ಬೆಂಗಳೂರಿನ ಮಾದನಾಯಕನಹಳ್ಳಿ ಬಳಿ, ತನ್ನ ಪತ್ನಿಯನ್ನು ನೋಡಿ ಬೊಗಳಿದ ಕಾರಣಕ್ಕೆ ವ್ಯಕ್ತಿಯೊಬ್ಬ ಪಕ್ಕದ ಮನೆಯ ಸಾಕು ನಾಯಿಗೆ ದೊಣ್ಣೆಯಿಂದ ಹೊಡೆದು ಕ್ರೌರ್ಯ ಮೆರೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ನಾಯಿ ಚಿಕಿತ್ಸೆಯ ನಂತರ ಪ್ರಾಣಾಪಾಯದಿಂದ ಪಾರಾಗಿದೆ.

ಬೆಂಗಳೂರು (ಏ.13): ಪಕ್ಕದ ಮನೆಯ ಸಾಕು ನಾಯಿ ತನ್ನ ಪತ್ನಿಯನ್ನು ನೋಡಿ ಬೊಗಳಿದ್ದಕ್ಕೆ ಆಕ್ರೋಶಗೊಂಡ ಪತಿ ನಾಯಿಗೆ ದೊಣ್ಣೆಯಿಂದ ಹೊಡೆದು ಸಾಯಿಸಲು ಯತ್ನಿಸಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅವರೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಶ್ವಾನದ ಮಾಲೀಕ ಆಂಜನಪ್ಪ ಎಂಬುವರು ನೀಡಿದ ದೂರಿನನ್ವಯ ಗೋಪಿ ಎಂಬಾತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Add Asianetnews Kannada as a Preferred SourcegooglePreferred

ಆಂಜನಪ್ಪ ಅವರು ಸಾಕಿದ ನಾಯಿ ಏ.9 ರ ರಾತ್ರಿ ಪಕ್ಕದ ಮನೆಯ ಮಹಿಳೆಯನ್ನು ನೋಡಿ ಬೊಗಳಿದೆ ಎನ್ನಲಾಗಿದೆ. ಇದರಿಂದ ಕೋಪಗೊಂಡಿದ್ದ ಪತಿ ಗೋಪಿ, ಆಂಜಿನಪ್ಪ ಅವರ ಮನೆಗೆ ತೆರಳಿ ಗೇಟಿನಲ್ಲಿ ಕಟ್ಟಿದ್ದ ನಾಯಿಗೆ ದೊಣ್ಣೆಯಿಂದ ಮನಬಂದಂತೆ ಹೊಡೆದು ಕ್ರೌರ್ಯ ಮೆರೆದಿದ್ದಾನೆ. ಗೋಪಿಯ ಹೊಡೆತಕ್ಕೆ ನಾಯಿಯ ಬಾಯಿ ಮತ್ತು ಮೂಗಿನಲ್ಲಿ ರಕ್ತ ಬಂದು ಪ್ರಜ್ಞೆ ತಪ್ಪಿ ಬಿದ್ದಿದ್ದು, ಕೂಡಲೇ ಮಾಲೀಕರು ಪೆಟ್ ಕ್ಲಿನಿಕ್‌ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ನಾಯಿ ಪ್ರಾಣಾಪಾಯದಿಂದ ಪಾರಾಗಿದೆ. ನಾಯಿಗೆ ಹೊಡೆದಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನನ್ವಯ ತನಿಖೆ ಕೈಗೊಳ್ಳಲಾಗಿದೆ.