ವಿನಾಯ್ತಿ ಬೇಡ, ಶಾಂತಿ ಪ್ರಶಸ್ತಿಗೆ ತೆರಿಗೆ ಕಟ್ಟುವೆ ಎಂದ ಪ್ರಧಾನಿ ಮೋದಿ!
ವಿನಾಯ್ತಿ ಕೊಟ್ಟರೂ ಬೇಡ ಶಾಂತಿ ಪ್ರಶಸ್ತಿಗೆ ತೆರಿಗೆ ಕಟ್ಟುವೆ ಎಂದ ಮೋದಿ!| ಪ್ರಧಾನಿ ನರೇಂದ್ರ ಮೋದಿ ಅವರಿಗೆ 2018ನೇ ಸಾಲಿನ ಸಿಯೋಲ್ ಶಾಂತಿ ಪ್ರಶಸ್ತಿ ನೀಡಿದ್ದ ದಕ್ಷಿಣ ಕೊರಿಯಾ ಸರ್ಕಾರ
ನವದೆಹಲಿ[ಆ.18]: ಸಾಮಾನ್ಯರಂತೆ ತಾನೂ ಸರ್ಕಾರಕ್ಕೆ ತೆರಿಗೆ ಪಾವತಿ ಮಾಡುತ್ತೇನೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತೆ ಮಾದರಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಕ್ಷಿಣ ಕೊರಿಯಾ ಸರ್ಕಾರ 2018ನೇ ಸಾಲಿನ ಸಿಯೋಲ್ ಶಾಂತಿ ಪ್ರಶಸ್ತಿ ನೀಡಿತ್ತು.
ಪ್ರಶಸ್ತಿಯ ಭಾಗವಾಗಿ 1.30 ಕೋಟಿ ರು. ನಗದು ಕೂಡಾ ನೀಡಿತ್ತು. ಈ ಹಣವನ್ನು ನಮಾಮಿ ಗಂಗಾ ಯೋಜನೆಗೆ ನೀಡುವುದಾಗಿ ಮೋದಿ ಘೋಷಿಸಿದ್ದರು. ಈ ನಡುವೆ ಕೇಂದ್ರ ಹಣಕಾಸು ಸಚಿವಾಲಯವು, ಮೋದಿಗೆ ಸಂದಿದ್ದ ಪ್ರಶಸ್ತಿಗೆ ವಿನಾಯ್ತಿ ನೀಡಿತ್ತು. ಈ ವಿಷಯವನ್ನು ತಡವಾಗಿ ಅರಿತ ಮೋದಿ, ವಿನಾಯ್ತಿ ರದ್ದುಪಡಿಸುವಂತೆ ಕೋರಿದ್ದಾರೆ.
ಅಲ್ಲದೆ ಪ್ರಶಸ್ತಿ ಹಣಕ್ಕೆ ತಾವು ತೆರಿಗೆ ಪಾವತಿಸುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಕೇಂದ್ರ ಹಣಕಾಸು ಸಚಿವಾಲಯವು ತಾನು ನೀಡಿದ್ದ ವಿನಾಯ್ತಿ ಹಿಂದಕ್ಕೆ ಪಡೆಯಲು ನಿರ್ಧರಿಸಿದೆ.