Asianet Suvarna News Asianet Suvarna News

ಕನ್ನಡ ಕಟ್ಟಿದವರು: ಗಡಿಭಾಗದಲ್ಲಿ ಕನ್ನಡದ ಕಂಪು ಹರಡಿದ ಸಿದ್ಧಸಂಸ್ಥಾನ ಮಠ!

ಅಲ್ಲಮಪ್ರಭು ಸ್ವಾಮೀಜಿ ಶ್ರೀಮಠಕ್ಕೆ ಬಂದಾಗಿನಿಂದ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದಾರೆ. ಮಠ, ಮಂದಿರಗಳ ಜಾತ್ರಾ ಮಹೋತ್ಸವಗಳಲ್ಲಿ ರಥೋತ್ಸವ ನಡೆಯುತ್ತ ಬಂದಿರುವುದು ಸಾಮಾನ್ಯ.

 

about alla chinchani allama prabhu mutt chikodi taluk
Author
Bangalore, First Published Nov 14, 2019, 10:20 AM IST

ಶ್ರೀಶೈಲ ಮಠದ

ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು ಎಂಬ ಕವಿವಾಣಿಯಂತೆಯೇ ಮಠಾಧೀಶರೊಬ್ಬರು ಕನ್ನಡ ಮಠ, ಕನ್ನಡ ಜಾಗೃತಿ ಪುಸ್ತಕ ಮಾಲೆ, ಕನ್ನಡದ ತೇರು ಹೀಗೆ ಕನ್ನಡ ಭಾಷೆಯನ್ನು ಕರ್ನಾಟಕ- ಮಹಾರಾಷ್ಟ್ರದ ಗಡಿಭಾಗದ ಮರಾಠಿ ಬಹುಭಾಷಿಕ ಹಳ್ಳಿಗಳಲ್ಲಿ ಕನ್ನಡವನ್ನು ಕಟ್ಟಿಬೆಳೆಸುವ ಕಾಯಕದಲ್ಲಿ ತೊಡಗಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿಯ ಅಲ್ಲಮಪ್ರಭು ಸಿದ್ಧಸಂಸ್ಥಾನ ಮಠದ ಪೀಠಾಧಿಪತಿ ಅಲ್ಲಮಪ್ರಭು ಸ್ವಾಮೀಜಿ ಗಡಿಭಾಗದಲ್ಲಿ ಕನ್ನಡ ಕಟ್ಟಿ ಬೆಳೆಸುವ ಕಾಯಕದಲ್ಲಿ ತೊಡಗಿದ್ದಾರೆ. ಈ ಮೂಲಕ ಈ ಮಠ ಕನ್ನಡ ಮಠ, ಶ್ರೀಗಳು ಕನ್ನಡ ಸ್ವಾಮೀಜಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಗಡಿಭಾಗದಲ್ಲಿ ಕನ್ನಡ ಬೆಳವಣಿಗೆಯಲ್ಲಿ ಮಠಗಳ ಪಾತ್ರ ಅನನ್ಯವಾಗಿದೆ. ಆದರೆ, ಚಿಂಚಣಿ ಅಲ್ಲಮಪ್ರಭುಗಳ ಮಠ ಮಾತ್ರ ಇದಕ್ಕೆ ವಿಭಿನ್ನವಾಗಿ ತನ್ನನ್ನು ಕನ್ನಡ ನಾಡು, ನುಡಿ ಬಗ್ಗೆ ಜನರಲ್ಲಿ ನಿತ್ಯ ಜಾಗೃತಿ ಮೂಡಿಸುತ್ತ ಬಂದಿದೆ.

ಕನ್ನಡ ಕಟ್ಟಿದವರು: ಐಸೆಲ್ ಟೆಕ್ನಾಲಜಿಸ್‌ನಿಂದ ಕನ್ನಡ ಮಕ್ಕಳಿಗೆ ಪಾಠ!

ಗದಗ- ಡಂಬಳದ ಜಗದ್ಗುರು ಡಾ.ತೋಂಟದ ಸಿದ್ದಲಿಂಗ ಸ್ವಾಮೀಜಿ ಅವರಿಂದ ಅಲ್ಲಮಪ್ರಭು ಸ್ವಾಮೀಜಿ ಕನ್ನಡದ ದೀಕ್ಷೆ ಪಡೆದುಕೊಂಡಿದ್ದು, ಬರೋಬ್ಬರಿ 12 ವರ್ಷಗಳಿಂದ ಕನ್ನಡದ
ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿಧವಿಧವಾಗಿ ಕನ್ನಡದ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ. ಮಕ್ಕಳು ಬೆಳೆದಂತೆ ಕನ್ನಡವು ಬೆಳೆಯಬೇಕು ಎಂಬ ಉದ್ದೇಶದಿಂದ ಮಕ್ಕಳಿಗಾಗಿ ಕನ್ನಡ ಸಾಹಿತಿಗಳ ಹೆಸರು ಬರೆಯುವ ಸ್ಪರ್ಧೆ, ಭಾವಗೀತೆ, ಪ್ರಬಂಧ, ಭಾಷಣ ಸ್ಪರ್ಧೆ, ಕನ್ನಡ ಪುಸ್ತಕಗಳ ಪ್ರಕಟಣೆ, ಮಠದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ, ಸಿರಿಗನ್ನಡ ತೇರು ಎಳುವಂತಹ ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತ ಬಂದಿವೆ.

ಸಿರಿಕನ್ನಡ ತೇರು

ಅಲ್ಲಮಪ್ರಭು ಸ್ವಾಮೀಜಿ ಶ್ರೀಮಠಕ್ಕೆ ಬಂದಾಗಿನಿಂದ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದಾರೆ. ಮಠ, ಮಂದಿರಗಳ ಜಾತ್ರಾ ಮಹೋತ್ಸವಗಳಲ್ಲಿ ರಥೋತ್ಸವ ನಡೆಯುತ್ತ ಬಂದಿರುವುದು ಸಾಮಾನ್ಯ. ಆದರೆ, ಕನ್ನಡದ ಹೆಸರಿನಲ್ಲಿ ಇಲ್ಲಿ ಸಿರಿಗನ್ನಡ ತೇರನ್ನು ನಿರ್ಮಿಸಲಾಗಿದೆ. 2012ರಿಂದ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಈ ರಥವನ್ನು ಕನ್ನಡಿಗರೇ ಸೇರಿ ಎಳೆಯುತ್ತಾರೆ.

ಕನ್ನಡ ಕಟ್ಟಿದವರು: ಯಕ್ಷ ರಂಗದ ಜನಪ್ರಿಯ ತಾರೆ ಪಟ್ಲ ಸತೀಶ್ ಶೆಟ್ಟಿ!

ಅಪ್ಪಟ ಕನ್ನಡದ ರಥವಾಗಿರುವ ಇದರಲ್ಲಿ 32 ಕನ್ನಡ ಸಾಹಿತಿಗಳ ಚಿತ್ರಗಳನ್ನು ಮತ್ತು 16 ಕನ್ನಡದ ಘೋಷಣೆಗಳನ್ನು ಕೆತ್ತಲಾಗಿದೆ. ತೇರಿನ 8 ಭಾಗಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಹಾಕಲಾಗಿದೆ. ಇದರ ನಡುವೆಯೇ ತಾಯಿ ಭುವೇಶ್ವರಿ ಮೂರ್ತಿಯನ್ನು ಇರಿತಿ ತೇರನ್ನು ಎಳೆಯಲಾಗುತ್ತದೆ. ಈ ಸಿರಿಗನ್ನಡ ರಥಕ್ಕೆ ಚಿಂಚಣಿ ರೈತರೇ ಸುಮಾರು ₹ 6 ಲಕ್ಷ ಮೌಲ್ಯದ ಸಾಗುವಾನಿ ಮರದ ಕಟ್ಟಿಗೆಯನ್ನುದಾನವಾಗಿ ನೀಡಿದ್ದಾರೆ. ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಬಸಪ್ಪ ಬಡಿಗೇರ ಎಂಬುವರು ಈ ರಥವನ್ನು ನಿರ್ಮಿಸಿದ್ದಾರೆ.

ಕನ್ನಡದ ಕಂಪು

ಮಠದೊಳಗೆ ಕನ್ನಡವೇ ಕಂಪು ಅವರ ಕನ್ನಡ ಪ್ರೇಮ ಜನರನ್ನು ಸೆಳೆಯುತ್ತದೆ. ಸಿದ್ಧಸಂಸ್ಥಾನ ಮಠವನ್ನು ಜನ ಕನ್ನಡ ಮಠ ಎಂದೇ ಕರೆಯುತ್ತಾರೆ. ಯಾರೇ ಆಗಲಿ ಶ್ರೀಮಠವನ್ನು ಪ್ರವೇಶಿಸಿದರೆ ಸಾಕು ಕನ್ನಡದ ಕಂಪು ಸೂಸುತ್ತದೆ. ಶ್ರೀಗಳು ಕನ್ನಡಪರವಾದ ಪುರಾತನ ದಾಖಲೆಗಳನ್ನು ಸಂಗ್ರಹಿಸುವಲ್ಲಿ ವಿಶೇಷ ಆಸಕ್ತಿವುಳ್ಳವರಾಗಿದ್ದಾರೆ. ಕನ್ನಡದ ಇತಿಹಾಸವನ್ನು ತಿಳಿಸುವ ಅಪರೂಪದ ದಾಖಲೆಗಳು ಅವರ ಬಳಿ ಇವೆ. ಮಠದಲ್ಲಿ ಅವರು ಬಾಳಿನ ಬುತ್ತಿ ಕಲಿಕಾ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಅದರ ಮೂಲಕ ಪುಟಾಣಿಗಳಿಗೆ ಅಕ್ಷರಾಭ್ಯಾಸದ ಜೊತೆಗೆ ಧಾರ್ಮಿಕ ಸಂಸ್ಕಾರವನ್ನು ಕೂಡ ನೀಡುತ್ತ ಬಂದಿದ್ದಾರೆ.

ಕನ್ನಡ ಕಟ್ಟಿದವರು: ಉಚಿತವಾಗಿ ಕನ್ನಡ ಸುದ್ದಿ ಪತ್ರಿಕೆ ಹಂಚುವ ಪೇಪರ್ ಆಚಾರ್ಯ!

ಗದುಗಿನ ತೋಂಟದಾರ್ಯ ಶ್ರೀಗಳು ನಮ್ಮ ಗುರುಗಳು. ಅವರು ನನಗೆ ದೀಕ್ಷೆ ಬದಲಾಗಿ ಕನ್ನಡದ ದೀಕ್ಷೆ ಕೊಟ್ಟರು. ಲಿಂಗಾಯತರಿಗೆ ಬಸವಣ್ಣನೇ ಧರ್ಮಗುರು. ಅವರು ವಚನಗಳನ್ನು ರಚಿಸಿ ಕನ್ನಡವನ್ನುದೇವ ಭಾಷೆಯನ್ನಾಗಿ ಮಾಡಿದರು. ಕನ್ನಡದ ಕೆಲಸವೆಂದರೆ ಬಸವಣ್ಣನ ಕೆಲಸ. ನೀವು ಚಿಂಚಣಿ ಮಠಕ್ಕೆ ಹೋಗುತ್ತಿದ್ದೀರಿ ಎಂದಿದ್ದರು. ಅವರ ಮಾತಿಗೆ ಬದ್ಧನಾಗಿ ೧೯೯೭ರಿಂದ ಹಳ್ಳಿ ಹಳ್ಳಿಗಳಲ್ಲಿ ಕನ್ನಡ ಬಿತ್ತುವ ಕೆಲಸ ಮಾಡಿದ್ದೇವೆ. ಮರಾಠಿ ಹಳ್ಳಿಗಳಲ್ಲೂ ರಾಜ್ಯೋತ್ಸವ ಆಚರಿಸುವಂತೆ ಮಾಡಿದ್ದೇವೆ. ಮಠದಲ್ಲಿ ಕನ್ನಡ ಭವನ ಕಟ್ಟಿದ್ದೇವೆ. ಪುಸ್ತಕ ಪ್ರಕಾಶನ ಸ್ಥಾಪಿಸಿದ್ದೇವೆ. ಕನ್ನಡದ ಬೆಳವಣಿಗೆಗೆ ಶ್ರಮಿಸುತ್ತಿದ್ದೇವೆಅಲ್ಲಮಪ್ರಭು ಸ್ವಾಮೀಜಿ, ಚಿಂಚಣಿ ಸಿದ್ಧಸಂಸ್ಥಾನಮಠ

ಅಲ್ಲಮಪ್ರಭು ಸ್ವಾಮೀಜಿಗಳ ಕನ್ನಡ ಜಾಗೃತಿ ಕಾರ್ಯವಂತೂ ಶ್ಲಾಘನೀಯ. ನಾಡಿನ ಖ್ಯಾತ ಚಿಂತಕರನ್ನು, ಸಾಹಿತಿ, ಮಠಾಧೀಶರನ್ನು ಮತ್ತು ಕಲಾವಿದರನ್ನು ಗಡಿನಾಡಿಗೆ ಕರೆತಂದು ಕನ್ನಡ ಭಾಷಾ ಪ್ರಭಾವ ಹೆಚ್ಚುವಂತೆ ಮಾಡಿದ್ದಾರೆ. ಇದರ ಪರಿಣಾಮವಾಗಿ ಮರಾಠಿ ಪ್ರಭಾವಿತ ಗ್ರಾಮಗಳಲ್ಲಿ ಕನ್ನಡ ಮೆರೆಯುತ್ತಿದೆ. 35 ಮೌಲಿಕ ಗ್ರಂಥಗಳು ಸಮರ್ಪಣೆ ಕನ್ನಡಪರ ಚಿಂತನೆಯ ಸಮಾನ ಮನಸ್ಕರನ್ನು ಒಳಗೊಂಡ ಗಡಿ ಕನ್ನಡಿಗರ ಬಳಗ ಸ್ಥಾಪನೆಯಾಗಿದೆ. ಕನ್ನಡ ಭಾಷೆ, ಸಂಸ್ಕೃತಿ ಶಿಕ್ಷಣ ಪ್ರಸಾರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಅಲ್ಲಮಪ್ರಭು ಜನ ಕಲ್ಯಾಣ ಸಂಸ್ಥೆಯ ಕನ್ನಡ ಜಾಗೃತಿ ಪುಸ್ತಕ ಮಾಲೆಯ ಮೂಲಕ ಇದುವರೆಗೆ ಆಧುನಿಕಕರ್ನಾಟಕದ ಆತಂಕಗಳು, ಕನ್ನಡತನ ಮತ್ತು ಭಾರತೀಯತೆ, ಮಹಾಜನ ವರದಿ ಒಂದು ಅವಲೋಕನ, ಕನ್ನಡ ಕೋಟೆ ಕೆಎಲ್‌ಇ, ನಾಥ ಸಂಪ್ರದಾಯದ ಇತಿಹಾಸ, ರಂಗಭೂಮಿ- ಕನ್ನಡ ಸಂವೇದನೆ, ನಮ್ಮ ನಾಡು, ನುಡಿ ಮತ್ತು ಗಡಿ, ಕನ್ನಡ ಕಟ್ಟೋಣ, ಕರ್ನಾಟಕ ಏಕೀಕರಣ ಚಳುವಳಿ, ಕನ್ನಡ ಕನ್ನಡಿಗ, ಕರ್ನಾಟಕ, ಕರ್ನಾಟಕ ಏಕೀಕರಣ ಚಳುವಳಿ ಮತ್ತು ಮಹಿಳೆ, ಮಹದಾಯಿ, ನೀರಿಗಾಗಿ ಹೋರಾಟ ಮತ್ತುಕನ್ನಡಕ್ಕೆ ಕೈ ಎತ್ತು ಮೊದಲಾದ ನಾಡಿನ ಸ್ಥಿತಿಗತಿ ಮೇಲೆ ಬೆಳಕು
ಚೆಲ್ಲುವ 36 ಮೌಲಿಕ ಗ್ರಂಥಗಳನ್ನು ಪ್ರಕಟಿಸಿದ್ದಾರೆ.

ಕನ್ನಡ ಕಟ್ಟಿದವರು: ಕ್ಷೌರಿಕ ವೃತ್ತಿ ಮಾಡುತ್ತಲೇ ಕನ್ನಡ ಪರಿಚಾರಕರಾಗಿರುವ ಪವನ್!

ಗಡಿಭಾಗದ ಜನತೆಗೆ ಉಚಿತವಾಗಿ ಪುಸ್ತಕಗಳನ್ನು ನೀಡಿ ಓದುವ ಸದಭಿರುಚಿ ಹಚ್ಚಿದ್ದಾರೆ. ಕನ್ನಡ ನಾಡು ನುಡಿ ಕಟ್ಟುವಲ್ಲಿ ಕಾಯಕದಲ್ಲಿ ತೊಡಗುವ ಮೂಲಕ ಕನ್ನಡದ ಕೀರ್ತಿಗೆ ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ ಪಾತ್ರರಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Follow Us:
Download App:
  • android
  • ios