ಸಿಜೆ ರಾಯ್ ಸಾವಿಗೂ ಮುನ್ನ ನಡೆದಿತ್ತು ಮಹತ್ವದ ಘಟನೆ, ಸಿಜೆ ರಾಯ್ ಸಾವಿಗೆ ಐಟಿ ದಾಳಿ, ಕಿರುಕುಳವೇ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಸಿಜೆ ರಾಯ್ ಮಹತ್ವದ ಯೂ ಟರ್ನ್ ಇದೀಗ ಅನುಮಾನ ಹೆಚ್ಚಿಸಿದೆ. 

ಬೆಂಗಳೂರು (ಫೆ.02) ಉದ್ಯಮಿ ಸಿಜೆ ರಾಯ್ ಸಾವು ಕುರಿತು ಎಸ್ಐಟಿ ತಂಡ ತನಿಖೆ ತೀವ್ರಗೊಳಿಸಿದೆ. ಐಟಿ ದಾಳಿ ನಡೆಸಿದ ಅಧಿಕಾರಿಗಳು ಸೇರಿದಂತೆ ಹಲವರ ಹೇಳಿಕೆ ಪಡೆದುಕೊಳ್ಳುತ್ತಿದ್ದಾರೆ. ಇತ್ತ ಹಲವರ ವಿಚಾರಣೆಗಳು ನಡೆಯುತ್ತಿದೆ. ದಾಖಲೆಗಳ ಸಂಗ್ರಹ, ಸಾವಿನ ಹಿಂದಿನ ಕಾರಣ ಸೇರಿದಂತೆ ಹಲವು ವಿಚಾರಗಳನ್ನು ಪೊಲೀಸರು ಕೆದಕುತ್ತಿದ್ದಾರೆ. ಇದೇ ವೇಳೆ ಸಾವಿಗೂ ಮುನ್ನ ನಡೆದ ಮಹತ್ವದ ಘಟನೆಯೊಂದು ಬಯಲಾಗಿದೆ. ಸಿಜೆ ರಾಯ್ ತಮ್ಮ ಕಚೇರಿಯಲ್ಲಿ ಎದೆಗೆ ಗುಂಡು ಹಾರಿಸಿಕೊಂಡು ದುರಂತ ಸಾವು ಕಾಣುವ ದಿನವೂ ಐಟಿ ಅಧಿಕಾರಿಗಳ ದಾಳಿ ಮುಂದುವರಿದಿತ್ತು. ಇದೇ ಐಟಿ ಅಧಿಕಾರಿಗಳ ವಿರುದ್ದ ಉದ್ಯಮಿ ಸಿಜೆ ರಾಯ್ ಯೂ ಟರ್ನ್ ಹೊಡೆದಿದ್ದರು.

ಜನವರಿ 20, 2026ರಂದು ಸಿಜೆ ರಾಯ್ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಎದೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದರು. ರಾಯ್ ಸಾವಿಗೆ ಪ್ರಮುಖವಾಗಿ ಕೇಳಿಬರುತ್ತಿರುವ ಆರೋಪ ಆದಾಯ ತೆರಿಗೆ ವಿಭಾಗ, ಅಧಿಕಾರಿಗಳ ಕಿರುಕುಳ. ಇದೇ ವಿಚಾರದಲ್ಲಿ ಕೆಲ ಮಹತ್ವದ ಮಾಹಿತಿಗಳು ಬಯಲಾಗಿದೆ. ಪ್ರಮುಖವಾಗಿ ಡಿಸೆಂಬರ್ 16, 2025ರಿಂದ ರಾಯ್ ಕಚೇರಿಗಳ ಮೇಲೆ ಐಟಿ ದಾಳಿ ನಡೆಯುತ್ತಿತ್ತು. ಇದರ ನಡುವೆ ನಡೆದ ಕೆಲ ಘಟನೆಗಳೇ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಬೆಂಗಳೂರು ಕಚೇರಿ ಮೇಲಿನ ದಾಳಿ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ರಾಯ್

ಬೆಂಗಳೂರಿನ ಕಾನ್ಫಿಡೆಂಟ್ ಗ್ರೂಪ್ ಕಚೇರಿಗಳ ಮೇಲಿನ ದಾಳಿ ವಿರುದ್ಧ ಸಿಜೆ ರಾಯ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಐಟಿ ದಾಳಿಗೆ ತಕ್ಷಣಕ್ಕೆ ತಡೆ ನೀಡಲು ಕೋರಿ ಪಿಟೀಶನ್ ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ಹಲವು ವಿಚಾರಗಳ ಕುರಿತು ಸಿಜೆ ರಾಯ್ ಉಲ್ಲೇಖಿಸಿದ್ದರು. ಪ್ರಮುಖವಾಗಿ ತಮ್ಮ ಉದ್ಯಮ, ಪ್ರಧಾನ ಕಚೇರಿ, ವ್ಯವಹಾರಗಳು ಬೆಂಗಳೂರಿನಲ್ಲಿದೆ. ಆದರೆ ಇಲ್ಲಿನ ಸ್ಥಳೀಯ ಅಧಿಕಾರಿಗಳ ಬಳಸಿಕೊಳ್ಳದೆ, ಕೇರಳದ ಕೊಚ್ಚಿಯ ಅಧಿಕಾರಿಗಳನ್ನು ಬಳಲಿ ದಾಳಿ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದರು. ಕೇರಳದ ಅದಿಕಾರಿಗಳಿಗೆ ಬೆಂಗಳೂರಿನಲ್ಲಿ ದಾಳಿ ನಡೆಸಲು ಅಧಿಕಾರವಿಲ್ಲ. ಸಿಂಗಲ್ ಒಮ್ನಿ ಬಸ್ ವಾರೆಂಟ್ (ದಾಳಿಗೆ ಅನುಮತಿ ನೀಡುವ ಕೋರ್ಟ್ ಆದೇಶ) ಪ್ರತಿ ಹಿಡಿದು ಹಲವು ಕಡೆ ದಾಳಿ ಮಾಡಲಾಗಿದೆ. ಇದು ನಿಯಮ ಉಲ್ಲಂಘನೆಯಾಗಿದೆ. ಸ್ಥಳೀಯರಲ್ಲದ ಸಾಕ್ಷಿಗಳನ್ನು ಬಳಸಿ ದಾಳಿ ಮಾಡಲಾಗಿದೆ. ಬಳಿಕ ಕಚೇರಿಗಳನ್ನು ಸುದೀರ್ಘ ಕಾಲಕ್ಕೆ ಸೀಲ್ ಮಾಡಲಾಗಿದೆ. ಈ ಮೂಲಕ ಹಲವು ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಕರ್ನಾಟಕ ಹೈಕೋರ್ಟ್ ಈ ದಾಳಿಗೆ ತಡೆ ನೀಡಬೇಕು ಎಂದು ಸಿಜೆ ರಾಯ್ ಮನವಿ ಮಾಡಿದ್ರು.

ಈ ಪಿಟೀಶನ್ ಪ್ರಾಥಮಿಕ ವಿಚಾರಣೆಗೆ ಬಂದಾಗ ತೆರಿಗೆ ಅಧಿಕಾರಿಗಳು ಉತ್ತರಿಸಲು ಕೆಲ ಸಮಯ ಕೇಳಿದ್ದರು. ಡಿಸೆಂಬರ್ 18 ರಂದು ಉತ್ತರಿಸುವುದಾಗಿ ಹೇಳಿತ್ತು. ಇದೇ ವೇಳೆ ಕೋರ್ಟ್ ಡಿಸೆಂಬರ್ 18ರಂದು ಉತ್ತರ ಕೇಳುತ್ತೇವೆ. ಹೀಗಾಗಿ ಐಟಿ ದಾಳಿಗೆ ಮಧ್ಯಂತರ ತಡೆ ನೀಡಲು ಸಾಧ್ಯವಿಲ್ಲ ಎಂದಿತ್ತು. ಆದರೆ ಡಿಸೆಂಬರ್ 18 ರಂದು ಸಿಜೆ ರಾಯ್ ಈ ಅರ್ಜಿಯನ್ನು ಹೆಚ್ಚಿನ ಕಾರಣ ನೀಡಿದ ಹಿಂಪಡೆದಿದ್ದರು. ಕಾರಣ ನೀಡಿದ ಈ ಅರ್ಜಿ ವಾಪಸ್ ಪಡೆದಿದ್ದೇಕೆ ಎಂಬ ಚರ್ಚೆ ಹಾಗೂ ಪ್ರಶ್ನೆ ಇದೀಗ ಶುರುವಾಗಿದೆ.