ಸೂಲಿಬೆಲೆ ಹೋಬಳಿ ಚೀಮಸಂದ್ರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನ ಬಿಜೆಪಿ ಬೆಂಬಲಿತರ ಪಾಲಾಗಿದೆ.

ಸೂಲಿಬೆಲೆ [ಅ.20]:  ಸೂಲಿಬೆಲೆ ಹೋಬಳಿ ಚೀಮಸಂದ್ರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನ ಬಿಜೆಪಿ ಬೆಂಬಲಿತರ ಪಾಲಾಗಿದೆ. ಸಂಘದ ಆಡಳಿತ ಚುಕ್ಕಾಣಿ ಬಿಜೆಪಿ ಬೆಂಬ​ಲಿ​ಗ​ರಿಗೆ ದಕ್ಕಿದೆ. ಒಟ್ಟು 13 ಸ್ಥಾನಗಳ ಪೈಕಿ 7 ಬಿಜೆಪಿ ಬೆಂಬ​ಲಿ​ಗರು ಪಡೆದುಕೊಂಡರೇ ಇನ್ನೂಳಿದ 6 ಸ್ಥಾನಗಳು ಕಾಂಗ್ರೆಸ್‌ ಬೆಂಬ​ಲಿ​ಗರು ಪಡೆದುಕೊಂಡರು.

ಸಂಘದ ಅಧ್ಯಕ್ಷರಾಗಿ ಸಿ.ಡಿ.ವೆಂಕಟೇಶಪ್ಪ, ಉಪಾಧ್ಯಕ್ಷರಾಗಿ ಚಂದ್ರಪ್ಪ ಆಯ್ಕೆಯಾಗಿದ್ದಾರೆ. ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಶರತ್‌ ಬಚ್ಚೇಗೌಡ ಬೆಂಡಿಗಾನಹಳ್ಳಿಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿದ ಅವರು, ಚೀಮಸಂದ್ರ ಗ್ರಾಮದಲ್ಲಿರುವ ಸಹಕಾರ ಸಂಘದ ಆಡಳಿತ ಬಿಜೆಪಿಗೆ ದಕ್ಕಿದ್ದು, ವಿಶ್ವಾಸವಿಟ್ಟು ಬೆಂಬಲಿಸಿದವರ ನಿರೀಕ್ಷೆಗೆ ತಕ್ಕಂತೆ ಆಡಳಿತ ಮಾಡಿ ಹೆಸರುಗಳಿಸಬೇಕು. ಉತ್ಪಾದಕರ ಹಿತ ಮತ್ತು ಅಭಿವೃದ್ಧಿಗೆ ತಕ್ಕಂತೆ ಕಾರ್ಯಕ್ರಮ ರೂಪಿಸಿ ಡೇರಿಯ ಅಭಿವೃದ್ಧಿಯನ್ನು ಹೆಚ್ಚಿಸಬೇಕು. ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಉತ್ಪಾದಕರಿಗೂ, ​ಡೇರಿಗೂ ಲಾಭ ಸಿಗುವಂತೆ ನೋಡಿಕೊಳ್ಳಬೇಕು. ​ಹೈನುಗಾರರ ಹಿತ ರಕ್ಷಣೆಯೇ ನಿಮ್ಮ ಮೊದಲ ಆಧ್ಯತೆಯಾಗಿರಲಿ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸೂಲಿಬೆಲೆ ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಬಿ.ವಿ.ಸತೀಶ್‌ಗೌಡ ಮಾತನಾಡಿ, ಸಹಕಾರ ಸಂಘಗಳಲ್ಲಿ ಉತ್ಪಾದಕರ ಶ್ರೆಯೋಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು. ಆಯುಷ್ಮಾನ್‌ ಭಾರತ್‌ನಂಥ ಅನೇಕ ಯೋಜನೆಗಳನ್ನು ರೈತರಿಗೆ, ಉತ್ಪಾದಕರಿಗೆ ದೊರಕಿಸಲು ಪ್ರಯತ್ನ ಮಾಡಬೇಕು ಎಂದು ಹೇಳಿ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಬಿಜೆಪಿ ಬೆಂಬಲಿತರನ್ನು ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಬಿಜೆಪಿ ಬೆಂಬಲಿತ ಸಹಕಾರ ಸಂಘದ ನಿರ್ದೇಶಕರಾದ ನಾರಾಯಣಪ್ಪ, ಮುನೇಗೌಡ, ರಾಮಮೂರ್ತಿ, ಗಾಯಿತ್ರಿ, ಭಾರ್ಗವಿ, ಮುಖಂಡರಾದ ಸಿ.ಕೆ.ವೆಂಕಟೇಶ್‌, ನಾರಾಯಣಸ್ವಾಮಿ, ಕೃಷ್ಣಪ್ಪ, ಸಂಜಯ್‌ ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.