ನೌಕರರಿಗಿಂದು ಕೇಂದ್ರ ಶಾಕ್‌? ಪಿಎಫ್‌ ಬಡ್ಡಿ ಕಡಿತ ಸಾಧ್ಯತೆ| ಬೆಲೆ ಏರಿಕೆ ಬೆನ್ನಲ್ಲೇ ಮತ್ತೊಂದು ಕಹಿ ಸುದ್ದಿ

ನವದೆಹಲಿ(ಮಾ.04): ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ, ಖಾದ್ಯ ತೈಲದಂತಹ ಅವಶ್ಯ ವಸ್ತುಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿರುವ ಬೆನ್ನಲ್ಲೇ, 6 ಕೋಟಿ ನೌಕರ ವರ್ಗಕ್ಕೆ ಕೇಂದ್ರ ಸರ್ಕಾರ ಇನ್ನೊಂದು ಶಾಕ್‌ ನೀಡುವ ಸಾಧ್ಯತೆ ಇದೆ. ನೌಕರರ ಭವಿಷ್ಯ ನಿಧಿ (ಇಪಿಎಫ್‌) ಬಡ್ಡಿ ದರ ಪರಿಷ್ಕರಣೆ ಕುರಿತು ಗುರುವಾರ ಭವಿಷ್ಯ ನಿಧಿ ಮಂಡಳಿಯ ಸಭೆ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ನಡೆಯಲಿದ್ದು, ಬಡ್ಡಿ ದರವನ್ನು ಕಡಿತಗೊಳಿಸುವ ಸಾಧ್ಯತೆ ಇದೆ.

Add Asianetnews Kannada as a Preferred SourcegooglePreferred

ಹಾಲಿ ನೌಕರರಿಗೆ ಶೇ.8.5ರಷ್ಟುಬಡ್ಡಿ ದರ ಸಿಗುತ್ತಿದೆ. ಇದು ಏಳು ವರ್ಷಗಳಲ್ಲೇ ಕನಿಷ್ಠ ಪ್ರಮಾಣವಾಗಿದೆ. ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಳೆದ ವರ್ಷ ಭಾರಿ ಪ್ರಮಾಣದಲ್ಲಿ ನೌಕರರು ಇಪಿಎಫ್‌ ಹಣವನ್ನು ಹಿಂಪಡೆದಿದ್ದಾರೆ. ಇದೇ ವೇಳೆ, ಭವಿಷ್ಯ ನಿಧಿ ಮಂಡಳಿಗೆ ಹರಿದು ಬರುವ ಹಣದ ಪ್ರಮಾಣವೂ ಕಡಿಮೆಯಾಗಿದೆ. ಹೀಗಾಗಿ ಭವಿಷ್ಯ ನಿಧಿ ಮಂಡಳಿ ಇಪಿಎಫ್‌ ಬಡ್ಡಿ ದರವನ್ನೇ ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕೆವೈಸಿ ದೃಢೀಕರಣ ಸಮಸ್ಯೆಯಿಂದಾಗಿ ಹಲವು ನೌಕರರಿಗೆ ಈವರೆಗೆ ಕಳೆದ ಸಾಲಿನ ಬಡ್ಡಿಯೇ ಸಿಕ್ಕಿಲ್ಲ. ಈಗ ದರ ಕಡಿತಗೊಳಿಸಿದರೆ ನೌಕರರಿಗೆ ಇನ್ನಷ್ಟುಸಮಸ್ಯೆಯಾಗಲಿದೆ ಎಂದು ವರದಿಗಳು ತಿಳಿಸಿವೆ.