ಕಲ್ಲಿದ್ದಲು ಕೊರತೆ: ಕೇಂದ್ರಕ್ಕೆ ರಾಜ್ಯಗಳ ಮೊರೆ!
* ಕಲ್ಲಿದ್ದಲು ಕೊರತೆ, ವಿದ್ಯುತ್ ಕಡಿತದ ಭೀತಿ
* ಕಲ್ಲಿದ್ದಲು ಒದಗಿಸುವಂತೆ ಕೇಂದ್ರಕ್ಕೆ ರಾಜ್ಯಗಳ ಮೊರೆ
* ಹಲವು ರಾಜ್ಯಗಳಲ್ಲಿ ಲೋಡ್ಶೆಡ್ಡಿಂಗ್ ಅನಿವಾರ್ಯ
ನವದೆಹಲಿ(ಅ.12): ದೇಶದಲ್ಲಿ ಕಲ್ಲಿದ್ದಲು(Coal) ಕೊರತೆ ಎದುರಾಗುತ್ತಿದ್ದಂತೆ ರಾಜ್ಯಗಳಲ್ಲಿ ವಿದ್ಯುತ್(Electrivcity) ಕಡಿತದ ಭೀತಿ ಆವರಿಸಿಕೊಳ್ಳತ್ತಿದೆ. ಕೇಂದ್ರ ಸರ್ಕಾರದ ಭರವಸೆಯ ಹೊರತಾಗಿಯೂ ಹಲವು ರಾಜ್ಯಗಳು ಕಳವಳ ವ್ಯಕ್ತಪಡಿಸಿವೆ. ಹೀಗಾಗಿ ತಕ್ಷಣಕ್ಕೆ ಪೂರೈಕೆ ಹೆಚ್ಚದೇ ಹೋದಲ್ಲಿ, ಹಲವು ರಾಜ್ಯಗಳಲ್ಲಿ ಲೋಡ್ಶೆಡ್ಡಿಂಗ್(Load Shedding) ಅನಿವಾರ್ಯವಾಗಲಿದೆ ಎಂದು ಹೇಳಿವೆ.
ಕಲ್ಲಿದ್ದಲು ಕೊರತೆಯಿಂದ(Coal Crisis) ರಾಜ್ಯದಲ್ಲಿ 3-4 ಗಂಟೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂದು ಪಂಜಾಬ್(Punjab) ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ. ಉತ್ತರ ಪ್ರದೇಶಕ್ಕೆ(Uttar Pradesh) ಅಗತ್ಯವಿರುವ ಕಲ್ಲಿದ್ದಲು ಪೂರೈಕೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಉತ್ತರ ಪ್ರದೇಶ ಪವರ್ ಕಾರ್ಪೋರೇಶನ್ ಚೇರ್ಮನ್ಗೆ ಯೋಗಿ ಆದಿತ್ಯನಾಥ್(Yogi Adityanath) ಸೂಚನೆ ನೀಡಿದ್ದಾರೆ. ಹಾಗೆಯೇ ಸಾಯಂಕಾಲ 6 ರಿಂದ ಬೆಳಿಗ್ಗೆ 7ರವೆರೆಗೆ ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಲು ತಿಳಿಸಿದ್ದಾರೆ. ಹೆಚ್ಚಿನ ವಿದ್ಯುತ್ ಖರೀದಿಗೆ ಕಳೆದ 5 ದಿನಗಳಿಂದ ಬಿಹಾರ 90 ಕೋಟಿ ರು. ವೆಚ್ಚ ಮಾಡಿರುವುದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ಹೇಳಿದ್ದಾರೆ.
ಛತ್ತೀಸ್ಗಢ ತನ್ನ ರಾಜ್ಯದ ವಿದ್ಯುತ್ ಕೊರತೆ ನೀಗಿಸಲು ಪ್ರತಿದಿನ 29,500 ಮೆಟ್ರಿಕ್ ಟನ್ ಕಲ್ಲಿದ್ದಲಿನ ಅವಶ್ಯಕತೆ ಇದೆ ಆದರೆ ಅಷ್ಟುಪ್ರಮಾಣದ ಪೂರೈಕೆ ಇಲ್ಲ ಹಾಗಾಗಿ ವಿದ್ಯುತ್ ಕಡಿತ ಮಾಡಬೇಕಾದ ಭೀತಿ ಎದುರಾಗಿದೆ ಎಂದು ಹೇಳಿದೆ. ರಾಜಸ್ಥಾನದಲ್ಲಿ ಕಲ್ಲಿದ್ದಲು ಕೊರತೆಯಿಂದಾಗಿ ಪ್ರತಿದಿನ ಒಂದು ಗಂಟೆ ವಿದ್ಯತ್ ಕಡಿತ ಮಾಡುತ್ತಿರುವುದಾಗಿ ಸರ್ಕಾರ ಹೇಳಿದೆ. ಇದರ ಜೊತೆಗೆ ಆಂಧ್ರಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್, ದೆಹಲಿ, ಗುಜರಾತ್ ಹಾಗೂ ಹರ್ಯಾಣ ರಾಜ್ಯಗಳ ಮುಖ್ಯಮಂತ್ರಿಗಳೂ ಸಹ ಕಲ್ಲಿದ್ದಲು ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಇನ್ನು ಕಲ್ಲಿದ್ದಲು ಪೂರೈಕೆ ಹೆಚ್ಚಳವಾಗದಿದ್ದರೆ ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂದು ಕೇರಳ ಸರ್ಕಾರ ಹೇಳಿದೆ.
ಎಲ್ಲೆಲ್ಲಿ ಏನೇನು ಕಥೆ?
ಪಂಜಾಬ್: 5 ಘಟಕ ಬಂದ್. ನಿತ್ಯ 3-4 ತಾಸು ಪವರ್ ಕಟ್
ದೆಹಲಿ: ಎನ್ಟಿಪಿಸಿಯಿಂದ ವಿದ್ಯುತ್ ಪೂರೈಕೆ ಬಂದ್
ರಾಜಸ್ಥಾನ: ಆರಂಭದಲ್ಲಿ ನಿತ್ಯ 1 ಗಂಟೆ ಪವರ್ ಕಟ್
ತಮಿಳುನಾಡು: ಅನಿಯಮಿತ ಲೋಡ್ ಶೆಡ್ಡಿಂಗ್ ಆರಂಭ
ಆಂಧ್ರಪ್ರದೇಶ: ಅನಿಯಮಿತ ಲೋಡ್ ಶೆಡ್ಡಿಂಗ್ ಆರಂಭ
ಬಿಹಾರ: ಅನಿಯಮಿತ ಲೋಡ್ ಶೆಡ್ಡಿಂಗ್ ಆರಂಭ
ಜಾರ್ಖಂಡ್: ಅನಿಯಮಿತ ಲೋಡ್ ಶೆಡ್ಡಿಂಗ್ ಆರಂಭ
ಕೇರಳ: ಶೀಘ್ರ ಲೋಡ್ ಶೆಡ್ಡಿಂಗ್ ಜಾರಿಗೆ ಚಿಂತನೆ