ, ಯಾವುದು ಮೊದಲೋ ಅದನ್ನು ಅನುಮೋದಿಸಿದೆ ಎಂದು ತಿಳಿಸಲಾಗಿದೆ. 

ಶಕ್ತಿಕಾಂತ್ ದಾಸ್ ಅವರು ಈ ಹಿಂದೆ ಹಣಕಾಸು ಸಚಿವಾಲಯದಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಬಳಿಕ ಡಿಸೆಂಬರ್ 11, 2018 ರಂದು ಮೂರು ವರ್ಷಗಳ ಕಾಲ ರಿಸರ್ವ್ ಬ್ಯಾಂಕ್ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು.  ಹಣಕಾಸು, ತೆರಿಗೆ​​, ಉದ್ಯಮ, ಮೂಲಸೌಕರ್ಯಗಳಿಗೆ ಸಂಬಂಧಪಟ್ಟ ಕ್ಷೇತ್ರದಲ್ಲಿ ಬಹುಮುಖ್ಯ ಹುದ್ದೆಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ. ವಿಶ್ವ ಬ್ಯಾಂಕ್​, ಏಷ್ಯನ್​ ಡೆವಲಪ್​ಮೆಂಟ್​ ಬ್ಯಾಂಕ್​ (ADB), ನ್ಯೂ ಡೆವಲಪ್​ಮೆಂಟ್​ ಬ್ಯಾಂಕ್ (NDB), ಏಷ್ಯನ್​ ಇನ್​ಫ್ರಾಸ್ಟ್ರಕ್ಚರ್​​ ಇನ್ವೆಸ್ಟ್​ಮೆಂಟ್ ಬ್ಯಾಂಕ್​ (AHB)ಗಳಲ್ಲಿ ಭಾರತದ ಪರ್ಯಾಯ ಗವರ್ನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಹಣಕಾಸು ಸಚಿವಾಲಯದಲ್ಲಿ ಸುದೀರ್ಘ ಅವಧಿಗೆ ಕಾರ್ಯನಿರ್ವಹಿಸಿರುವ ದಾಸ್​ ಒಟ್ಟು 8 ಕೇಂದ್ರ ಬಜೆಟ್​​ಗಳ ತಯಾರಿಕೆಯಲ್ಲಿ ನೇರವಾಗಿ ಕಾರ್ಯನಿರ್ವಹಿಸಿದ್ದಾರೆ.

ಆರ್ಥಿಕ ವಿಭಾಗದಲ್ಲಿ ಅಪಾಯ ಅನುಭವ ಹೊಂದಿರುವ ಶಕ್ತಿಕಾಂತ್ ದಾಸ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದು, ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ.

ತಮಿಳುನಾಡು ಕೇಡರ್​​​ನ 1980ನೇ ಬ್ಯಾಚ್​​ ಐಎಎಸ್​ ನಿವೃತ್ತ ಅಧಿಕಾರಿಯಾಗಿರುವ ಶಕ್ತಿಕಾಂತ್​​ ದಾಸ್, ದಿಂಡಿಗಲ್​ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.  2016 ರಿಂದ 2017ರ ವರೆಗೆ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಬಳಿಕ 15ನೇ ಹಣಕಾಸು ಆಯೋಗದ ಸದಸ್ಯರಾಗಿ ನೇಮಕಗೊಂಡರು. 

ಪ್ರಸ್ತುತ ಬಿಜೆಪಿ ಆಡಳಿತಾವಧಿಯಲ್ಲಿ ವಿಸ್ತರಣೆ ಪಡೆದ ಮೊದಲ ಆರ್ ಬಿಐ  ಗವರ್ನರ್  ಎನಿಸಿಕೊಂಡಿದ್ದಾರೆ. ಈ ಹಿಂದಿನ ಗವರ್ನರ್‌ಗಳು ಕೆಲವರು ರಾಜೀನಾಮೆ ನೀಡಿದ್ದರೆ, ಇನ್ನು ಕೆಲವರು ಶಿಕ್ಷಣತಜ್ಞರಾಗಿ ಹಿಂತಿರುಗಲು ನಿರ್ಧರಿಸಿದ್ದರು. 

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ: ಗ್ರಾಹಕರಿಗೆ RBI ಗುಡ್‌ನ್ಯೂಸ್!

ಇಮ್ಮಿಡಿಯೆಟ್‌ ಪೇಮೆಂಟ್‌ ಸವೀರ್‍ಸ್‌ (Immediate Payment Service) ಅಡಿ ಒಂದು ಸಲಕ್ಕೆ ವರ್ಗಾವಣೆ ಮಾಡಬಹುದಾದ ಹಣದ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್‌(Reserve Bank Of India) 2 ಲಕ್ಷ ರು.ದಿಂದ 5 ಲಕ್ಷ ರು.ಗೆ ಏರಿಕೆ ಮಾಡಿದೆ. ಇಂಟರ್ನೆಟ್‌ ಬ್ಯಾಂಕಿಂಗ್‌(Internet Banking), ಮೊಬೈಲ್‌ ಬ್ಯಾಂಕಿಂಗ್‌ ಆ್ಯಪ್‌ಗಳು(Mobile Banking Apps), ಬ್ಯಾಂಕ್‌ ಶಾಖೆಗಳು, ಎಟಿಎಂ, ಎಸ್‌ಎಂಎಸ್‌ ಮತ್ತು ಐವಿಆರ್‌ಎಸ್‌ ಮೂಲಕ ಗ್ರಾಹಕರು ತಮ್ಮ ಖಾತೆಯಿಂದ ಬೇರೊಂದು ಖಾತೆಗೆ ತಕ್ಷಣ ಹಣ ವರ್ಗಾವಣೆ ಮಾಡಲು ಈ ಸೇವೆ ಪಡೆಯಬಹುದು.

ನ್ಯಾಷನಲ್‌ ಪೇಮೆಂಟ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (National Payments Corporation of India) ಮೂಲಕ ಸರ್ಕಾರ ಒದಗಿಸುತ್ತಿರುವ ಈ ಸೇವೆಗೆ ಇಷ್ಟು ದಿನ ಒಂದು ವ್ಯವಹಾರಕ್ಕೆ 2 ಲಕ್ಷ ರು.ನ ಮಿತಿಯಿತ್ತು. ಅದನ್ನು ಆರ್‌ಬಿಐ(Reserve Bank Of India) ಶುಕ್ರವಾರ 5 ಲಕ್ಷ ರು.ಗೆ ಏರಿಸಿದೆ. ಹೀಗಾಗಿ ದೊಡ್ಡ ಮೊತ್ತದ ಹಣ ವರ್ಗಾವಣೆ ಕೂಡ ಇನ್ನುಮುಂದೆ ಸುಲಭ ಹಾಗೂ ತ್ವರಿತವಾಗಲಿದೆ.

ಬಡ್ಡಿ ದರ ಬದಲಿಲ್ಲ

ಆರ್‌ಬಿಐ ಶುಕ್ರವಾರ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಿದ್ದು, ಸತತ 8ನೇ ಬಾರಿಯೂ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ಠೇವಣಿಗಳು ಹಾಗೂ ವಿವಿಧ ಸಾಲಗಳಿಗೆ ಈ ಹಿಂದಿನ ಬಡ್ಡಿ ದರಗಳೇ ಮುಂದುವರೆಯಲಿವೆ. ರೆಪೋ ದರ (ಬ್ಯಾಂಕುಗಳಿಗೆ ಆರ್‌ಬಿಐ ನೀಡುವ ಸಾಲದ ಮೇಲಿನ ಬಡ್ಡಿ ದರ) ಶೇ.4ಕ್ಕೆ ಹಾಗೂ ರಿವರ್ಸ್‌ ರೆಪೋ ದರ (ಬ್ಯಾಂಕುಗಳಿಂದ ಆರ್‌ಬಿಐ ಪಡೆಯುವ ಸಾಲಕ್ಕೆ ನೀಡುವ ಬಡ್ಡಿ ದರ) ಶೇ.3.35ಕ್ಕೆ ಸ್ಥಿರಗೊಳಿಸಲಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಪ್ರಕಟಿಸಲಾಗಿದ್ದ ಆರ್ಥಿಕ ಉತ್ತೇಜನಾ ಕ್ರಮಗಳನ್ನು ನಿಧಾನವಾಗಿ ಹಿಂಪಡೆಯುವ ಸುಳಿವನ್ನು ಹಣಕಾಸು ನೀತಿಯಲ್ಲಿ ನೀಡಲಾಗಿದೆ.

Follow Us:
Download App:
  • android
  • ios