ಐಸಿಐಸಿಐ ಬ್ಯಾಂಕ್ ಹೊಸ ಚೇರ್ಮನ್ ಮುಂದಿರುವ ಸವಾಲುಗಳೇನು?
ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವ ಐಸಿಐಸಿಐ ಬ್ಯಾಂಕ್ ಗೆ ಹೊಸ ಚೇರ್ಮನ್ ನೇಮಕವಾಗಿದೆ. ಹಾಗಾದರೆ ಈಗ ಎದುರಿಸುತ್ತಿರುವ ಸವಾಲುಗಳೇನು? ಅದನ್ನು ಅವರು ನಿಭಾಯಿಸಬಲ್ಲರೇ?
ಮುಂಬೈ [ಜೂ.29] ಅವ್ಯವಹಾರದ ದೂರುಗಳಿಂದ ಕಂಗೆಟ್ಟಿರುವ ಐಸಿಐಸಿಐ ಬ್ಯಾಂಕ್ ಗೆ ನೂತನ ಸಾರಥಿ ನೇಮಕವಾಗಿದ್ದು ಈ ಎಲ್ಲ ಸಮಸ್ಯೆಗಳಿಂದ ಬ್ಯಾಂಕ್ ನ್ನು ಹೊರತರುತ್ತಾರೆಯೇ? ಎಂಬ ಪ್ರಶ್ನೆಯೂ ಎದುರಾಗಿದೆ.
ಐಸಿಐಸಿಐ ಬ್ಯಾಂಕ್ನ ಛೇರ್ಮನ್ ಆಗಿ ಗಿರೀಶ್ ಚತುರ್ವೇದಿ ಅವರನ್ನು ನೇಮಕ ಮಾಡಲಾಗಿದೆ. ಜೂನ್ 30ರಂದು ಹಾಲಿ ಚೇರ್ಮನ್ ಎಂ.ಕೆ.ಶರ್ಮಾ ಅವರ ಅಧಿಕಾರಾವಧಿ ಅಂತ್ಯವಾಗಲಿದ್ದು ಜುಲೈ 1 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಬ್ಯಾಂಕಿನ ಸಿಇಒ ಚಂದಾ ಕೋಚ್ಚರ್ ವಿರುದ್ಧ ಹಣಕಾಸು ಅವ್ಯವಹಾರದ ಆರೋಪ ಕೇಳಿ ಬಂದಿದೆ. ಐಸಿಐಸಿಐ ಬ್ಯಾಂಕ್ ಗೆ ಸಂಬಂಧಿಸಿದ 31 ಖಾತೆಗಳಿಂದ 6 ಸಾವಿರ ಕೋಟಿಗೂ ಅಧಿಕ ರೂಪಾಯಿ ಅವ್ಯವಹಾರವಾಗಿದೆ ಎಂಬ ಪತ್ರ ಸಹ ಬ್ಯಾಂಕ್ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು.
ಐಸಿಐಸಿಐ ಬ್ಯಾಂಕ್ನಲ್ಲಿ 6 ಸಾವಿರ ಕೋಟಿ ಅವ್ಯವಹಾರ!
ಉತ್ತರ ಪ್ರದೇಶ ಮೂಲದ ಗಿರೀಶ್ ಚತುರ್ವೇದಿ ಅವರು ಭೌತಶಾಸ್ತ್ರದಲ್ಲಿ ಎಂಎಸ್ಸಿ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಸೋಷಿಯಲ್ ಪಾಲಿಸಿ ಪದವಿ, ಆಕ್ಸ್ಫರ್ಡ್ ವಿವಿಯಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಐಡಿಬಿಐ, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕುಗಳ ಆಡಳಿತ ಮಂಡಳಿ,ಪೆಟ್ರೋಲಿಯಂ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವ ಜತೆಗಿದ್ದು ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.