ಮನುಷ್ಯ ಹುಟ್ಟಿದಾಗಿನಿಂದ ಹಿಡಿದು, ಸಾಯುವವರೆಗೂ ಪಂಚಭೂತಗಳೊಂದಿಗೆ ಸಂಬಂಧ ಹೊಂದಿದ್ದಾನೆ. ಅಷ್ಟೇ ಏಕೆ ಸತ್ತ ಮೇಲೂ ಪಂಚಭೂತಗಳಲ್ಲಿಯೇ ಲೀನವಾಗುತ್ತೆ. ಏನೀ ಪಂಚಭೂತಗಳು?

ಹೌದು. ಮನುಷ್ಯ ಸಂಗಜೀವಿ. ಒಬ್ಬರನ್ನೊಬ್ಬರು ಯಾವುದೋ ಒಂದು ರೀತಿಯಲ್ಲಿ ಅವಲಂಬಿಸಿದ್ದಾರೆ. ಅವಲಂಬನೆ ಮನುಷ್ಯನಿಗೆ ಮಾತ್ರ ಸೀಮಿತವಾಗಿಲ್ಲ, ಮನುಷ್ಯ ಜೀವಿಸಲಿಕ್ಕೆ ಇನ್ನೂ ಒಂದು ಅಂಶ ಪ್ರಧಾನವಾಗಿದೆ. ಅದೇ ನಮ್ಮ ನಡುವೆ ವ್ಯಾಪಿಸಿರುವ ಪಂಚಭೂತ. 

Add Asianetnews Kannada as a Preferred SourcegooglePreferred

ಈ ಮನುಷ್ಯ ವಾಸಿಸಲಿಕ್ಕೆ ಭೂಮಿಯನ್ನು ಅವಲಂಬಿಸಿದ್ದಾನೆ, ನೀರಿಲ್ಲದೆ ಬದುಕಿಲ್ಲ, ಉಸಿರಾಡಲಿಕ್ಕೆ ಗಾಳಿ ಬೇಕೇ ಬೇಕು, ಜೊತೆಗೆ ಒಬ್ಬರಿಂದ ಒಬ್ಬರಿಗೆ ಅಂತರ ಕಾಯ್ದುಕೊಳ್ಳುವ ಮೂಲಕ ಆಕಾಶವನ್ನೂ ಅವಲಂಬಿಸಿದ್ದಾನೆ. ಅಲ್ಲಿಗೆ ಪಂಚಭೂತಗಳನ್ನ ಬಿಟ್ಟು ಮನುಷ್ಯನಿಲ್ಲ. 

ಮನೋಕಾಮನೆ ಈಡೇರಿಸುವ ದೇವಾಲಯವಿದು...!

ಇಂಥ ಪಂಚಭೂತಾತ್ಮಕವಾದ ಅಂಶ ಮನುಷ್ಯನ ಶರೀರದಲ್ಲೂ ಇದೆ. ದೇಹವೇ ಮಣ್ಣು ಹಾಗಾಗಿಯೇ ದಾಸರು ಹೇಳಿದ್ದು ಮಣ್ಣಿಂದ ಕಾಯ ಮಣ್ಣಿಂದ ಅಂತ. ನಾವು ತಿಂದ ಅನ್ನ ಮಣ್ಣಿನಿಂದಲೇ ಬಂದದ್ದು. ಅನ್ನ ಮಣ್ಣಲ್ಲದೆ ಬೇರೇನೂ ಅಲ್ಲ. ಹೇಗೆ ಅಕ್ಕಿಯೊಂದು ಬೆಂದ ನಂತರ ತನ್ನ ರೂಪ ಬದಲಿಸತ್ತೋ, ಹಾಲು ಮೊಸರಾಗಿ, ತುಪ್ಪವಾಗಿ ಬದಲಾಗತ್ತೋ ಹಾಗೆ ಅನ್ನ ದೇಹವಾಗಿ ಮಾರ್ಪಾಡಾಗತ್ತೆ. ಅದೇ ಪೃಥ್ವೀ ತತ್ವ. 

ಇನ್ನು ನಮ್ಮೊಳಗಿರುವ ನೀರು, ಹೊರಬರುವ ಮೂತ್ರ, ವೀರ್ಯ ಎಲ್ಲವೂ ಜಲ ಸ್ವರೂಪವೇ ಅದನ್ನೇ ಜಲತತ್ವ ಅಂತಾರೆ. ಆನಂತರ ಅಗ್ನಿ ಅಗ್ನಿಯಿಲ್ಲದೆ ನಾವು ತಿಂದ ಅನ್ನ ಹೊಟ್ಟೆಯಲ್ಲಿ ಅರಗುವುದಿಲ್ಲ. ನಮ್ಮೊಳಗಿನ ಜಠರಾಗ್ನಿಯೇ ತಿಂದದ್ದನ್ನು ಕರಗಿಸುವುದು. ಅದೇ ಅಗ್ನಿ ತತ್ವ. 

ಜಪಮಾಲೆ ರಕ್ತದೊತ್ತಡಕ್ಕೂ ಮದ್ದು

ಇನ್ನು ವಾಯು: ನಾವು ಉಸಿರಾಡುವ ಗಾಳಿ ದೇಹದೊಳಗೆ ಇಲ್ಲದೇ ಹೋದರೆ ಅದನ್ನು ಹೆಣ ಅಂತ ಕರೀತಾರೆ. ಹಾಗಾಗಿ ಜೀವ ಇದೆ ಅಂದ್ರೆ ಅದಕ್ಕೆ ಗಾಳಿ ಅತಿ ಅವಶ್ಯ. ಅದನ್ನೇ ವಾಯು ತತ್ವ. ಇನ್ನು ಕೊನೆಯದಾಗಿ ಆಕಾಶ ತತ್ವ. ಅದಿರುವುದರಿಂದಲೇ ಹೃದಯಾಕಾಶ ಅನ್ನೋದು ಪ್ರಸಿದ್ಧವಾಗಿದ್ದು. ನಮ್ಮೊಳಗೂ ಸ್ಪೇಸ್ ಇದೆ ಆ ಎಲ್ಲ ಖಾಲಿ ಜಾಗವೇ ಆಕಾಶ ತತ್ವ. ಹೀಗೆ ಮನುಷ್ಯನ ದೇಹ ಸಂಪೂರ್ಣವಾಗಿ ಪಂಚಭೂತ ತತ್ವದ ಆಧಾರದ ಮೇಲೆ ನಿಂತಿದೆ. ಇವೆಲ್ಲವೂ ಸೂಕ್ಷ್ಮಾತಿ ಸೂಕ್ಷ್ಮ ಬದಲಾವಣೆ. ವಿಜ್ಞಾನವೂ ಇದನ್ನು ಒಪ್ಪದೆ ಇರಲಾರದು. 

ನವಗ್ರಹಗಳಲ್ಲಿ ಪಂಚಭೂತ ತತ್ವ..!

ಇಂಥ ಶ್ರೇಷ್ಠ ತತ್ವವನ್ನ ಆಧರಿಸಿ ಮನುಷ್ಯನ ಆಗುಹೋಗುಗಳನ್ನ ಗುರ್ತಿಸಲಿಕ್ಕೆ ಹಾಗೂ ಅವನ ಗುಣ ಧರ್ಮವನ್ನ ಚಿಂತಿಸಲಿಕ್ಕೆ ಒಂದು ಶಾಸ್ತ್ರವನ್ನ ಋಷಿಗಳು ತಯಾರಿಸಿದರು. ಅದೇ ಜ್ಯೋತಿಷ ಶಾಸ್ತ್ರ. ಅಲ್ಲಿ ಪ್ರಧಾನವಾಗಿ 7 ಗ್ರಹಗಳಿವೆ. ಒಂದೊಂದು ಗ್ರಹವೂ ಒಂದೊಂದು ತತ್ವಕ್ಕೆ ಅಧಿಪತ್ಯವನ್ನು ಹೊಂದಿದೆ. ಮನುಷ್ಯ ಹುಟ್ಟಿದ ಸಂದರ್ಭದಲ್ಲಿ ಯಾವ ಗ್ರಹ ಆತನ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಅನ್ನೋದನ್ನು ನೋಡಿಕೊಂಡು ಅವನ ಜೀವನ ಕ್ರಮ, ಆಹಾರ ಪದ್ದತಿಗಳನ್ನ ರೂಪಿಸಿಕೊಳ್ಳಲಿ ಎಂದೇ ಈ ಮಹತ್ತರವಾದ ಜ್ಯೋತಿಷ್ಯ ಶಾಸ್ತ್ರವನ್ನ ರಚಿಸಿಕೊಟ್ಟಿದ್ದಾರೆ. ಆದರೆ ಇಂದು ಎಲ್ಲವೂ ವ್ಯವಹಾರವಾಗಿದೆ ಬಿಡಿ. ಹಣ ಹಾಗೂ ಹೆಸರು ಮಾಡುವ ಭರಾಟೆಯಲ್ಲಿ ಶಾಸ್ತ್ರದ ಮೂಲ ತತ್ವ ಮಾಯವಾಗಿದೆ. ಹಾಗಾದರೆ ಯಾವ ಗ್ರಹ ಯಾವ ತತ್ವಕ್ಕೆ ಅಧಿಪತ್ಯ ಹೊಂದಿದೆ..?

ಪಂಚಭೂತ ಅಧಿಪತ್ಯ

ಭೂತತ್ವಕ್ಕೆ ಅಧಿಪತಿ - ಬುಧ
ಜಲ ತತ್ವಕ್ಕೆ ಅಧಿಪತಿ - ಚಂದ್ರ-ಶುಕ್ರರು 
ಅಗ್ನಿ ತತ್ವಕ್ಕೆ ಅಧಿಪತಿ - ಸೂರ್ಯ-ಕುಜರು
ವಾಯು ತತ್ವಕ್ಕೆ ಅಧಿಪತಿ - ಶನಿ
ಆಕಾಶ ತತ್ವಕ್ಕೆ ಅಧಿಪತಿ - ಗುರು, 

ಹೀಗೆ ಒಂದೊಂದು ಗ್ರಹವೂ ಒಂದೊಂದು ತತ್ವವನ್ನು ವೃದ್ಧಿಸಿ, ಕ್ಷಯಿಸುವ ಶಕ್ತಿಯನ್ನು ಹೊಂದಿವೆ. ಮನುಷ್ಯ ಹುಟ್ಟಿದಾಗ ಯಾವ ಗ್ರಹಕ್ಕೆ ಹೆಚ್ಚು ಬಲವಿರುತ್ತದೋ ಆ ಗ್ರಹ ಆ ರೀತಿಯ ತತ್ವವನ್ನ ವೃದ್ಧಿಸುತ್ತದೆ. ಯಾವ ಗ್ರಹ ಬಲಹೀನವಾಗಿದೆಯೋ ಅದು ತನ್ನ ಬಲವನ್ನ ಕುಗ್ಗಿಸುತ್ತದೆ. ಹೀಗಾಗಿ ದೇಹದ ಪಂಚಭೂತ ತತ್ವವನ್ನು ಕಾಪಾಡಿಕೊಂಡರೆ ಗ್ರಹಗಳು ಬೀರುವ ಸಮಸ್ಯೆಗೆ ಪರಿಹಾರ ಸಿಕ್ಕಿದಹಾಗೇ ಅಲ್ಲವೇ..?


ಗೀತಾಸುತ

ಸಂಪರ್ಕ ಸಂಖ್ಯೆ : 9741743565 / 9164408090