ಬೆಂಗಳೂರಿನಲ್ಲಿ ಕನ್ನಡಿಗರಿಗೆ ಮನೆ ಕೊಡಲ್ಲ ಎಂದ ಮನೆ ಮಾಲಕಿ: ಯುವಕನ ಆರೋಪ

Synopsis
ಬೆಂಗಳೂರಿನಲ್ಲಿ ಕನ್ನಡಿಗ ಎಂಬ ಕಾರಣಕ್ಕೆ ಮನೆ ಮಾಲೀಕರು ಮನೆ ನೀಡಲು ನಿರಾಕರಿಸಿದ್ದಾರೆ ಎಂದು ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಆರೋಪ ಮಾಡಿದ್ದಾರೆ.
ಬೆಂಗಳೂರು: ಕನ್ನಡಿಗ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಮನೆ ಮಾಲೀಕರು ನನಗೆ ಮನೆ ನೀಡಲು ನಿರಾಕರಿಸಿದರು ಎಂದು ಯುವಕನೋರ್ವ ಸಾಮಾಜಿಕ ಜಾಲತಾಣರೆಡಿಟ್ನಲ್ಲಿ ಪೋಸ್ಟ್ ಮಾಡಿ ಆರೋಪ ಮಾಡಿದ್ದು, ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅನೇಕರು ತಮಗೂ ಈ ರೀತಿಯ ಅನುಭವ ಆದ ಬಗ್ಗೆ ಈ ಪೋಸ್ಟ್ಗೆ ಕಾಮೆಂಟ್ ಮಾಡಿ ಅನುಭವ ಹಂಚಿಕೊಂಡಿದ್ದಾರೆ. ಮನೆ ಮಾಲಕಿಯಾಗಿದ್ದ ಮಹಿಳೆ ಕನ್ನಡಿಗರಿಗೆ ಮಾತ್ರ ಮನೆ ಕೊಡುವುದಿಲ್ಲ ಎಂದು ಮುಖಕ್ಕೆ ಹೊಡದಂತೆ ಹೇಳಿ ಫೋನ್ ಕರೆ ಕಟ್ ಮಾಡಿದಳು ಎಂದು ಅವರು ಹೇಳಿಕೊಂಡಿದ್ದಾರೆ.
ಬೆಂಗಳೂರು ಎಂಬ ರೆಡಿಟ್ ಖಾತೆ ಹೊಂದಿರುವ ವ್ಯಕ್ತಿ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ರೆಡ್ಡಿಟ್ನಲ್ಲಿ ವಿವರವಾದ ಪೋಸ್ಟ್ನಲ್ಲಿ, ಬಾಡಿಗೆ ಮನೆಗಾಗಿ ಬಗ್ಗೆ ವಿಚಾರಿಸಲು ಕರೆ ಮಾಡಿದಾಗ ಮಾಲೀಕರು ಮೊದಲಿಗೆ ತಮ್ಮ ಹೆಸರನ್ನು ಕೇಳಿದ್ದಾರೆ ಹಾಗೂ ಕರ್ನಾಟಕದ ಯಾರಿಗೂ ಮನೆ ಬಾಡಿಗೆ ಕೊಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಅವರು ಹೇಳಿದ್ದಾರೆ ಅವರ ಪೋಸ್ಟ್ನಲ್ಲಿ ಅವರು ವಿಸ್ತಾರವಾಗಿ ಒಬ್ಬ ಕನ್ನಡಿಗನಾಗಿ ಬೆಂಗಳೂರಿನಲ್ಲಿ ಮನೆ ಹುಡುಕುವ ವೇಳೆ ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ.
ಇಂದು ನಾನು ಮನೆಗಾಗಿ ಹುಡುಕಾಡುತ್ತಿದ್ದಾಗ ಒಂದು ಸರಿಯಾಗಿದೆ ಎನಿಸಿದ ವಿವರವನ್ನು ನೋಡಿದೆ. ಅದನ್ನು ಪೋಸ್ಟ್ ಮಾಡಿದ ಮಹಿಳೆಯ ಉಪನಾಮವೂ ಅವರು ಜಾರ್ಖಂಡ್ ಅಥವಾ ಪಶ್ಚಿಮ ಬಂಗಾಳದವರಾಗಿರಬಹುದು ಎಂದು ಸೂಚಿಸುತ್ತಿತ್ತು. ಅವರು ನೀಡಿದ ವಿವರದಲ್ಲಿದ್ದ ದೂರವಾಣಿಗೆ ಕರೆ ಮಾಡಿ ಮನೆ ಬಾಡಿಗೆಗೆ ಇರುವ ಬಗ್ಗೆ ಕೇಳಲು ನಾನು ಅವರಿಗೆ ಕರೆ ಮಾಡಿದೆ. ಕರೆ ಮಾಡಿದ ಕೂಡಲೇ ಅವರು ಮೊದಲಿಗೆ ನೀವು ಎಲ್ಲಿಯವರು ಎಂದು ಕೇಳಿದರು. ನಂತರ ತಮ್ಮ ಮನೆ ಬಾಡಿಗೆ ಎಷ್ಟಿದೆ ಎಂದು ನೋಡಿದ್ದೀರಾ ಎಂದು ಕೇಳಿದರು. ಅದಕ್ಕೆ ನಾನು, ತಾನು ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿದ್ದೇನೆ. ಕನ್ನಡಿಗ ಎಂದು ಹೇಳಿದೆ. ಈ ವೇಳೆ ಆಕೆ ಕೆಲ ನಿಮಿಷವೂ ಯೋಚನೆ ಮಾಡದೇ ನಾನು ಮನೆಯನ್ನು ಕನ್ನಡಿಗರಿಗೆ ನೀಡುತ್ತಿಲ್ಲ ಎಂದು ಹೇಳಿ ನನ್ನ ಪ್ರತಿಕ್ರಿಯೆಗೂ ಕಾಯದೇ ಆಕೆ ಕರೆ ಕಟ್ ಮಾಡಿದಳು ಎಂದು ಅವರು ಹೇಳಿದ್ದಾರೆ.
ಇದಾದ ನಂತರ ಆಕೆಯ ಮಾತು ಕೇಳಿ ನನಗೆ ತೀವ್ರವಾದ ಕೋಪ ಬಂದಿದ್ದು, ಆಕೆಗೆ ಕಾರಣ ಕೇಳಲು ಮತ್ತೆ ಕರೆ ಮಾಡಿದೆ. ಆದರೆ ಆಕೆ ಕರೆ ಸ್ವೀಕರಿಸಲಿಲ್ಲ, ಅಲ್ಲದೇ ನಂತರದಲ್ಲಿ ನನ್ನ ನಂಬರನ್ನೇ ಬ್ಲಾಕ್ ಮಾಡಿದಳು. ನಮ್ಮದೇ ಊರಿನಲ್ಲಿ ನಾವು ಹುಟ್ಟಿ ಬೆಳೆದ ಊರಿನಲ್ಲಿ ಏನಾಗುತ್ತಿದೆ. ಇದನ್ನು ನಂಬುವುದಕ್ಕೂ ನನಗೆ ಸಾಧ್ಯವಾಗಲಿಲ್ಲ,
ಬಹುಶಃ ಇದು ನನಗೆ ಈ ಅನುಭವ ಆಗದೇ ಹೋಗಿದ್ದರೆ ನಾನು ಇದನ್ನು ನಂಬುತ್ತಿರಲಿಲ್ಲ. ನನ್ನ ಹೆಸರು, ನನ್ನ ವಿವರಗಳು, ಹಿನ್ನೆಲೆ, ಏನನ್ನೂ ಕೇಳಲಿಲ್ಲ. ಕೇವಲ ನೀವು ಎಲ್ಲಿಂದ ಬಂದವರು ಎಂಬುದನ್ನು ಕೇಳಿ ಪೋನ್ ಕರೆ ಕಟ್ ಮಾಡಿದಳು ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.
ಈ ಬೆಂಗಳೂರಿಗನ ಪೋಸ್ಟ್ ಕೂಡಲೇ ವೈರಲ್ ಆಗಿದ್ದು, ಅನೇಕರು ತಮಗೂ ಈ ರೀತಿಯ ಅನುಭವ ಆಗಿದ್ದಾಗಿ ಹೇಳಿಕೊಂಡಿದ್ದಾರೆ. ಒಬ್ಬರು ತನಗೆ ಮೈಸೂರಿನಲ್ಲಿ ಹೀಗಾಗಿತ್ತು. ಬೆಂಗಳೂರಿನವರು ಎಂಬ ಕಾರಣಕ್ಕೆ ಅಲ್ಲಿ ಮಹಿಳೆಯೊಬ್ಬರು ಸ್ವತಃ ಕನ್ನಡಿಗರೇ ಆಗಿದ್ದರು ನನಗೆ ಮನೆ ಕೊಡಲಿಲ್ಲ ಎಂದು ತಮಗಾದ ಅನುಭವ ಹೇಳಿಕೊಂಡಿದ್ದಾರೆ.
ನನ್ನ ಚಿಕ್ಕಪ್ಪ ಕೆಲಸದ ನಿಮಿತ್ತ 6 ತಿಂಗಳು ಭುವನೇಶ್ವರದಲ್ಲಿ ಇರಬೇಕಾಗಿತ್ತು ಮತ್ತು ಅವರು ನಗರದ ಚೆನ್ನಾಗಿರುವ ಪ್ರದೇಶದಲ್ಲಿ ಉಳಿಯಲು ಬಯಸಿದ್ದರು. ಅವರು ಸಂಪೂರ್ಣವಾಗಿ ಒಡಿಯಾ ಭಾಷೆ ಮಾತನಾಡುವ ಸ್ಥಳೀಯರಾಗಿದ್ದರು. ಅವರಿಗೆ ಒಡಿಯಾ ಮತ್ತು ಇಂಗ್ಲಿಷ್ ಹೊರತುಪಡಿಸಿ ಬೇರೆ ಯಾವುದೇ ಭಾಷೆ ತಿಳಿದಿಲ್ಲ. ಸೊಸೈಟಿಯಲ್ಲಿ ವಾಸಿಸುತ್ತಿದ್ದ ಕೆಲವು ಬಿಹಾರಿ ಕುಟುಂಬವು ತಮ್ಮ ಮನೆಯನ್ನುಬಾಡಿಗೆಗೆ ನೀಡಿತ್ತು ಆ ಮನೆಯ ಬಗ್ಗೆ ಅವರನ್ನು ನಮ್ಮ ಚಿಕ್ಕಪ್ಪ ಕೇಳಿದಾಗ ಅವರು ಒಡಿಯಾ ಆದ ಕಾರಣಕ್ಕೆ ಮನೆ ನೀಡುವುದಿಲ್ಲ ಎಂದು ಹೇಳಿ ನಿರಾಕರಿಸಿದರು ಎಂದು ಮತ್ತೊಬ್ಬರು ಈ ರೀತಿಯ ಅನುಭವ ಹೇಳಿಕೊಂಡಿದ್ದಾರೆ. ಇದೇ ರೀತಿಯ ಹಲವು ಘಟನೆಗಳು ನಡೆದಿವೆ. ಮರಾಠಿ ಮಾತನಾಡುವ ಮಹಿಳೆಗೆ ಗುಜರಾತ್ ಜನರೇ ಸಾಕಾಷ್ಟಿರುವ ಮುಂಬೈನಲ್ಲಿ ಮನೆ ಸಿಗುವುದಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕಳೆದ ವರ್ಷ, ಇದೇ ರೀತಿಯ ಘಟನೆ ವೈರಲ್ ಆಗಿತ್ತು. ಆ ಬಾಡಿಗೆದಾರನಿಗೆ 12ನೇ ತರಗತಿಯಲ್ಲಿ ಮನೆ ಮಾಲೀಕರು ಬಯಸಿದಷ್ಟು ಅಂಕಗಳು ಬರಲಿಲ್ಲ ಎಂಬ ಕಾರಣಕ್ಕೆ ಮನೆ ಮಾಲೀಕರು ಮನೆ ಬಾಡಿಗೆಗೆ ನೀಡಲು ನಿರಾಕರಿಸಿದರು. ಅವರು 12ನೇ ತರಗತಿಯಲ್ಲಿ ಶೇ. 75 ಅಂಕಗಳನ್ನು ಪಡೆದರು ಆದರೆ ಮಾಲೀಕರು ಕನಿಷ್ಠ ಶೇ. 90 ಅಂಕಗಳನ್ನು ನಿರೀಕ್ಷಿಸಿದ್ದರು ಎಂದು ವರದಿಯಾಗಿತ್ತು.