Asianet Suvarna News Asianet Suvarna News

ಪ್ರಸಿದ್ಧ ಗಿರಿಧಾಮ ನಂದಿ ಬೆಟ್ಟಕ್ಕೆ KSRTC ಬಸ್

ಬೆಂಗಳೂರು ಬಳಿ ಇರುವ ಪ್ರಸಿದ್ಧ ಗಿರಿಧಾಮ ನಂದಿಬೆಟ್ಟಕ್ಕೆ KSRTC ಬಸ್ ಸೇವೆ ಒದಗಿಸಲಾಗುತ್ತಿದೆ. ಈ ಬಗ್ಗೆ ತೋಟಗಾರಿಕಾ ಇಲಾಖೆ ನಿರ್ಧರಿಸಿದೆ. 

KSRTC Bus Service To Nandibetta
Author
Bengaluru, First Published Nov 11, 2019, 8:20 AM IST

ಬೆಂಗಳೂರು [ನ.11]: ರಾಜಧಾನಿ ಬೆಂಗಳೂರು ನಗರಕ್ಕೆ ಹತ್ತಿರದ ಗಿರಿಧಾಮಗಳಲ್ಲಿ ಒಂದಾದ ನಂದಿ ಬೆಟ್ಟಕ್ಕೆ ಇನ್ನು ಮುಂದೆ ಎಲ್ಲ ಖಾಸಗಿ ವಾಹನಗಳ ಪ್ರವೇಶ ಸ್ಥಗಿತಗೊಳಿಸಿ, ಕೆಎಸ್ ಆರ್‌ಟಿಸಿ ಬಸ್‌ಗಳ ಮೂಲಕ ಸಾರ್ವಜನಿಕರನ್ನು ಬೆಟ್ಟಕ್ಕೆ ಕರೆತರುವ ವ್ಯವಸ್ಥೆ ಜಾರಿ ಮಾಡಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.

ನಂದಿ ಬೆಟ್ಟಕ್ಕೆ ಪ್ರತಿ ದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದು, ದ್ವಿಚಕ್ರ ವಾಹನಗಳು ಸೇರಿದಂತೆ ನೂರಾರು ವಾಹನಗಳು ಬರುತ್ತಿವೆ. ಬೆಟ್ಟದ ಮೇಲೆ ಸೂಕ್ತ ಪಾರ್ಕಿಂಗ್ ಇಲ್ಲದ ಪರಿಣಾಮ ರಸ್ತೆ ಬದಿಗಳಲ್ಲಿ ವಾಹನ ನಿಲುಗಡೆ ಮಾಡಲಾಗುತ್ತಿದೆ. ಅಲ್ಲದೆ, ಈ ವಾಹನಗಳಿಂದ ಬೆಟ್ಟದ ಮೇಲಿನ ವಾತಾವರಣ ಮಾಲಿನ್ಯವಾಗುತ್ತಿದೆ. ಇದನ್ನು ತಡೆಯಲು ಖಾಸಗಿವಾಹನಗಳ ಪ್ರವೇಶಕ್ಕೆ ಸಂಪೂರ್ಣ ಕಡಿವಾಣ ಹಾಕಲು ತೋಟಗಾರಿಕೆ ಇಲಾಖೆ ಉದ್ದೇಶಿಸಿದೆ.

ಬೆಟ್ಟದ ತಪ್ಪಲಿನಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಬೇಕು ಎಂಬುದು ಹಲವು ದಿನಗಳ ಯೋಜನೆ ಯಾಗಿತ್ತು. ಆದರೆ, ಸರ್ಕಾರಿ ಜಮೀನು ಇದ್ದರೂ, ಕೆಲವು ತಾಂತ್ರಿಕ ಕಾರಣಗಳಿಂದ ಅದನ್ನು ಬಳಕೆಗೆ ಸಾಧ್ಯವಾಗಿರಲಿಲ್ಲ. ಇದೀಗ ಸುಮಾರು 3.5 ಎಕರೆ ಜಮೀನನ್ನು ವಾಹನ ನಿಲ್ದಾಣಕ್ಕಾಗಿ ಗುರುತಿಸಲಾಗಿದೆ. 

ಮುಂದಿನ ಕೆಲ ದಿನಗಳಲ್ಲಿ ತೋಟಗಾರಿಕೆ ಇಲಾಖೆಗೆ ಹಸ್ತಾಂತರವಾಗಲಿದೆ. ಈ ಜಾಗದಲ್ಲಿ ಖಾಸಗಿ ವಾಹನ ಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಮೀನು ಹಸ್ತಾಂತರವಾದ ತಕ್ಷಣ ತಂತಿಬೇಲಿ ವ್ಯವಸ್ಥೆ ಅಳವಡಿಸಲಾಗುವುದು, ಬಳಿಕ ದ್ವಿಚಕ್ರ ವಾಹನಗಳು ಸೇರಿದಂತೆ ಎಲ್ಲ ಖಾಸಗಿ ವಾಹನಗಳನ್ನು ಬೆಟ್ಟದ ತಪ್ಪಲಿನಲ್ಲಿಯೇ ನಿಲ್ಲಿಸಲಾಗುವುದು. ಅಲ್ಲಿಂದ ಸಾರ್ವಜನಿಕರನ್ನು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬೆಟ್ಟಕ್ಕೆ ತೆರಳಲು ವ್ಯವಸ್ಥೆ ಮಾಡಲಾಗುವುದು ಎಂದರು. 

ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಬೆಟ್ಟದ ತಪ್ಪಲಿನಿಂದ ತುದಿಗೆ ಕರೆತರಲು 8 ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗುವುದು. ಈ ಬಸ್‌ಗಳು ಬೆಳಗ್ಗೆ 6 ರಿಂದ ಸಂಜೆ 7 ರವರೆಗೆ ಕಾರ್ಯನಿರ್ವಹಿಸಲಿವೆ. ಸೂಕ್ತ ದರ ನಿಗದಿ ಮಾಡಲಾಗುವುದು ಎಂದರು.

Follow Us:
Download App:
  • android
  • ios