ಆಪರೇಷನ್ 'ಬಂಡೆ' ಸಕ್ಸಸ್: ಗೋಕಾಕ್ ಮಂದಿ ಫುಲ್ ಖುಷ್..!
ಬೆಳಗಾವಿ ಜಿಲ್ಲೆಯ ಗೋಕಾಕ್ ಮಂದಿಗೆ ಒಂದ್ಕಡೆ ಪ್ರವಾಹ ಭೀತಿ ಎದುರಾಗಿದ್ರೆ, ಮತ್ತೊಂದೆಡೆ ಬೆಟ್ಟದಿಂದ ಬೃಹತ್ ಬಂಡೆಗಲ್ಲು ಉರುಳಿ ಬೀಳು ಆತಂಕ ಶುರುವಾಗಿತ್ತು. ಆದ್ರೆ ಇದೀಗ ಆಪರೇಷನ್ ಬಂಡೆ ಸಕ್ಸಸ್ ಆಗಿದ್ದು, ಸ್ಥಳೀಯರು ನಿಟ್ಟುಸಿರುಬಿಟ್ಟಿದ್ದಾರೆ. ಹಾಗಾದ್ರೆ ಆಪರೇಷನ್ ಬಂಡೆ ಹೇಗೆ ನಡೆಯಿತು ಎನ್ನುವುದನ್ನು ಈ ಕೆಳಗಿನಂತಿದೆ ಓದಿ.
ಬೆಳಗಾವಿ, [ಅ.24]: ಜಿಲ್ಲೆಯ ಗೋಕಾಕ್ ನಲ್ಲಿ ನಡೆದಿದ್ದ ಆಪರೇಷನ್ 'ಬಂಡೆಗಲ್ಲು' ಯಶಸ್ವಿಯಾಗಿದ್ದು, ಸ್ಥಳೀಯ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಗೋಕಾಕ್ ನಲ್ಲಿ ಭಾರೀ ಮಳೆ ಸುರಿಯುತ್ತಿವುದರಿಂದ ಇಲ್ಲಿನ ಮಲ್ಲಿಕಾರ್ಜುನ ಗುಡ್ಡದಲ್ಲಿನ ಬಂಡೆಗಳೂ ಉರುಳುವ ಭೀತಿ ಶುರುವಾಗಿತ್ತು. ಹೀಗಾಗಿ ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ನೂರು ಮಾಲೀಕರಿಗೆ ಮನೆ ಖಾಲಿ ಮಾಡುವಂತೆ ಗೋಕಾಕ್ ತಹಶೀಲ್ದಾರ್ ಸೂಚಿಸಿದ್ದರು.
ಆದ್ರೆ, ಇದೀಗ ನೂರಾರು ಮನೆಗಳಿಗೆ ಆತಂಕ ಸೃಷ್ಟಿಸಿದ್ದ ಬೃಹತ್ ಆಕಾರದ ಬಂಡೆಗಲ್ಲನ್ನು ಏನಾದರೂ ಮಾಡಿ ಬೀಳದಂತೆ ಮಾಡಬೇಕೆಂದು ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆದಿತ್ತು. ಅಂತಿಮವಾಗಿ ಮೂರು ಬಾರಿ ಬ್ಲಾಸ್ಟ್ ಮಾಡಿ ಬೃಹತ್ ಬಂಡೆಗಲ್ಲನ್ನು ತುಂಡರಿಸಲಾಗಿದೆ.
ಗೋಕಾಕ್ನಲ್ಲಿ ಮನೆಗಳಿಗೆ ಆತಂಕ ತಂದಿದ್ದ ಬಂಡೆ ತೆರವು
ಬಳಿಕ ಚೂರಾದ ಬಂಡೆಗಳನ್ನ ಬಂಡೆಗಲ್ಲು ಇದ್ದ ಸ್ಥಳದ ಮುಂಭಾಗದಲ್ಲಿ ಗುಂಡಿತೋಡಿ ಮುಚ್ಚಲಾಗಿದೆ. ಎನ್ಡಿಆರ್ಎಪ್ ಸಿಬ್ಬಂದಿಗಳು, ತಹಶೀಲ್ದಾರ್ ಮತ್ತು ಸತೀಶ್ ಜಾರಕಿಹೊಳಿ ಪೌಂಡೇಷನ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಒಟ್ಟು 40 ಜನ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ನಿನ್ನೆ [ಬುಧವಾರ] 110 ಟನ್ ತೂಕದ ಬಂಡೆಗಲ್ಲು ನಾಲ್ಕು ಬಾರಿ ಬ್ಲಾಸ್ಟ್ ಮಾಡಿ ಕರಗಿಸಲಾಗಿತ್ತು. ಇಂದು [ಗುರುವಾರ] 210 ಟನ್ ತೂಕದ ಬೃಹತ್ ಬಂಡೆಗಲ್ಲನ್ನು 3 ಬಾರಿ ಬ್ಲಾಸ್ಟ್ ಮಾಡಿ ಕರಗಿಸಲಾಗಿದೆ.
ಬೆಟ್ಟದ ಮೇಲಿನ ಎರಡು ಬೃಹತ್ ಬಂಡೆಗಲ್ಲು ಮಣ್ಣು ಕುಸಿತದಿಂದ ಉರುಳಿ ಕೆಳ ಜಾರಿದ್ದವು. ಬಂಡೆಗಲ್ಲು ಗೋಕಾಕ್ ನಗರದ ಮೋವಿನ್ ಗಲ್ಲಿ, ಮರಾಠಾ ಗಲ್ಲಿ, ಸಿದ್ದೇಶ್ವರ ಕಾಲೋನಿಯ ಮೇಲೆ ಅಪ್ಪಳಿಸುವ ಸಾಧ್ಯತೆ ಹಿನ್ನಲೆ ಮೂರು ದಿನಗಳಿಂದ ನಡೆಯುತ್ತಿದ್ದ ಆಪರೇಷನ್ ಬಂಡೆ ಇಂದು ಯಶಸ್ವಿಯಾಗಿದೆ. ಆಪರೇಷನ್ ಬಂಡೆ ಸಕ್ಸಸ್ ಹಿನ್ನಲೆಯಲ್ಲಿ ಸ್ಥಳೀಯ ನಿವಾಸಿಗಳಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.