Asianet Suvarna News Asianet Suvarna News

ಒಳಮೀಸಲಾತಿ ನಿರ್ಧಾರದಿಂದ ಸಂವಿಧಾನಕ್ಕೆ ಅಪಚಾರ: ಪಿ.ಟಿ.ಪರಮೇಶ್ವರ ನಾಯ್ಕ್

ಬಿಜೆಪಿ ಸರ್ಕಾರವು ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿ ಚರ್ಚಿಸದೇ ಏಕಪಕ್ಷೀಯವಾಗಿ ಒಳಮೀಸಲಾತಿ ಘೋಷಿಸಿರುವುದು ಸಂವಿಧಾನಕ್ಕೆ ಎಸಗಿದ ಅಪಚಾರ ಎಂದು ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಆರೋಪಿಸಿದರು.

Insult to Constitution by BJP govt  internal reservation decision: PT Parameshwara Naik rav
Author
First Published Mar 31, 2023, 9:22 AM IST

ಹೂವಿನಹಡಗಲಿ (ಮಾ.31) : ಬಿಜೆಪಿ ಸರ್ಕಾರವು ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿ ಚರ್ಚಿಸದೇ ಏಕಪಕ್ಷೀಯವಾಗಿ ಒಳಮೀಸಲಾತಿ ಘೋಷಿಸಿರುವುದು ಸಂವಿಧಾನಕ್ಕೆ ಎಸಗಿದ ಅಪಚಾರ ಎಂದು ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದಾಶಿವ ಆಯೋಗ(Sadashiva Ayoga)ದ ವರದಿಯಲ್ಲಿ ಏನಿದೆ?, ಅದರ ಸಾಧಕ- ಬಾಧಕಗಳನ್ನು ಈವರೆಗೂ ಜನರಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ತಿಳಿಸಿಲ್ಲ. ಪರಿಶಿಷ್ಟಜಾತಿಯಲ್ಲಿರುವ 101 ಜಾತಿಗಳ ಜನಾಂಗದವರು ಸಹೋದರ ಭಾವನೆಯಿಂದ ಬದುಕುತ್ತಿದ್ದೇವೆ. ಆದರೆ ಈ ಬಿಜೆಪಿ ಸರ್ಕಾರ ಜಾತಿ-ಜಾತಿಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡಿದೆ. ಮೀಸಲಾತಿ ಯಾರಪ್ಪನ ಮನೆಯ ಸ್ವತ್ತು ಅಲ್ಲ. ಚುನಾವಣೆ ಸಂದರ್ಭದಲ್ಲಿ ಮತಗಳನ್ನು ಗೀಟಿಸಿಕೊಳ್ಳಲು ಏಕಾಏಕಿ ನಿರ್ಧಾರದಿಂದ ಅನೇಕ ಸಮುದಾಯಗಳ ಮಧ್ಯೆ ಮೀಸಲಾತಿ ಗೊಂದಲ ಮೂಡಿಸಿದ್ದಾರೆಂದು ದೂರಿದರು.

ಬೆಳಗ್ಗೆ ಜೈಲು ಸಂಜೆಗೆ ಬೇಲು: ಶಿಕಾರಿಪುರ ಕಲ್ಲು ತೂರಾಟದ ಆರೋಪಿಗಳಿಗೆ ಜಾಮೀನು ಮಂಜೂರು

ಮೀಸಲಾತಿ ವಿಚಾರದಲ್ಲಿ ಬಂಜಾರ, ಮುಸ್ಲಿಂ ಸೇರಿದಂತೆ ಇತರೆ ಸಮುದಾಯದವರು ರಾಜ್ಯದ ಎಲ್ಲ ಕಡೆಗೂ ಬೀದಿಗೆ ಬಂದು ಪ್ರತಿಭಟನೆ ಮಾಡುತ್ತಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆ ಸದಾಶಿವ ಆಯೋಗ ವರದಿಯ ಒಳಮೀಸಲಾತಿ ಹಿಂಪಡೆಯಲು ಅವಕಾಶವಿಲ್ಲ. ಜತೆಗೆ ಲಿಂಗಾಯತ, ಒಕ್ಕಲಿಗರಿಗೆ ನೀಡಿರುವ ಮೀಸಲಾತಿ ಅನುಷ್ಠಾನ ಮಾಡಲು ಆಗುತ್ತಿಲ್ಲ. ಇಂತಹ ದ್ವಂದ್ವ ನಿಲುವಿನ ಪರಿಸ್ಥಿತಿ ಉಂಟು ಮಾಡಿರುವುದು ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯ ಹುನ್ನಾರ ಎಂದು ಆರೋಪಿಸಿದರು.

ಪಜಾ, ಪಪಂ ಸಮುದಾಯಗಳ ಮೀಸಲಾತಿ ಹೆಚ್ಚಳ ಕುರಿತು ಈವರೆಗೂ ಕೇಂದ್ರಕ್ಕೆ ಶಿಫಾರಸು ಮಾಡಿಲ್ಲ. ಕುತಂತ್ರ ಬುದ್ಧಿ ಉಪಯೋಗಿಸಿರುವ ಬಿಜೆಪಿ ಸರ್ಕಾರಕ್ಕೆ ಈ ಬಾರಿ ರಾಜ್ಯದ ಜನತೆ ತಕ್ಕ ಪಾಠ ಕಲಿಸುತ್ತಾರೆ. ಜತೆಗೆ ಸಾಚಾರ್‌ ವರದಿಯ ಆಧಾರದ ಮೇಲೆ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ 2ಬಿ ಮೀಸಲಾತಿ ರದ್ದು ಮಾಡಿರುವುದು ಸರಿಯಲ್ಲ. ಇದರಿಂದ ಬಡ ಮುಸ್ಲಿಂ ಕುಟುಂಬಗಳು ಮತ್ತಷ್ಟುಅಧೋಗತಿಗೆ ತರುವ ಕೆಲಸವನ್ನು ಮಾಡಿದ್ದಾರೆಂದು ದೂರಿದರು.

ನೇಮಕ:

ಈ ಹಿಂದೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಟಿಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಬಿ. ಹನುಮಂತಪ್ಪ, ಹೂವಿನಹಡಗಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಅಟವಾಳಗಿ ಕೊಟ್ರೇಶ ಅವರನ್ನು ನೇಮಿಸಿ ಆದೇಶ ಪತ್ರಗಳನ್ನು ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ವಿತರಿಸಿದರು.

ಕೊಪ್ಪಳದಲ್ಲಿ ರಾಘವೇಂದ್ರ ಹಿಟ್ನಾಳ ವಿರುದ್ಧ ಅಖಾಡಕ್ಕೆ ಇಳಿಯೋರು ಯಾರು?

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಜ್ಯೋತಿ ಮಲ್ಲಣ್ಣ, ಉಪಾಧ್ಯಕ್ಷ ಎಸ್‌. ತಿಮ್ಮಣ್ಣ, ಟಿಎಪಿಸಿಎಂಎಸ್‌ ಅಧ್ಯಕ್ಷ ಪಾಟೀಲ್‌ ಬಸವನಗೌಡ, ಸಿ. ಚಾಂದ್‌ಸಾಬ್‌, ಸೋಗಿ ಹಾಲೇಶ, ಜಿ. ವಸಂತ, ಬಿ.ಎಲ್‌. ಶ್ರೀಧರ, ಕಾಗದ ಗೌಸ್‌ ಮೋಹಿದ್ದೀನ್‌, ಈಟಿ ಕೋಟೆಪ್ಪ, ಗುರುವಿನ ರಾಜು, ಶಿವಕುಮಾರಗೌಡ ಸೇರಿದಂತೆ ಇತರರಿದ್ದರು.

Follow Us:
Download App:
  • android
  • ios