ತನ್ನನ್ನು ಕಚ್ಚಿದ ಹಾವನ್ನು ಕೊಂದು ಸೇಡು ತೀರಿಸಿಕೊಂಡ ಟರ್ಕಿಯ 2 ವರ್ಷದ ಮಗು
ಟರ್ಕಿಯಲ್ಲಿ ಮಗುವನ್ನು ಹಾವು ಕಚ್ಚಿದ್ದು, ಆದರೆ ಬಾಲಕಿ ಚೇತರಿಸಿಕೊಂಡು ಆ ಹಾವಿಗೆ ತಿರುಗಿ ಕಚ್ಚಿದ್ದಾಳೆ ಎಂದು ವರದಿಯಾಗಿದೆ. ಮಂಡ್ಯದಲ್ಲಿ ತಾಯಿಯಿಂದ ಮಗು ಬಚಾವ್ ಆದ ಘಟನೆ ಬೆನ್ನಲ್ಲೇ ಈ ಘಟನೆ ನಡೆದಿದೆ.
ಟರ್ಕಿಯಲ್ಲಿ 2 ವರ್ಷದ ಮಗು ಹಾವನ್ನು ಕೊಂದು ಹಾಕಿದ್ದಾಳೆ. ಆ ಹಾವು ತನ್ನನ್ನು ಕಚ್ಚಿದೆ ಎಂಬ ಕಾರಣಕ್ಕೆ ಅದರ ವಿರುದ್ಧ ಪುಟ್ಟ ಬಾಲಕಿ ಸೇಡು ತೀರಿಸಿಕೊಂಡಿದ್ದಾಳೆ ಎಂದು ವರದಿಯಾಗಿದೆ. ತನ್ನನ್ನು ಕಚ್ಚಿದ ಹಾವಿಗೆ ಆಕೆ ತನ್ನ ಬಾಯಿಯಿಂದ ಬಲವಾಗಿ ಕಚ್ಚಿದ್ದಾಳೆ ಎಂದು ತಿಳಿದುಬಂದಿದೆ. ನ್ಯೂಸ್ವೀಕ್ ವರದಿಯ ಪ್ರಕಾರ ಟರ್ಕಿಯ ಕಾಂಟಾರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಆ ಪುಟ್ಟ ಬಾಲಕಿಯ ಮನೆಯ ಹಿಂಭಾಗ 20 ಇಂಚು ಉದ್ದದ ಹಾವು ಮಗುವನ್ನು ಕಚ್ಚಿದ್ದು, ಈ ಹಿನ್ನೆಲೆ ಆಕೆ ಕಿರುಚಿಕೊಂಡಿದ್ದನ್ನು ನೆರೆಹೊರೆಯವರು ಕೇಳಿಸಿಕೊಂಡಿದ್ದಾರೆ. ಆದರೆ, ಅವರು ಆ ಬಾಲಕಿಯ ಮನೆಗೆ ಬರುವಷ್ಟರಲ್ಲಿ ಹಾವನ್ನು ಆ ಪುಟ್ಟ ಬಾಲಕಿ ಕಚ್ಚಿದ್ದಾಳೆ. ಅಲ್ಲದೆ, ಆಕೆಯ ಹಲ್ಲಿ ನಡುವೆಯೇ ಆ ಹಾವು ಇತ್ತು ಹಾಗೂ ಮಗುವಿನ ತುಟಿಯಲ್ಲಿ ಅದನ್ನು ಕಚ್ಚಿದ ಗುರುತು ಇತ್ತು ಎಂಬುದನ್ನೂ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಇನ್ನು, ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, 24 ಗಂಟೆಗಳ ಬಳಿಕ ಆಕೆ ಚೇತರಿಸಿಕೊಂಡಿದ್ದಾಳೆ. ಆದರೆ ಗಾಯಗೊಂಡಿದ್ದ ಹಾವು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಹಾವಿನಿಂದ ಮಗನನ್ನು ಕಾಪಾಡಿದ ತಾಯಿ, ವಿಡಿಯೋ ವೈರಲ್!
ಬಾಲಕಿಯನ್ನು ಕಚ್ಚಿದ ಆ ಹಾವು ಯಾವ ಪ್ರಬೇಧ ಎಂಬುದು ತಿಳಿದುಬಂದಿಲ್ಲವಾದರೂ, ಟರ್ಕಿಯ 45 ಪ್ರಬೇಧದ ಹಾವುಗಳಲ್ಲಿ 12 ಪ್ರಬೇಧಗಳು ವಿಷಕಾರಿ ಎಂದು ತಿಳಿದುಬಂದಿದೆ. ಆದರೆ, ಪುಟ್ಟ ಬಾಲಕಿ ಸದ್ಯ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆ, ಆಕೆಗೆ ಕಚ್ಚಿದ ಆ ಹಾವು ವಿಷಕಾರಿಯಲ್ಲದಿರಬಹುದು ಎಂದೂ ಹೇಳಿದ್ದಾರೆ. ಇನ್ನು, ಘಟನೆ ನಡೆದಾಗ ಬಾಲಕಿಯ ತಂದೆ ಮೆಹ್ಮೆತ್ ಎರ್ಕಾನ್ ಕೆಲಸಕ್ಕೆ ಹೋಗಿದ್ದರು. ಹಾಗೂ, ಹಾವು ಮಗುವನ್ನು ಕಚ್ಚಿದ ಬಳಿಕವೂ ನಿಮ್ಮ ಮಗಳು ಅದರ ಜೊತೆಗೆ ಆಟವಾಡುತ್ತಿದ್ದಳು. ನಂತರ, ಆ ಹಾವನ್ನೇ ಆಕೆ ಕಚ್ಚಿದ್ದಾಳೆ ಎಂದು ನೆರೆಹೊರೆಯವರು ಆಕೆಯ ತಂದೆಗೆ ಹೇಳಿದ್ದಾರೆ.
ಇತ್ತೀಚೆಗಷ್ಟೇ, ರಾಜ್ಯದ ಮಂಡ್ಯದಲ್ಲಿ ತಾಯಿ ಹಾವು ಕಡಿತಕ್ಕೆ ಒಳಗಾಗುತ್ತಿದ್ದ ಮಗುವನ್ನು ಬಚಾವ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಿಸಿ ಕ್ಯಾಮೆರಾದಲ್ಲಿ ಈ ಘಟನೆ ಸೆರೆಯಾಗಿತ್ತು. ಬಾಲಕ ಇನ್ನೇನು ಹಾವಿನ ಮೇಲೆ ಕಾಲಿಡಬೇಕು ಅನ್ನುವಷ್ಟರಲ್ಲಿ ತಾಯಿ ಆತನನ್ನು ಹಿಂದಕ್ಕೆ ಎಳೆದುಕೊಂಡು ಬಚಾವ್ ಮಾಡಿದ್ದರು. ಕೆಲವೇ ಸೆಕೆಂಡುಗಳ ಅಂತರದಲ್ಲಿ ಈ ಘಟನೆ ನಡೆದಿತ್ತು. ಇನ್ನೇನು ಹೆಡೆ ಎತ್ತಿ ಕಚ್ಚಲು ಬರುವ ಹಾವಿನಿಂದ ಕಾಪಾಡುವಲ್ಲಿ ತಾಯಿ ಯಶಸ್ವಿಯಾಗಿದ್ದಾಳೆ. ಕ್ಷಣಮಾತ್ರದಲ್ಲಿ ಹಾವಿನಿಂದ ಮಗು ಪಾರಾಗಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ವೈದ್ಯನಾಥಪುರದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ದೈತ್ಯ ಹಾವಿನೊಂದಿಗೆ ಯುವಕನ ಚೆಲ್ಲಾಟ: ಫೋಟೋಗೆ ಸಖತ್ ಪೋಸ್
ಈ ವಿಡಿಯೋದ ಆರಂಭದಲ್ಲಿ ಮಗು ಹಾಗೂ ತಾಯಿ ಮನೆಯಿಂದ ಹೊರಗೆ ಬರುತ್ತಿದ್ದರು. ನಂತರ, ಬಾಲಕ ಮಾಮೂಲಾಗಿ ನಡೆಯುತ್ತಿದ್ದ, ಆ ವೇಳೆ ಹಾವು ಹಿಂದಕ್ಕೆ ಬಂದು ಹೆಡೆ ಎತ್ತಲು ಹೋಗಿದೆ. ಘಟನೆಯಿಂದ ನಮಗೆಲ್ಲ ಭಯವಾಗಿತ್ತು. ಅದೃಷ್ಟವಶಾತ್ ಯಾವುದೇ ಸಮಸ್ಯೆ ಆಗಲಿಲ್ಲ. ಈ ಘಟನೆ ನಡೆದಿದ್ದು ನಮ್ಮ ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿರುವ ಮನೆಯಲ್ಲಿ. ನನ್ನ ಪತ್ನಿ ಪ್ರಿಯಾ ನನ್ನ ಮಗನನ್ನ ಕಾಪಾಡಿದ್ದಾರೆ. ಘಟನೆಯಿಂದ ನನ್ನ ಪತ್ನಿಗೆ ತುಂಬ ಭಯವಾಗಿತ್ತು. ದೇವರ ದಯೆಯಿಂದ ನನ್ನ ಮಗು ಬದುಕಿದೆ. ದೇವರ ಹಾವು ಆಗಿರುವ ಕಾರಣಕ್ಕೆ ಏನು ಮಾಡಿಲ್ಲ ಎಂದು ಮಗು ತಂದೆ ವಿಷ್ಣು ಪ್ರಸಾದ್ ಹೇಳಿಕೆ ನೀಡಿದ್ದಾರೆ.ಈ ವಿಡಿಯೋವನ್ನು ನೀವು ನೋಡಿಲ್ಲದಿದ್ದರೆ. ಇಲ್ಲಿ ನೋಡಿ..
ಒಟ್ಟಾರೆ, ಈ ಎರಡೂ ಪ್ರಕರಣಗಳಲ್ಲಿ ಮಕ್ಕಳು ಬಚಾವಾಗಿದ್ದಾರೆ ಎಂಬುದು ಮಾತ್ರ ಸಂತಸದ ಸಂಗತಿ.