ನಾಳೆಯಿಂದ ಲಾಲ್ಬಾಗ್ನಲ್ಲಿ 212ನೇ ಫಲ ಪುಷ್ಪ ಪ್ರದರ್ಶನ ಉದ್ಘಾಟನೆಯಾಗಲಿದೆ. ಡಾ.ರಾಜ್ ಮತ್ತು ಪುನೀತ್ ಕುರಿತ ಹತ್ತಾರು ಆಕರ್ಷಣೆಗಳು ಈ ಪ್ರದರ್ಶನದಲ್ಲಿರಲಿವೆ. ಮೈಸೂರಿನ ಶಕ್ತಿಧಾಮ, ಗಾಜನೂರು ಮನೆ ಹೂಗಳಲ್ಲರಳಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕ ರತ್ನ ದಿವಂಗತ ಡಾ.ರಾಜ್ಕುಮಾರ್ ಮತ್ತು ಡಾ.ಪುನೀತ್ ರಾಜ್ಕುಮಾರ್ ಅವರ ನೆನಪಿನಾರ್ಥ ತೋಟಗಾರಿಕೆ ಇಲಾಖೆ ಹಮ್ಮಿಕೊಳ್ಳುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ವಿವಿಧ ಜಾತಿಯ 10 ಲಕ್ಷಕ್ಕೂ ಹೆಚ್ಚು ಹೂವುಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಗಾಜಿನ ಮನೆಯ ಒಳಭಾಗದಲ್ಲಿ ಗುಲಾಬಿ, ಸೇವಂತಿಗೆ, ಜರ್ಬೆರ, ಲಿಲ್ಲಿ ಸೆರಿದಂತೆ 6.20 ಲಕ್ಷ ಮತ್ತು ಕುಂಡಗಳಲ್ಲಿ ಬೆಳೆದಿರುವ 3.50 ಲಕ್ಷ ಹೂವುಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಷ್ಟೇ ಅಲ್ಲದೆ, 27 ಜಾತಿಯ ವಿದೇಶಿ ಮತ್ತು ಶೀತವಲಯದ 13 ಜಾತಿಯ ಹೂವುಗಳು ಬಳಕೆಯಾಗಲಿವೆæ.
ಗಾಜಿನ ಮನೆಯಲ್ಲಿ ಮೈಸೂರಿನ ‘ಶಕ್ತಿಧಾಮ’ ಗಾಜನೂರಿನ ಮನೆಯನ್ನು ನಿರ್ಮಿಸಲಾಗಿದ್ದು, ಹೊರಭಾಗದಲ್ಲಿ ಡಾ.ರಾಜ್ ಮತ್ತು ಪುನೀತ್ ಅವರ ಪ್ರತಿಮೆಗಳು ಎಲ್ಲರನ್ನೂ ಸ್ವಾಗತಿಸಲಿವೆ. ಬಿದಿರಿನ ಚೌಕಟ್ಟಿನಲ್ಲಿ ಅರಳಿದ ಫೋಟೊಗಳು, ಡಾ. ರಾಜ್ ಮತ್ತು ಪುನೀತ್ ಬಗೆಗಿನ ಪೇಂಟಿಂಗ್ ಶಿಬಿರ, ಇವರ ಚಿತ್ರಗಳಿಗೆ ಜೀವ ತುಂಬಲು ನಾನಾ ಉಡುಗೆ-ತೊಡುಗೆ ತೊಟ್ಟು ಕಂಗೊಳಿಸಲಿರುವ ಮಕ್ಕಳು, ಮರಳಿನಲ್ಲಿ ಅರಳಿರುವ ಡಾ. ರಾಜ್ ಮತ್ತು ಪುನೀತ್ ಪ್ರತಿಮೆಗಳು. ಉದ್ಯಾನದ ಹೊರಾಂಗಣದಲ್ಲಿ ಎಲ್ಇಡಿ ಪರದೆಗಳ ಮೂಲಕ ರಾಜ್ ಮತ್ತು ಪುನೀತ್ ಅವರ ವಿರಾಟ್ ದರ್ಶನ ಪ್ರದರ್ಶನಗೊಳ್ಳಲಿದೆ.
ನಿತ್ಯ 12 ಗಂಟೆ ಪ್ರದರ್ಶನ:
ಗಾಜಿನ ಮನೆಯಲ್ಲಿ ಆಗಸ್ಟ್ 5 ರಿಂದ 15ರವರೆಗೆ ಪ್ರದರ್ಶನ ನಡೆಯಲಿದ್ದು, ಇದೇ ಮೊದಲ ಬಾರಿ ಬೆಳಗ್ಗೆ 7ರಿಂದ ಸಂಜೆ 7 ಗಂಟೆಯವರೆಗೂ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕಾ ಸಚಿವ ಮುನಿರತ್ನ ವಿವರಿಸಿದರು.
ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾಸಂಘದ ಸಹಯೋಗದೊಂದಿಗೆ ನಡೆಯುತ್ತಿರುವ 212ನೇ ಫಲಪುಷ್ಪ ಪ್ರದರ್ಶನ ಇದಾಗಿದೆ. ಆ.5ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗ್ಗೆ 11 ಗಂಟೆಗೆ ಗಾಜಿನ ಮನೆಯಲ್ಲಿ ಪ್ರದರ್ಶನಕ್ಕೆ ಚಾಲನೆ ನೀಡುವರು. ನಟರಾದ ಡಾ. ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್ ಉಪಸ್ಥಿತರಿರುವರು ಎಂದು ಅವರು ಹೇಳಿದರು.
ಆಗಸ್ಟ್ 5ರಿಂದ ಪುನೀತ್ ಜೀವನ ಕಥೆ ಹೇಳಲಿರುವ ಲಾಲ್ಬಾಗ್ ಫಲಪುಷ್ಪ ಪ್ರದರ್ಶನ
ಪ್ರದರ್ಶನದ ಅಂಗವಾಗಿ 350 ಮಂದಿ ಪೊಲೀಸ್ ಸಿಬ್ಬಂದಿ ಜೊತೆಗೆ ಗೃಹರಕ್ಷಕ ದಳ ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು 500 ಮಂದಿಯ ಭದ್ರತೆ ವ್ಯವಸ್ಥೆ ಮಾಡಲಾಗಿದೆ. 125 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. 105 ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು. ಸುಮಾರು 2.50 ಕೋಟಿ ಖರ್ಚು ಮಾಡಿ ಜನಾಕರ್ಷಣೀಯವಾಗಿ ಪ್ರದರ್ಶನ ನಡೆಸಲಾಗುತ್ತಿದೆ. ಸುಮಾರು 12-15 ಲಕ್ಷ ಮಂದಿ ವೀಕ್ಷಕರು ಬರುವ ಸಾಧ್ಯತೆಯಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. 1 ರಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳು ಶಾಲೆಯ ವತಿಯಿಂದ ಹೋದರೆ ಉಚಿತ ಪ್ರವೇಶವಿದೆ.
ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯ, ಇಲಾಖೆ ನಿರ್ದೇಶಕ ಕೆ. ನಾಗೇಂದ್ರ ಪ್ರಸಾದ್, ಮೈಸೂರು ಉದ್ಯಾನ ಕಲಾಸಂಘದ ಉಪಾಧ್ಯಕ್ಷ ಬಿ.ಆರ್. ವಾಸುದೇವ್, ರಾಜ್ಯ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್, ಉಪ ನಿರ್ದೇಶಕಿ ಜಿ. ಕುಸುಮಾ ಮತ್ತಿತರರು ಉಪಸ್ಥಿತರಿದ್ದರು.
ರಕ್ತದಾನ ಶಿಬಿರ
ರಾಜ್ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳಿಂದ ರಕ್ತದಾನ, ನೇತ್ರದಾನ ಮತ್ತು ಕಣ್ಣಿನ ತಪಾಸಣೆ ಶಿಬಿರ ನಡೆಯಲಿದೆ. ಈ ವೇಳೆ ರಕ್ತದಾನ, ಮತ್ತು ನೇತ್ರದಾನಕ್ಕೆ ನೋಂದಣಿ ಮಾಡುವುದಕ್ಕೆ ಅವಕಾಶವಿರಲಿದೆ.
ಪಾರ್ಕಿಂಗ್ ವ್ಯವಸ್ಥೆ
ಕಾರುಗಳು:
- ಶಾಂತಿನಗರ ಬಸ್ ನಿಲ್ದಾಣದಲ್ಲಿರುವ ಬಹುಮಹಡಿ ವಾಹನ ನಿಲ್ದಾಣ
- ಜೆ.ಸಿ. ರಸ್ತೆಯ ಬಿಬಿಎಂಪಿ ಪಾಲಿಕೆಯ ಬಹುಮಹಡಿ ವಾಹನ ನಿಲ್ದಾಣ
ದ್ವಿಚಕ್ರ ವಾಹನ:
- ಆಲ್ ಅಮೀನ್ ಕಾಲೇಜಿನ ಮೈದಾನ
- ವಿಲ್ಸನ್ ಗಾರ್ಡನ್ನಲ್ಲಿರುವ ಹೊಂಬೇಗೌಡ ಕ್ರೀಡಾಂಗಣ
ಲಾಲ್ಬಾಗ್ನಲ್ಲಿ ಮಾವು-ಹಲಸಿನ ಮೇಳ: ಈ ಹಣ್ಣುಗಳನ್ನ ನೋಡಿದ್ರೆ ಬಾಯಲ್ಲಿ ನೀರು ಬರೋದು ಕನ್ಫರ್ಮ್!
