ವ್ಯಾಪಾರದಲ್ಲಿನ ಸೋಲು ಆತ್ಮಗೌರವದ ಸೋಲಲ್ಲ: ಮಹೀಂದ್ರ!
ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಹೆಗಡೆ ಆತ್ಮಹತ್ಯೆ| ಸಿದ್ಧಾರ್ಥ ಅಸಹಜ ಸಾವಿಗೆ ಕಂಬನಿ ಮಿಡಿದ ಉದ್ಯಮ ವಲಯ| ಸಿದ್ಧಾರ್ಥ ಸಾವನ್ನು ಆಘಾತಕಾರಿ ಅಂತ್ಯ ಎಂದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್| ಸಿದ್ಧಾರ್ಥ ಹೆಗಡೆ ನಿಧನಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿದ ಆನಂದ್ ಮಹೀಂದ್ರ| ಉದ್ಯಮದಲ್ಲಿನ ಸೋಲು ಆತ್ಮಗೌರವ ಸೋಲಲ್ಲ ಎಂದ ಆನಂದ್ ಮಹೀಂದ್ರ|
ಬೆಂಗಳೂರು(ಜು.31): ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಹೆಗಡೆ ಅಸಹಜ ಸಾವಿಗೆ ದೇಶದ ಪ್ರತಿಷ್ಠಿತ ಉದ್ಯಮಿಗಳು ಕಂಬನಿ ಮಿಡಿದಿದ್ದಾರೆ. ಇದೇ ವೇಳೆ ಉದ್ಯಮದ ಸೋಲು ಆತ್ಮಹತ್ಯೆಗೆ ಕಾರಣವಾಗಬಾರದು ಎಂಬ ಕಿವಿಮಾತು ಕೂಡ ಉದ್ಯಮ ವಲಯದಿಂದ ಕೇಳಿ ಬಂದಿದೆ.
ಸಿದ್ಧಾರ್ಥ ನಿಧನಕ್ಕೆ ಶೋಕ ವ್ಯಕ್ತಡಿಸಿರುವ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್, ಸಿದ್ಧಾರ್ಥ ಸಾವನ್ನು ಆಘಾತಕಾರಿ ಅಂತ್ಯ ಎಂದು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಅದರಂತೆ ಸಿದ್ಧಾರ್ಥ ನಿಧನಕ್ಕೆ ಕಂಬನಿ ಮಿಡಿದಿರುವ ಮಹೀಂದ್ರ ಆ್ಯಂಡ್ ಮಹೀಂದ್ರ ಮಾಲೀಕ ಆನಂದ್ ಮಹೀಂದ್ರ, ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಾಗಬಾರದು ಎಂದು ದು:ಖ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಆನಂದ್ ಮಹೀಂದ್ರ, ಉದ್ಯಮದಲ್ಲಿನ ಸೋಲು ಆತ್ಮಗೌರವ ಸೋಲಲ್ಲ ಎಂದು ಹೇಳಿದ್ದಾರೆ . ಸಿದ್ಧಾರ್ಥ ತಮಗೆ ವೈಯಕ್ತಿಕವಾಗಿ ಪರಿಚಯ ಇಲ್ಲ, ಅವರ ಹಣಕಾಸಿನ ಸಮಸ್ಯೆಗಳ ಕುರಿತೂ ತಮಗೆ ಅರಿವಿಲ್ಲ. ಆದರೆ ಉದ್ಯಮದಲ್ಲಿ ಎದುರಾಗುವ ಸೋಲನ್ನು ಆತ್ಮಗೌರವದ ಸೋಲು ಎಂದು ಯಾರೂ ಭಾವಿಸಬಾರದು ಎಂದು ಆನಂದ್ ಟ್ವೀಟ್ ಮಾಡಿದ್ದಾರೆ .