Hero MotoCorp: ಹೀರೋ ಕಂಪನಿ ₹1000 ಕೋಟಿ ಬೋಗಸ್ ಲೆಕ್ಕ: ಐಟಿ
*ಸುಳ್ಳು ಲೆಕ್ಕಪತ್ರ ಮೂಲಕ ₹1000 ಕೋಟಿ ವೆಚ್ಚ ತೋರಿಸಿರುವ ಆರೋಪ
*100 ಕೋಟಿ ರು. ನಗದು ನೀಡಿ ಫಾರ್ಮ್ ಹೌಸ್ ಖರೀದಿ
ನವದೆಹಲಿ (ಮಾ. 30): ದೇಶದ ಅತಿದೊಡ್ಡ, ನಂ.1 ದ್ವಿಚಕ್ರ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟಾರ್ ಕಾರ್ಪ್ (Hero Motocorp) ಮೇಲೆ ಇತ್ತೀಚೆಗೆ ನಡೆಸಲಾದ ದಾಳಿಯ ವೇಳೆ 1000 ಕೋಟಿ ರು. ಅಕ್ರಮ ಪತ್ತೆಯಾಗಿದೆ ಹಾಗೂ ಫಾರ್ಮ್ ಹೌಸ್ ಒಂದರ ಖರೀದಿಗೆ 100 ಕೋಟಿ ರು. ನಗದು ನೀಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾ.23ರಂದು ಕಂಪನಿಗೆ ಸೇರಿದ ವಿವಿಧ ನಗರಗಳಲ್ಲಿನ 40 ಕಚೇರಿ, ಮನೆಗಳ ಮೇಲೆ ದಾಳಿ ನಡೆಸಿದ್ದರು.
ದಾಳಿ ವೇಳೆ ಸಾಕಷ್ಟುಗೋಲ್ಮಾಲ್ ಪತ್ತೆಯಾದ ಮತ್ತು ಸಾಕಷ್ಟುದಾಖಲೆಗಳು ಲಭ್ಯವಾದ ಹಿನ್ನೆಲೆಯಲ್ಲಿ ಮಾ.26ರವರೆಗೂ ದಾಳಿ ಮುಂದುವರೆಸಲಾಗಿತ್ತು. ಕಂಪನಿಯ ಅಧ್ಯಕ್ಷ ಪವನ್ ಮುಂಜಾಲ್ ಅವರ ಮನೆಯ ಮೇಲೂ ದಾಳಿ ನಡೆಸಲಾಗಿತ್ತು.
ಈ ದಾಳಿಯ ವೇಳೆ ಕಂಪನಿಯು, ಸುಳ್ಳು ಲೆಕ್ಕಪತ್ರಗಳನ್ನು ಸೃಷ್ಟಿಸುವ ಮೂಲಕ 1000 ಕೋಟಿ ರು. ವೆಚ್ಚವನ್ನು ತೋರಿಸಿದೆ. ಈ ಮೂಲಕ 1000 ಕೋಟಿ ರು. ತೆರಿಗೆ ವಂಚನೆ ನಡೆಸಿರುವುದು ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Hero Group Case: ದೆಹಲಿ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಕಾರ
40ಕ್ಕೂ ಹೆಚ್ಚು ದೇಶಗಳಿಗೆ ತನ್ನ ವಾಹನಗಳನ್ನು ರಫ್ತು ಮಾಡುವ ಹೀರೋ ಕಂಪನಿಯ ಮೇಲೆ ನಡೆದ ಐಟಿ ದಾಳಿಯು, ಇತ್ತೀಚಿನ ವರ್ಷಗಳಲ್ಲೇ ಖ್ಯಾತನಾಮ ಕಂಪನಿಯೊಂದರ ಮೇಲೆ ನಡೆಸಿದ ಪ್ರಮುಖ ದಾಳಿಯಾಗಿತ್ತು. ದಾಳಿಯ ಬಳಿಕ ಪ್ರತಿಕ್ರಿಯೆ ನೀಡಿದ್ದ ಕಂಪನಿ, ‘ಇದು ಹಣಕಾಸು ವರ್ಷದ ಅಂತ್ಯದಲ್ಲಿ ನಡೆಯುವ ಸಾಮಾನ್ಯ ವಿಚಾರಣೆ ಅಷ್ಟೇ. ಕಂಪನಿಯು ನೈತಿಕ ಮತ್ತು ಕಾನೂನು ಪಾಲಿಸುವ ಕಾರ್ಪೊರೆಟ್ ಸಂಸ್ಥೆಯಾಗಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಿದ್ದೇವೆ. ಸಂಸ್ಥೆಯು ಎಂದಿನಂತೆ ವ್ಯವಹಾರ ಮುಂದುವರೆಸುತ್ತದೆ ಎಂದು ಎಲ್ಲಾ ಪಾಲುದಾರರಿಗೆ ಭರವಸೆ ನೀಡುತ್ತೇವೆ’ ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿತ್ತು.
ಕುಸಿದ ಷೇರು: ಆದರೆ ಇದೀಗ ಕಂಪನಿಯ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಈ ಸುದ್ದಿ ಬೆನ್ನಲ್ಲೇ, ಷೇರುಪೇಟೆಯಲ್ಲಿ ಹೀರೋ ಮೋಟಾರ್ ಕಾಪ್ರ್ನ ಷೇರು ಬೆಲೆ ಶೇ.7ರಷ್ಟುಕಸಿತ ಕಂಡಿದೆ.
ಬ್ಯಾಂಕ್ ಹಗರಣದಿಂದ ದೇಶಕ್ಕೆ ಪ್ರತಿನಿತ್ಯ 100 ಕೋಟಿ ರು. ನಷ್ಟ: ಬ್ಯಾಂಕುಗಳಲ್ಲಿ ನಡೆಯುವ ಅಕ್ರಮ ಅಥವಾ ಹಗರಣಗಳಿಂದ ಕಳೆದ ಏಳು ವರ್ಷಗಳ ಕಾಲಾವಧಿಯಲ್ಲಿ ಭಾರತ ಪ್ರತಿದಿನ 100 ಕೋಟಿ ರು.ಗಿಂತಲೂ ಅಧಿಕ ಹಣವನ್ನು ಕಳೆದುಕೊಂಡಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.
2015ರಿಂದ 2021ರ ಡಿಸೆಂಬರ್ವರೆಗೆ ದೇಶದಲ್ಲಿ 2.5 ಲಕ್ಷ ಕೋಟಿ ರು. ಮೊತ್ತದ ಬ್ಯಾಂಕಿಂಗ್ ಹಗರಣ ನಡೆದಿವೆ. ಆ ಪೈಕಿ ದೇಶದ ವಾಣಿಜ್ಯ ರಾಜಧಾನಿ ಮುಂಬೈಯನ್ನು ಹೊಂದಿರುವ ಮಹಾರಾಷ್ಟ್ರದಲ್ಲೇ ಶೇ.50ರಷ್ಟುಅಕ್ರಮವಾಗಿದೆ. ಮಹಾರಾಷ್ಟ್ರ, ದೆಹಲಿ, ತೆಲಂಗಾಣ, ಗುಜರಾತ್ ಹಾಗೂ ತಮಿಳುನಾಡಿನಲ್ಲಿ ಒಟ್ಟಾರೆ 2 ಲಕ್ಷ ಕೋಟಿ ರು.ನಷ್ಟವಾಗಿದ್ದು, ದೇಶದ ನಷ್ಟಪಾಲಿನಲ್ಲಿ ಈ ಐದು ರಾಜ್ಯಗಳೇ ಶೇ.83ರಷ್ಟುಹೊಂದಿವೆ ಎಂದು ಭಾರತೀಯ ರಿಸವ್ರ್ ಬ್ಯಾಂಕ್ (ಆರ್ಬಿಐ)ನ ಅಂಕಿ-ಅಂಶಗಳು ಹೇಳಿವೆ.
ಇದನ್ನೂ ಓದಿ: 26 ಲಕ್ಷ ಕೋಟಿ ರು. ಪೆಟ್ರೋಲ್ ತೆರಿಗೆ ಲೆಕ್ಕ ಕೊಡಿ: ಕೇಂದ್ರಕ್ಕೆ ಕಾಂಗ್ರೆಸ್ ಸವಾಲು!
ವರ್ಷದಿಂದ ವರ್ಷಕ್ಕೆ ಬ್ಯಾಂಕ್ ಅಕ್ರಮದಿಂದ ಆಗುವ ನಷ್ಟದ ಮೊತ್ತ ಕಡಿಮೆಯಾಗುತ್ತಿದೆ. ತಕ್ಷಣವೇ ವಂಚನೆ ಬಗ್ಗೆ ವರದಿ ಮಾಡುವುದು ಹಾಗೂ ಅಕ್ರಮ ತಡೆಯಲು ಕೆಲವೊಂದು ಕ್ರಮಗಳನ್ನು ಜಾರಿಗೊಳಿಸಿದ್ದರಿಂದ ಧೋಖಾ ಕಡಿಮೆಯಾಗುತ್ತಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
2015-16ರಲ್ಲಿ 67760 ಕೋಟಿ, 2016-17ರಲ್ಲಿ 59966 ಕೋಟಿ, ನಂತರದ 2 ವರ್ಷಗಳಲ್ಲಿ 45 ಸಾವಿರ ಕೋಟಿ ರು. ವಂಚನೆಯಾಗಿತ್ತು. 2019-20ರಲ್ಲಿ 27698, 2020-21ರಲ್ಲಿ 10699 ಕೋಟಿ ರು.ಗೆ ಈ ಮೊತ್ತ ಇಳಿದಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ 9 ತಿಂಗಳಲ್ಲಿ 647 ಕೋಟಿ ರು. ವಂಚನೆಯಾಗಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ.