ಕೇಂದ್ರ ಸರ್ಕಾರವು ಕರ್ನಾಟಕ ಮತ್ತು ಆಂಧ್ರಪ್ರದೇಶ ನಡುವಿನ ಸಂಪರ್ಕವನ್ನು ವೃದ್ಧಿಸಲು ₹1,264 ಕೋಟಿ ವೆಚ್ಚದ 'ಬಳ್ಳಾರಿ-ಗುಂತಕಲ್' 3ನೇ ಮತ್ತು 4ನೇ ರೈಲು ಮಾರ್ಗ ಯೋಜನೆಗೆ ಅನುಮೋದನೆ ನೀಡಿದೆ.
ಬೆಂಗಳೂರು /ನವದೆಹಲಿ (ಜು.24): ಕರ್ನಾಟಕ ಮತ್ತು ಆಂಧ್ರಪ್ರದೇಶ ನಡುವಿನ ಸರಕು ಸಾಗಣೆ ಹಾಗೂ ಪ್ರಯಾಣಿಕರ ಸಂಚಾರವನ್ನು ಮತ್ತಷ್ಟು ಚುರುಕುಗೊಳಿಸುವ ಉದ್ದೇಶದಿಂದ, 'ಬಳ್ಳಾರಿ - ಗುಂತಕಲ್' ರೈಲ್ವೆ ವಿಭಾಗದ 3ನೇ ಮತ್ತು 4ನೇ ಮಾರ್ಗ (ರೈಲು ಹಳಿ) ನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಸಭೆಯಲ್ಲಿ ಸುಮಾರು ₹1,264 ಕೋಟಿ ವೆಚ್ಚದ ಈ ಬೃಹತ್ ಯೋಜನೆಗೆ ಅನುಮೋದನೆ ನೀಡಲಾಗಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ವ್ಯಾಪ್ತಿಯ 3 ಜಿಲ್ಲೆಗಳನ್ನು ಒಳಗೊಳ್ಳುವ ಈ ಯೋಜನೆಯು ಭಾರತೀಯ ರೈಲ್ವೆಯ ಪ್ರಸ್ತುತ ಜಾಲಕ್ಕೆ ಸುಮಾರು 46 ಕಿಲೋಮೀಟರ್ ಹೊಸ ಮಾರ್ಗವನ್ನು ಸೇರ್ಪಡೆಗೊಳಿಸಲಿದೆ.
ಈ ಯೋಜನೆಯನ್ನು 'ಪಿಎಂ-ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್' (PM-Gati Shakti National Master Plan) ಅಡಿಯಲ್ಲಿ ರೂಪಿಸಲಾಗಿದೆ. ಸಮಗ್ರ ಯೋಜನೆ ಮತ್ತು ಸಂಬಂಧಿತ ಪಾಲುದಾರರ ಸಮಾಲೋಚನೆಯ ಮೂಲಕ ಬಹುಮಾದರಿ ಸಂಪರ್ಕ (Multi-modal connectivity) ಹಾಗೂ ಲಾಜಿಸ್ಟಿಕ್ಸ್ ದಕ್ಷತೆಯನ್ನು ಹೆಚ್ಚಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ಯೋಜನೆಯಿಂದ ಸಾರ್ವಜನಿಕರ ಸಂಚಾರ, ಸರಕು ಮತ್ತು ಸೇವೆಗಳ ಸಾಗಣೆಗೆ ತಡೆರಹಿತ ಸಂಪರ್ಕ ಲಭ್ಯವಾಗಲಿದೆ.
7 ಲಕ್ಷ ಜನಸಂಖ್ಯೆ, 99 ಹಳ್ಳಿಗಳಿಗೆ ನೆರವು
ಹೊಸದಾಗಿ ಕೈಗೆತ್ತಿಕೊಳ್ಳಲಿರುವ ಈ ಹಳಿ ದ್ವಿಗುಣಗೊಳಿಸುವ ಯೋಜನೆಯು ಈ ಭಾಗದ ಸುಮಾರು 7 ಲಕ್ಷ ಜನಸಂಖ್ಯೆ ಹೊಂದಿರುವ ಸರಿಸುಮಾರು 99 ಹಳ್ಳಿಗಳಿಗೆ ನೇರ ರೈಲು ಸಂಪರ್ಕ ಮತ್ತು ಸಾರಿಗೆ ಅನುಕೂಲವನ್ನು ಒದಗಿಸಲಿದೆ. ಮಾರ್ಗದ ಸಾಮರ್ಥ್ಯ ವಿಸ್ತರಣೆಯಿಂದಾಗಿ ದೇಶದ ಪ್ರಮುಖ ಪ್ರವಾಸಿ ತಾಣಗಳಾದ ಬಳ್ಳಾರಿ ಕೋಟೆ, ಪ್ರಸಿದ್ಧ ಶ್ರೀ ಕುಮಾರಸ್ವಾಮಿ ದೇವಾಲಯ ಸೇರಿದಂತೆ ಹಲವು ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಸುಲಭ ರೈಲು ಸಂಪರ್ಕ ದೊರೆಯಲಿದೆ.
ಸರಕು ಸಾಗಣೆಗೆ ಜೀವಕಳೆ; ವಾರ್ಷಿಕ 16.22 ಮಿಲಿಯನ್ ಟನ್ ಸರಕು
ಉಕ್ಕು, ಕಬ್ಬಿಣದ ಅದಿರು, ಡೋಲಮೈಟ್, ಸುಣ್ಣದ ಕಲ್ಲು (ಲೈಮ್ಸ್ಟೋನ್), ಕಬ್ಬಿಣ ಮತ್ತು ಉಕ್ಕು, ಕಲ್ಲಿದ್ದಲು, ರಸಗೊಬ್ಬರ ಹಾಗೂ ಆಹಾರ ಧಾನ್ಯಗಳಂತಹ ಅಗತ್ಯ ಸರಕುಗಳ ಸಾಗಣೆಗೆ ಈ ಬಳ್ಳಾರಿ-ಗುಂತಕಲ್ ಮಾರ್ಗವು ಅತ್ಯಂತ ಪ್ರಮುಖವಾಗಿದೆ. ಈ ವಿಸ್ತರಣಾ ಕಾಮಗಾರಿಯಿಂದಾಗಿ ಪ್ರತಿವರ್ಷ ಹೆಚ್ಚುವರಿಯಾಗಿ 16.22 ಮಿಲಿಯನ್ ಟನ್ (MTPA) ಸರಕು ಸಾಗಣೆ ಮಾಡಲು ಸಾಧ್ಯವಾಗಲಿದೆ.
ಪರಿಸರ ಸ್ನೇಹಿ; 1.32 ಕೋಟಿ ಲೀಟರ್ ಇಂಧನ ಉಳಿತಾಯ
ರೈಲ್ವೆ ಸಾರಿಗೆಯು ಅತ್ಯಂತ ಪರಿಸರ ಸ್ನೇಹಿ ಮತ್ತು ಇಂಧನ ದಕ್ಷ ವ್ಯವಸ್ಥೆಯಾಗಿದ್ದು, ಭಾರತದ ಹವಾಮಾನ ಗುರಿಗಳನ್ನು ತಲುಪಲು ಹಾಗೂ ಸಾಗಣೆ ವೆಚ್ಚವನ್ನು (Logistics cost) ಕಡಿಮೆ ಮಾಡಲು ನೆರವಾಗಲಿದೆ. ಯೋಜನೆಯಿಂದಾಗಿ 1.32 ಕೋಟಿ ಲೀಟರ್ ಕಚ್ಚಾ ತೈಲ ಆಮದು ಉಳಿತಾಯವಾಗಲಿದೆ. 6.67 ಕೋಟಿ ಕಿಲೋಗ್ರಾಂ ಇಂಗಾಲದ ಡೈಆಕ್ಸೈಡ್ (CO2) ಹೊರಸೂಸುವಿಕೆ ಕಡಿಮೆಯಾಗಲಿದೆ. ಇದು ಸುಮಾರು 27 ಲಕ್ಷ (0.27 ಕೋಟಿ) ಗಿಡಗಳನ್ನು ನೆಡುವುದಕ್ಕೆ ಸಮಾನವಾಗಿದೆ. ಹಳಿಗಳ ಸಾಮರ್ಥ್ಯ ಹೆಚ್ಚಾಗುವುದರಿಂದ ರೈಲುಗಳ ಸಂಚಾರ ವೇಗಗೊಳ್ಳಲಿದ್ದು, ಭಾರತೀಯ ರೈಲ್ವೆಯ ಕಾರ್ಯಕ್ಷಮತೆ ಹಾಗೂ ಸೇವಾ ನಂಬಿಕೆಯನ್ನು ಹೆಚ್ಚಿಸಲಿದೆ.


